ಕರ್ನಾಟಕ

karnataka

ಬಟ್ಟೆ ಚಿಕ್ಕದು, ಕೊಳಕಾಗಿದೆ ಎಂದು ದಲಿತ ವಿದ್ಯಾರ್ಥಿನಿ ಮೇಲೆ ಮೂವರು ಶಿಕ್ಷಕರಿಂದ ಹಲ್ಲೆ ಆರೋಪ: ಕೇಸ್​ ದಾಖಲು - TEACHER BEATING DALIT GIRL STUDENT

By ETV Bharat Karnataka Team

Published : 5 hours ago

ಶಾಲಾ ಬಟ್ಟೆ ಚಿಕ್ಕದು, ಕೊಳಕಾಗಿದೆ ಎಂದು ತನ್ನ ಮೇಲೆ ಮೂವರು ಶಿಕ್ಷಕರು ಹಲ್ಲೆ ಮಾಡಿದ್ದಾರೆ ಎಂದು ದಲಿತ ಸಮುದಾಯದ ವಿದ್ಯಾರ್ಥಿನಿಯೊಬ್ಬರು ಆರೋಪಿಸಿ, ಪೊಲೀಸ್​ ದೂರು ನೀಡಿದ ಘಟನೆ ಬಿಹಾರದಲ್ಲಿ ನಡೆದಿದೆ.

ದಲಿತ ವಿದ್ಯಾರ್ಥಿನಿ ಮೇಲೆ ಮೂವರು ಶಿಕ್ಷಕರಿಂದ ಹಲ್ಲೆ ಆರೋಪ
ದಲಿತ ವಿದ್ಯಾರ್ಥಿನಿ ಮೇಲೆ ಮೂವರು ಶಿಕ್ಷಕರಿಂದ ಹಲ್ಲೆ ಆರೋಪ (ETV Bharat)

ರೋಹ್ತಾಸ್ (ಬಿಹಾರ):ಶಾಲಾ ಉಡುಗೆ ಚಿಕ್ಕದಾಗಿದೆ, ಸ್ವಚ್ಛತೆ ಕಾಪಾಡಿಲ್ಲ ಎಂಬ ಕಾರಣಕ್ಕಾಗಿ ವಿದ್ಯಾರ್ಥಿನಿಯ ಮೇಲೆ ಶಿಕ್ಷಕರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ತನ್ನನ್ನು ಮೂವರು ಶಿಕ್ಷಕರು ಥಳಿಸಿದ್ದಾರೆ ಎಂದು ಆಕೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಬಿಹಾರದ ರೋಹ್ತಾಸ್​​ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿನಿ ದಲಿತ ಸಮುದಾಯಕ್ಕೆ ಸೇರಿದ್ದು, ಮೂವರು ಶಿಕ್ಷಕರ ಮೇಲೆ ಕ್ರಮಕ್ಕೆ ಆಗ್ರಹಿಸಲಾಗಿದೆ. ವಿದ್ಯಾರ್ಥಿನಿಯ ತಲೆಗೆ ಪೆಟ್ಟಾಗಿದ್ದು, ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪವೇನು?:ರೋಹ್ತಾಸ್​​ ಜಿಲ್ಲೆಯ ಕಾರ್ಘರ್ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಮೂವರು ಶಿಕ್ಷಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಶಾಲೆಯಲ್ಲಿ ಎಲ್ಲ ಮಕ್ಕಳ ಮುಂದೆ ತನ್ನನ್ನು ಅವಮಾನ ಮಾಡಿ, ಶಿಕ್ಷಕರು ಥಳಿಸಿದ್ದಾರೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ಅಲ್ಲದೇ, ತನ್ನ ಜಾತಿಯನ್ನು(ದಲಿತ) ನಿಂದಿಸುವ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದಾಳೆ.

ತನ್ನದು ಬಡಕುಟುಂಬ. ಹೀಗಾಗಿ, ಒಂದೇ ಬಟ್ಟೆಯನ್ನು ಧರಿಸಿ ಶಾಲೆಗೆ ಬರುತ್ತೇನೆ. ದೈಹಿಕ ಎತ್ತರ ಹೆಚ್ಚಾದ ಕಾರಣ ಬಟ್ಟೆ ಸ್ವಲ್ಪ ಚಿಕ್ಕದಾಗಿದೆ. ಆದರೆ, ಶಾಲೆಯ ಮುಖ್ಯ ಶಿಕ್ಷಕ, ಸಹಾಯಕ ಶಿಕ್ಷಕ ಮತ್ತು ಇನ್ನೊಬ್ಬ ಶಿಕ್ಷಕ ತನ್ನನ್ನು ನಿಂದಿಸಿ, ಅಸ್ವಚ್ಚತೆಯ ಕಾರಣ ನೀಡಿ ಹಲ್ಲೆ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾಳೆ.

ಬಾಲಕಿಯನ್ನು ಹೊಡೆದು ಶಾಲೆಯಿಂದ ಹೊರ ಹಾಕಲಾಗಿದೆ. 3 ಗಂಟೆಗೆಯ ನಂತರ ಬಾಲಕಿ ಮನೆಗೆ ಹಿಂತಿರುಗಿದ್ದಾಳೆ. ನಾನೇ ಆಕೆಯನ್ನು ಮನೆಗೆ ಕರೆತಂದಿದ್ದೇನೆ. ಮತ್ತೆ ಶಾಲೆಗೆ ಹೋಗುವುದಿಲ್ಲ ಎಂದು ಆಕೆ ತಿಳಿಸಿದಾಗ, ನಡೆದ ಘಟನೆಯನ್ನು ಬಗ್ಗೆ ತಿಳಿದುಕೊಂಡೆ. ಶಾಲಾ ಉಡುಗೆ ತುಂಬಾ ಚಿಕ್ಕದಾಗಿದೆ. ಸ್ವಚ್ಚತೆ ಕಾಪಾಡಿಲ್ಲ ಎಂದು ಶಿಕ್ಷಕರು ಥಳಿಸಿದ್ದಾರೆ. ಇದರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ವಿದ್ಯಾರ್ಥಿನಿಯ ಅಜ್ಜಿ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್​ ಅಧಿಕಾರಿ ವಿಜಯ್ ಕುಮಾರ್, ವಿದ್ಯಾರ್ಥಿಯ ಕುಟುಂಬದವರು ಲಿಖಿತ ದೂರು ನೀಡಿದ್ದಾರೆ. ಪೊಲೀಸರು ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದರು.

ಆರೋಪ ನಿರಾಕರಿಸಿದ ಶಿಕ್ಷಕ:ತಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯ ಶಿಕ್ಷಕ ಪ್ರತಿಕ್ರಿಯಿಸಿದ್ದು, ಬಾಲಕಿಯನ್ನು ಸ್ವಚ್ಛತೆಯ ಬಗ್ಗೆ ಪ್ರಶ್ನಿಸಲಾಗಿತ್ತು. ಆಕೆಯ ಮೇಲೆ ಹಲ್ಲೆ ಮಾಡಿದ್ದು ಸುಳ್ಳು ಎಂದು ಆರೋಪ ನಿರಾಕರಿಸಿದ್ದಾರೆ.

ಇದನ್ನೂ ಓದಿ:ದೆಹಲಿ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣ ಸ್ವೀಕಾರ: ಮೂರನೇ 'ಮಹಿಳಾ ಸಿಎಂ' ಅಭಿದಾನ - Atishi takes oath

ABOUT THE AUTHOR

...view details