ಬೆಳಗಾವಿ: ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಇಂದು ಬೆಳಗ್ಗಿನ ಜಾವ ಮಧ್ಯ ಪ್ರದೇಶದ ಇಂಧೋರ್ ಜಿಲ್ಲೆಯ ಮಾಣಪುರ ಬಳಿ ಟೆಂಪೋ ಟ್ರಾವೆಲರ್, ಟ್ರಕ್ ಹಾಗೂ ಬೈಕ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದಾರೆ.
ಬಸವನಗಲ್ಲಿಯ ಸಾಗರ್ ಶಾಪುರಕರ್ (ಟಿಟಿ ಚಾಲಕ), ಕ್ರಾಂತಿ ನಗರದ ನಿವಾಸಿ ನೀತಾ ಬಡಮಂಜಿ, ಶಿವಾಜಿನಗರದ ಸಂಗೀತಾ ಮೇತ್ರಿ, ವಡಗಾವಿಯ ಜ್ಯೋತಿ ಖಾಂಡೇಕರ್ ಮೃತರು.
ಜನವರಿ 24ರಂದು ಟಿಟಿ ವಾಹನದ ಮೂಲಕ 20 ಜನರ ತಂಡವು ಬೆಳಗಾವಿಗೆ ಪ್ರಯಾಣ ಬೆಳೆಸಿತ್ತು. ಪ್ರಯಾಗ್ರಾಜ್ನಿಂದ ವಾಪಸಾಗುವಾಗ ಅಪಘಾತ ಸಂಭವಿಸಿದೆ. 16 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಮೃತರ ಕುಟುಂಬಸ್ಥರು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರ ಕಚೇರಿಗೆ ಆಗಮಿಸಿದ್ದು, ಮೃತದೇಹಗಳನ್ನು ಬೆಳಗಾವಿಗೆ ಕರೆತರುವ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಮೇಯರ್ ಶಿವಾಜಿ ಸುಂಠಕರ್, "ಬೆಳಗಾವಿಯ ನಾಲ್ವರು ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಅಪಘಾತ ಸಂಭವಿಸಿರುವ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಮಾಹಿತಿ ನೀಡುತ್ತಿದ್ದಂತೆ ಕೂಡಲೇ ಅವರು ಅಲ್ಲಿನ ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಅಲ್ಲಿನ ಬಿಜೆಪಿ ಜಿಲ್ಲಾಧ್ಯಕ್ಷ ಸುಮಿತ್ ಮಿಶ್ರಾ ನೀಡಿದ ಮಾಹಿತಿ ಪ್ರಕಾರ ಟಿಟಿ ವಾಹನದಲ್ಲಿದ್ದ ಬೆಳಗಾವಿ ನಾಲ್ವರು ಮತ್ತು ಬೈಕ್ನಲ್ಲಿ ಹೋಗುತ್ತಿದ್ದ ಇಂಧೋರ್ನ ಇಬ್ಬರು ಮೃತಪಟ್ಟಿದ್ದಾರೆ. ಬೆಳಗಾವಿಯ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ" ಎಂದರು.
"ಚಾಲಕ ಮತ್ತು ಕ್ಲೀನರ್ ಸೇರಿ ಒಟ್ಟು 20 ಜನರು ಮಹಾ ಕುಂಭಮೇಳದಿಂದ ಹಿಂದಿರುಗುತ್ತಿದ್ದರು. ಅದರಲ್ಲಿ ನಮ್ಮ ಸಹೋದರಿ ನೀತಾ ಬಡಮಂಜಿ ಕೂಡ ಮೃತರಾಗಿದ್ದಾರೆ. ಈ ಬಗ್ಗೆ ಅಲ್ಲಿಂದ ಫೋನ್ ಕರೆ ಮಾಡಿ ತಿಳಿಸಿದ್ದಾರೆ" ಎಂದು ಮೃತ ನೀತಾ ಸಹೋದರ ರಮೇಶ್ ಬಡಮಂಜಿ ಮಾಹಿತಿ ನೀಡಿದರು.
ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ಮಂದಾ ನೇವಗಿ ಮಾತನಾಡಿ, "ನಾಲ್ವರ ಮೃತದೇಹಗಳನ್ನು ಬೆಳಗಾವಿಗೆ ತರುವ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಅವರನ್ನು ವಿಮಾನದ ಮೂಲಕ ಬೆಳಗಾವಿಗೆ ಕರೆತರಬೇಕು" ಎಂದು ಆಗ್ರಹಿಸಿದರು.
ಇಂಧೋರ್ ಜಿಲ್ಲಾಡಳಿತದೊಂದಿಗೆ ಸಂಪರ್ಕ: "ಪ್ರಯಾಗರಾಜ್ನ ಕುಂಭಮೇಳದಲ್ಲಿ ಪಾಲ್ಗೊಂಡು ಮರಳುತ್ತಿದ್ದ ವೇಳೆ ಮಧ್ಯ ಪ್ರದೇಶದ ಇಂಧೋರ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳಗಾವಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಈ ಕುರಿತು ಇಂಧೋರ್ ಜಿಲ್ಲಾಡಳಿತವನ್ನು ಸಂಪರ್ಕಿಸಿ, ಗಾಯಾಳುಗಳ ಚಿಕಿತ್ಸೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿದ್ದೇನೆ. ಅಲ್ಲದೆ, ಮೃತಪಟ್ಟವರ ಬಗ್ಗೆಯೂ ವಿವರ ಪಡೆದಿದ್ದು, ಸಾವಿಗೀಡಾದ ನಾಲ್ವರ ಮೃರಣೋತ್ತರ ಪರೀಕ್ಷೆ ನಡೆದ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಿದ್ದಾರೆ" ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಕರ್ನಾಟಕದ ಇಬ್ಬರು ಸೇರಿ ನಾಲ್ವರು ಸಾವು