ಲುಧಿಯಾನ (ಪಂಜಾಬ್): ವಂಚನೆ ಆರೋಪ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಹಾಗೂ ಸಮಾಜ ಸೇವಕ ಸೋನು ಸೂದ್ ವಿರುದ್ಧ ಪಂಜಾಬ್ ನ್ಯಾಯಾಲಯ ಅರೆಸ್ಟ್ ವಾರಂಟ್ ಹೊರಡಿಸಿದೆ. ಲುಧಿಯಾನ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ರಮಣ್ಪ್ರೀತ್ ಕೌರ್ ಅವರು ಈ ವಾರಂಟ್ ಹೊರಡಿಸಿದ್ದಾರೆ.
ಲುಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ಎಂಬುವವರ ವಿರುದ್ಧ 10 ಲಕ್ಷ ರೂಪಾಯಿ ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಕಲಿ ರಿಜಿಕಾ ಕಾಯ್ನ್ನಲ್ಲಿ ಹೂಡಿಕೆ ಮಾಡುವಂತೆ ಆಮಿಷ ಒಡ್ಡಲಾಗಿದೆ, ಇಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಸಾಕ್ಷ್ಯ ಹೇಳಲು ನಟ ಸೋನು ಸೂದ್ ಅವರನ್ನು ನ್ಯಾಯಾಲಯಕ್ಕೆ ಕರೆಯಲಾಗಿತ್ತು. ಆದರೆ ಅವರು ಹಾಜರಾಗಲು ವಿಫಲರಾದ ಕಾರಣ ಅರೆಸ್ಟ್ ವಾರಂಟ್ ಹೊರಡಿಸಲಾಯಿತು. ಲುಧಿಯಾನ ನ್ಯಾಯಾಲಯವು ತನ್ನ ಆದೇಶದಲ್ಲಿ, ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಓಶಿವಾರಾ ಪೊಲೀಸ್ ಠಾಣೆಯ ಅಧಿಕಾರಿಗೆ ಸೋನು ಸೂದ್ ಅವರನ್ನು ಬಂಧಿಸುವಂತೆ ನಿರ್ದೇಶಿಸಿದೆ.
ಆದೇಶದಲ್ಲಿ, "R/O H.NO 605/606 ಕ್ಯಾಸಾಬ್ಲಾಂಕ್ ಅಪಾರ್ಟ್ಮೆಂಟ್ನ ನಿವಾಸಿ ಸೋನು ಸೂದ್ (S/o, W/o, D/o) ಅವರಿಗೆ ಸಮನ್ಸ್ ಅಥವಾ ವಾರಂಟ್ ಅನ್ನು ಸರಿಯಾಗಿ ನೀಡಲಾಗಿದೆ. ಆದರೆ, ಅವರು ಹಾಜರಾಗಲು ವಿಫಲರಾಗಿದ್ದಾರೆ. ಸೋನು ಸೂದ್ ಅವರನ್ನು ಬಂಧಿಸಿ ನ್ಯಾಯಾಲಯದ ಎದುರು ಕರೆತರಲು ಆದೇಶಿಸಲಾಗಿದೆ" ಎಂದಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 10 ರಂದು ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಮಹಾಕುಂಭಮೇಳದಲ್ಲಿ 'ಕೆಜಿಎಫ್' ನಟಿ ಶ್ರೀನಿಧಿ ಶೆಟ್ಟಿ ಪವಿತ್ರ ಸ್ನಾನ
ಸೋನು ಸೂದ್ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಕಂಪನಿಗೆ ಸಂಬಂಧಿಸಿದ ವಂಚನೆ ಪ್ರಕರಣ ಇದಾಗಿದೆ. ಈ ಹಿನ್ನೆಲೆ ನಟನಿಗೆ ನಿನ್ನೆ, ಲುಧಿಯಾನ ಜಿಲ್ಲಾ ನ್ಯಾಯಾಲಯವು ನೋಟಿಸ್ ನೀಡಿ, ಸಮನ್ಸ್ ಜಾರಿ ಮಾಡಿದೆ. ವಕೀಲ ರಾಜೇಶ್ ಖನ್ನಾ ವಿಷಯವನ್ನು ದೃಢಪಡಿಸಿದ್ದಾರೆ. ಅವರು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 10ರಂದು ನಡೆಯಲಿದೆ.
ಇದನ್ನೂ ಓದಿ: ಮಹಿಳಾ ಅಭಿಮಾನಿಗೆ ಮತ್ತೆ ಮುತ್ತಿಟ್ಟ ಗಾಯಕ ಉದಿತ್ ನಾರಾಯಣ್: ವಿಡಿಯೋ ವೈರಲ್
ಬಹುಭಾಷಾ ನಟ ಸೋನು ಸೂದ್ ಅವರು ತಮ್ಮ ಸಮಾಜ ಸೇವೆಗಳಿಂದಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಸೂದ್ ಚಾರಿಟಿ ಫೌಂಡೇಶನ್ ಮೂಲಕ ಆಂಧ್ರಪ್ರದೇಶ ಸರ್ಕಾರಕ್ಕೆ ನಾಲ್ಕು ಆಂಬ್ಯುಲೆನ್ಸ್ಗಳನ್ನು ಡೊನೇಟ್ ಮಾಡಿ ಗಮನ ಸೆಳೆದಿದ್ದರು. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ನಟನಿಗೆ ಧನ್ಯವಾದ ಅರ್ಪಿಸಿದ್ದರು. ಅಂದು ಮಾತನಾಡಿದ್ದ ನಟ, ಜನರಿಗೆ ಸಹಾಯ ಮಾಡುವ ಮನೋಭಾವ ಕೋವಿಡ್ ಸಂದರ್ಭ ಶುರುವಾಯಿತು. ಇದನ್ನು ಮುಂದುವರಿಸಲು ಬಯಸುತ್ತೇನೆ ಎಂದು ತಿಳಿಸಿದ್ದರು.