ನವದೆಹಲಿ: 8ನೇ ಬಜೆಟ್ ಮಂಡಿಸಲು ಸಿದ್ದವಾಗಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧುಬನಿ ಕಲೆಯ ಸೀರೆ ಉಡುವ ಮೂಲಕ ಪದ್ಮ ಪ್ರಶಸ್ತಿ ಪುರಸ್ಕೃತರಾದ ದುಲಾರಿ ದೇವಿ ಅವರಿಗೆ ಗೌರವ ಸಮರ್ಪಣೆ ಮಾಡಿದ್ದಾರೆ.
2021ರಲ್ಲಿ ದುಲಾರಿ ದೇವಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭ್ಯವಾಗಿತ್ತು. ಮಧುಬನಿ ಕಲೆಯ ಕೇಂದ್ರವಾಗಿರುವ ಮಿಥಿಲಾ ಆರ್ಟ್ ಇನ್ಸಿಟಿಟ್ಯೂಟ್ಗೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿದಾಗ ದುಲಾರಿ ದೇವಿ ಅವರನ್ನು ಭೇಟಿಯಾಗಿ, ಬಿಹಾರದ ಮಧುಬನಿ ಕಲೆ ಕುರಿತು ಆತ್ಮೀಯ ಚರ್ಚೆ ನಡೆಸಿದ್ದರು. ಈ ವೇಳೆ, ದುಲಾರಿ ದೇವಿ ಅವರಿಗೆ ಬಜೆಟ್ ದಿನದಂದು ಉಡುವಂತೆ ಕೇಳಿ ಮಧುಬನಿ ಕಲೆಯ ಸೀರೆಯನ್ನು ಉಡುಗೊರೆ ನೀಡಿದ್ದರು.
ಸಾಂಪ್ರದಾಯಿಕ ಚೀಲದಲ್ಲಿ ಟ್ಯಾಬ್ಲೆಟ್: ಈಗಾಗಲೇ ಪೇಪರ್ಲೆಸ್ ಮೊರೆ ಹೋಗಿರುವ ವಿತ್ತ ಸಚಿವರು ಡಿಜಿಟಲ್ ಬಜೆಟ್ ಪ್ರತಿ ಓದಲಿದ್ದಾರೆ. ಈ ಪ್ರತಿ ಹೊಂದಿದ ಟ್ಯಾಬ್ಲೆಟ್ ಅನ್ನು ಸಾಂಪ್ರದಾಯಿಕವಾಗಿ ಬಹು ಖಾತಾ ಶೈಲಿಯ ಪೌಚ್ (ಬ್ಯಾಗ್)ನಲ್ಲಿ ಮುಚ್ಚಿ ಕೈಯಲ್ಲಿ ಹಿಡಿದಿದ್ದಾರೆ.
ಮೊದಲ ಬಾರಿಗೆ ಪೂರ್ಣ ಕಾಲಿಕ ಮಹಿಳಾ ಹಣಕಾಸು ಸಚಿವರಾದ ಬಳಿಕ 2019 ರಿಂದ ನಿರ್ಮಲಾ ಸೀತಾರಾಮನ್ ವಸಾಹತು ಶಾಹಿಯ ಬ್ರಿಫ್ಕೇಸ್ ಸಂಸ್ಕೃತಿ ಬಿಟ್ಟು, ಅದರ ಬದಲಾಗಿ ಸಾಂಪ್ರದಾಯಿಕ ಬಹಿ ಖಾತಾದ ಮೂಲಕ ಬಜೆಟ್ ಪ್ರತಿ ಒಯ್ಯಲು ಆರಂಭಿಸಿದ್ದರು. ಇದೇ ಸಾಂಪ್ರದಾಯವನ್ನು ಹಲವು ಕಾಲ ಮುಂದುವರೆಸಿದ ಅವರು, ಸಾಂಕ್ರಾಮಿಕ ಪರಿಣಾಮದಿಂದಾಗಿ 2021ರಿಂದ ಪೇಪರ್ ಬದಲಾಗಿ ಡಿಜಿಟಲ್ ಟ್ಯಾಬ್ಲೆಟ್ ಮೊರೆ ಹೋದರು. ಇದೆ ಸಂಪ್ರದಾಯವನ್ನು ಇಂದು ಕೂಡ ಅವರು ಮುಂದುವರೆಸಿದರು.