ಮುಂಬೈ(ಮಹಾರಾಷ್ಟ್ರ): ದೆಹಲಿಯಲ್ಲಿ ನಡೆದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಎನ್ಸಿಪಿ ನಾಯಕ (ಎಸ್ಪಿ) ಶರದ್ ಪವಾರ್ ಅವರು ಸನ್ಮಾನಿಸಿದ್ದಕ್ಕೆ ಉದ್ಧವ್ ಠಾಕ್ರೆ ಬಣದ ಶಿವಸೇನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
"ಬಾಳಾ ಠಾಕ್ರೆ ಅವರ ಶಿವಸೇನೆಯನ್ನು ವಿಭಜಿಸಿ ದ್ರೋಹ ಬಗೆದ ವ್ಯಕ್ತಿಗೆ I.N.D.I.A ಕೂಟದ ಭಾಗವಾಗಿರುವ ಶರದ್ ಪವಾರ್ ಅವರು ಸನ್ಮಾನಿಸಿದ್ದು ಸರಿಯಲ್ಲ. ಇದನ್ನು ಮಹಾರಾಷ್ಟ್ರದ ಜನರು ಸಹಿಸುವುದಿಲ್ಲ" ಎಂದು ಪಕ್ಷ ಹೇಳಿದೆ.
ಈ ಬಗ್ಗೆ ಮಾತನಾಡಿರುವ ಸಂಸದ ಸಂಜಯ್ ರಾವುತ್, "ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ನ ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಕೆಡವಿದ ಮತ್ತು ಅಖಂಡ ಶಿವಸೇನೆ ವಿಭಜಿಸಿದ ವ್ಯಕ್ತಿಗೆ ಶರದ್ ಪವಾರ್ ಅವರು ಅಭಿನಂದಿಸಿದ್ದು ಒಪ್ಪಲಾಗದು. ಮೇಲಾಗಿ, ಅವರು ಕಾರ್ಯಕ್ರಮಕ್ಕೇ ಹೋಗಬಾರದಿತ್ತು" ಎಂದು ಹೇಳಿದರು.
"ಪವಾರ್ ಅವರು ನಿನ್ನೆ ಸನ್ಮಾನಿಸಿದ್ದು ಶಿಂಧೆಯನ್ನಲ್ಲ, ಬಿಜೆಪಿಯನ್ನು. ಮಹಾರಾಷ್ಟ್ರದ ಶತ್ರು ಎಂದು ಪರಿಗಣಿಸುವ ವ್ಯಕ್ತಿಗೆ ಇಂತಹ ಗೌರವ ನೀಡುವುದು ಮರಾಠಿಗರ ಹೆಮ್ಮೆಗೆ ಕಳಂಕ. ಅವರ ಭಾವನೆಗೆ ನೋವುಂಟು ಮಾಡಿದಿರಿ. ಇಂತಹ ರಾಜಕೀಯವು ರಾಜ್ಯದ ಜನರಿಗೆ ಇಷ್ಟವಾಗಲಿಲ್ಲ" ಎಂದರು.
"ನಿಮ್ಮ (ಶರದ್ ಪವಾರ್) ದೆಹಲಿ ರಾಜಕೀಯ ನಮಗೆ ಅರ್ಥವಾಗುತ್ತಿಲ್ಲ. ಆದರೆ ನಮಗೂ ರಾಜಕೀಯದ ಅರಿವಿದೆ" ಎಂದು ಮಾರ್ಮಿಕವಾಗಿ ನುಡಿದರು.
ಎನ್ಸಿಪಿ ಹೇಳಿದ್ದೇನು?: ಶಿವಸೇನೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎನ್ಸಿಪಿ, "ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವು ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನವಾಗಿತ್ತು. ಅಧ್ಯಕ್ಷತೆ ವಹಿಸಿದ್ದ ಶರದ್ ಪವಾರ್ ಅವರು ಎಲ್ಲರಂತೆ ಶಿಂಧೆ ಅವರನ್ನು ಸನ್ಮಾನಿಸಿದ್ದಾರೆ. ಇದರಲ್ಲಿ ರಾಜಕೀಯವೇನಿಲ್ಲ. ಎಲ್ಲದರಲ್ಲೂ ರಾಜಕೀಯ ತರುವುದು ಸರಿಯಲ್ಲ" ಎಂದು ಸ್ಪಷ್ಟನೆ ನೀಡಿದೆ.
ಬಿಜೆಪಿ ಪ್ರತಿಕ್ರಿಯೆ: ಹಿರಿಯ ನಾಯಕ ಶರದ್ ಪವಾರ್ ಅವರು ಏಕನಾಥ್ ಶಿಂಧೆ ಅವರನ್ನು ಸನ್ಮಾನಿಸುವ ಮೂಲಕ, ಉದ್ಧವ್ ಠಾಕ್ರೆ ಅವರಿಗಿಂತ ಶಿಂಧೆ ಉತ್ತಮ ಸಿಎಂ ಎಂದು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಕುಟುಕಿದೆ. "ಪವಾರ್ ಅವರು ಮಹಾರಾಷ್ಟ್ರದ ಘನತೆಯನ್ನು ಎಂದಿಗೂ ಎತ್ತಿ ಹಿಡಿದಿದ್ದಾರೆ. ಇದರಲ್ಲಿ ಶಿವಸೇನೆ (ಯುಬಿಸಿ) ಕೊಂಕು ಹುಡುಕುವುದರಲ್ಲಿ ಅರ್ಥವಿಲ್ಲ" ಎಂದು ಹೇಳಿದೆ.
ಇದನ್ನೂ ಓದಿ: ಟಿಎಂಸಿ ತೊರೆದು ಮತ್ತೆ ಕಾಂಗ್ರೆಸ್ ಸೇರಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ