ಕರ್ನಾಟಕ

karnataka

ಮೂಡುಗಲ್ಲು ಕೇಶವನಾಥೇಶ್ವರನ ದರ್ಶನ ಪಡೆದ ರಿಷಬ್​​, ಜೂ.ಎನ್​ಟಿಆರ್​​, ಪ್ರಶಾಂತ್​ ನೀಲ್​ ಕುಟುಂಬ: ತಮ್ಮೂರು ಪರಿಚಯಿಸಿದ ಶೆಟ್ರು - Superstars Temple Visit

By ETV Bharat Karnataka Team

Published : Sep 2, 2024, 5:06 PM IST

ಟಾಲಿವುಡ್​ ಸೂಪರ್​ ಸ್ಟಾರ್ ಜೂನಿಯರ್ ಎನ್​ಟಿಆರ್ ಕುಟುಂಬ ಕಳೆದೆರಡು ದಿನಗಳಲ್ಲಿ ರಾಜ್ಯದ ಕರಾವಳಿ ಭಾಗದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಟ್ಟಿದ್ದಾರೆ. ಇವರಿಗೆ ಕನ್ನಡದ ಖ್ಯಾತ ನಟ ರಿಷಬ್​ ಶೆಟ್ಟಿ ಮತ್ತು ಜನಪ್ರಿಯ ನಿರ್ದೇಶಕ ಪ್ರಶಾಂತ್​​ ನೀಲ್​​ ಸಾಥ್​ ನೀಡಿದ್ದಾರೆ. ಸಿನಿಗಣ್ಯರು ಮೂಡುಗಲ್ಲು ಕೇಶವನಾಥೇಶ್ವರನ ದರ್ಶನ ಪಡೆದಿದ್ದು, ಇಂದು ಹೊಸದಾಗಿ ವಿಡಿಯೋವೊಂದನ್ನು ಡಿವೈನ್​​​ ಸ್ಟಾರ್​​ ಹಂಚಿಕೊಂಡಿದ್ದಾರೆ.

Superstars Temple Visit
ದೇವಸ್ಥಾನಗಳಿಗೆ ಭೇಟಿ ಕೊಟ್ಟ ಸೂಪರ್​ ಸ್ಟಾರ್​ಗಳು (ETV Bharat)

ಭಾರತೀಯ ಚಿತ್ರರಂಗದ ಖ್ಯಾತನಾಮರು ಕರಾವಳಿಯಲ್ಲಿ ಧಾರ್ಮಿಕ ಪ್ರವಾಸ ಕೈಗೊಂಡಿದ್ದಾರೆ. ಶನಿವಾರದಿಂದ ಸೋಷಿಯಲ್​​​ ಮೀಡಿಯಾಗಳಲ್ಲಿ ರಿಷಬ್ ಶೆಟ್ಟಿ​​, ಜೂ. ಎನ್​ಟಿಆರ್​​, ಪ್ರಶಾಂತ್​ ನೀಲ್​ ಕುಟುಂಬದ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡುತ್ತಿವೆ. ಇಂದು ಹೊಸದಾಗಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಸ್ಯಾಂಡಲ್​ವುಡ್​ನ ಡಿವೈನ್​​​ ಸ್ಟಾರ್​​ ಗಮನ ಸೆಳೆದಿದ್ದಾರೆ.

ಹೌದು, ಕನ್ನಡ ಚಿತ್ರರಂಗದ ಜನಪ್ರಿಯ ನಟ - ನಿರ್ದೇಶಕ - ನಿರ್ಮಾಪಕ ರಿಷಬ್​ ಶೆಟ್ಟಿ ಅವರಿಂದು ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​​ ಅಕೌಂಟ್​ನಲ್ಲಿ ದೇವಸ್ಥಾನ ಭೇಟಿಯ ವಿಡಿಯೋ ಹಂಚಿಕೊಂಡು, ''ಮೂಡುಗಲ್ಲು ಕೇಶವನಾಥೇಶ್ವರನ ದರ್ಶನ ಪಡೆದಾಗ..'' ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಸಿನಿಗಣ್ಯರು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡ ತಂಡವೊಂದು ಕೇಶವನಾಥೇಶ್ವರ ಸನ್ನಿಧಿಗೆ ಭೇಟಿ ಕೊಡುತ್ತಿರೋದನ್ನು ಕಾಣಬಹುದು. ಗುಹೆಯೊಳಗೆ ಪ್ರವೇಶಿಸಿ ದೇವರ ದರ್ಶನ ಪಡೆದಿದ್ದಾರೆ. ಕೇಶವನಾಥೇಶ್ವರನಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು.

ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ, ಆರ್​ಆರ್​ಆರ್ ಸ್ಟಾರ್​ ಜೂನಿಯರ್ ಎನ್​ಟಿಆರ್, ಕೆಜಿಎಫ್​ ಡೈರೆಕ್ಟರ್​​​ ಪ್ರಶಾಂತ್​ ನೀಲ್​​ ತಮ್ಮ ಪತ್ನಿಯರೊಂದಿಗೆ ಆಗಮಿಸಿ ಗಮನ ಸೆಳೆದಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡು ಸೂಪರ್ ಹಿಟ್​ ಆಗಿರುವ ಲಾಫಿಂಗ್​​ ಬುದ್ಧ ಚಿತ್ರದ ನಾಯಕ ನಟ ಪ್ರಮೋದ್​ ಶೆಟ್ಟಿ ಕೂಡ ಜೊತೆಗಿದ್ದರು. ಗುಹೆಯೊಳಗಿನ ನೀರಿನ ಮಾರ್ಗದ ಮೂಲಕವೇ ಸಾಗಿ ದೇವರ ದರ್ಶನ ಪಡೆದರು.​​ ಒಟ್ಟಾರೆ ಕಾಂತಾರ ಸ್ಟಾರ್​ ರಿಷಬ್​ ಶೆಟ್ಟಿ ತಮ್ಮ ಹುಟ್ಟೂರಿನಲ್ಲಿ ಟಾಲಿವುಡ್​​ ಸೂಪರ್​ ಸ್ಟಾರ್​ ಅವರನ್ನು ಸುತ್ತಾಡಿಸುವ ಮೂಲಕ ನೆಟ್ಟಿಗರಿಗೆ ಕರಾವಳಿ ಸಂಸ್ಕೃತಿಯನ್ನು ಪರಿಚಯಿಸಿದ್ದಾರೆ.

ಇದನ್ನೂ ಓದಿ:ಉಡುಪಿ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಜೂ.​ಎನ್​​ಟಿಆರ್; ಅಮ್ಮನ ಆಸೆ ಈಡೇರಿಸಿದ ಆರ್​ಆರ್​ಆರ್​ ಸ್ಟಾರ್​ - Jr NTR Visits Udupi Temple

ಶನಿವಾರದಂದು ಈ ಎಲ್ಲರೂ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದುಕೊಂಡಿದ್ದರು. ಅಂದು ಫೋಟೋಗಳನ್ನು ಹಂಚಿಕೊಂಡಿದ್ದ ಜೂ.ಎನ್​ಟಿಆರ್​ ನನ್ನನ್ನು ಕುಂದಾಪುರಕ್ಕೆ ಕರೆತಂದು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೇವರ ದರ್ಶನ ಮಾಡಿಸುವ ನನ್ನಮ್ಮನ ಬಹುಕಾಲದ ಕನಸು ನನಸಾಗಿದೆ ಎಂದು ಬರೆದುಕೊಂಡಿದ್ದರು. ಜೊತೆಗೆ ಸಾಥ್ ನೀಡಿರುವ ರಿಷಬ್​ ಮತ್ತು ನೀಲ್​ ಅವರಿಗೆ ಕೃತಘ್ಞತೆ ಸಲ್ಲಿಸಿದ್ದರು.

ಭಾನುವಾರ ಮಧ್ಯಾಹ್ನದ ವೇಳೆಗೆ ಕೊಲ್ಲೂರಿಗೆ ಭೇಟಿ ಕೊಟ್ಟರು. ಬಳಿಕ 'ಮೂಡುಗಲ್ಲು ಕೇಶವನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಇದನ್ನೂ ಓದಿ:ಕರಾವಳಿಯಲ್ಲಿ ಎರಡು ದಿನ ಸ್ಟಾರ್ ನಟರ ಪ್ರವಾಸ; ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ ಜೂ. ಎನ್​ಟಿಆರ್ - Jr NTR offered special pooja

ಧಾರ್ಮಿಕ ಪ್ರವಾಸದ ಸಂದರ್ಭ ಮೀಟೂ ಚರ್ಚೆ, ದರ್ಶನ್ ಕುರಿತಾದ ಪ್ರಶ್ನೆಗಳು ಜೂ.ಎನ್​ಟಿಆರ್​ಗೆ ಎದುರಾದವು. ಈ ಪ್ರಶ್ನೆಗಳಿಂದ ಅಂತರ ಕಾಯ್ದುಕೊಂಡ ನಟ ರಿಷಬ್​ ಶೆಟ್ಟಿ ನಿರ್ಮಾಣದ ಮತ್ತು ಪ್ರಮೋದ್​ ಶೆಟ್ಟಿ ನಟನೆಯ 'ಲಾಫಿಂಗ್ ಬುದ್ಧ' ಚಿತ್ರಕ್ಕೆ ಶುಭ ಹಾರೈಸಿ ಸಿನಿಮಾ ವೀಕ್ಷಿಸಲಿದ್ದೇನೆ ಎಂದಷ್ಟೇ ತಿಳಿಸಿದರು.

ABOUT THE AUTHOR

...view details