ಕರ್ನಾಟಕ

karnataka

ETV Bharat / bharat

ಲಡಾಖ್‌ಗೆ ರಾಜ್ಯದ ಸ್ಥಾನಮಾನ ವಿಳಂಬ: ಹೆಪ್ಪುಗಟ್ಟುವ ಚಳಿಯಲ್ಲಿ ಸೋನಮ್ ವಾಂಗ್‌ಚುಕ್ ಆಮರಣಾಂತ ಉಪವಾಸ - Sonam Wangchuks Hunger Strike

ಲಡಾಖ್‌ನಲ್ಲಿ ರಾಜ್ಯದ ಸ್ಥಾನಮಾನ, ಸಂವಿಧಾನದ 6ನೇ ಪರಿಚ್ಛೇದ ಜಾರಿ ಮಾಡುವಲ್ಲಿ ಹಿಂದೇಟು ಹಾಕುತ್ತಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಖ್ಯಾತ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಆಮರಣಾಂತ ಉಪವಾಸ ಕೈಗೊಂಡಿದ್ದಾರೆ.

Sonam Wangchuk's Hunger Strike Over Ladakh Statehood
ಸೋನಮ್ ವಾಂಗ್‌ಚುಕ್ ಆಮರಣಾಂತ ಉಪವಾಸ

By ETV Bharat Karnataka Team

Published : Mar 9, 2024, 9:46 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು ಮತ್ತು ಸಂವಿಧಾನದ 6ನೇ ಪರಿಚ್ಛೇದ ಜಾರಿ ಮಾಡಬೇಕು ಎಂದು ಆಗ್ರಹಿಸಿ ಖ್ಯಾತ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಆಮರಣಾಂತ ಉಪವಾಸ ಕೈಗೊಂಡಿದ್ದಾರೆ. ಎರಡು ಬೇಡಿಕೆಗಳನ್ನು ಈಡೇರಿಸಲು ಹಿಂದೇಟು ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಅವರು ಈ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಸೋನಮ್ ವಾಂಗ್‌ಚುಕ್ ಬಾಲಿವುಡ್​ ನಟ ಅಮೀರ್ ಖಾನ್ ಅಭಿನಯದ '3 ಈಡಿಯಟ್ಸ್' ಚಿತ್ರದ ಫುನ್​ಸುಖ್ ವಾಂಗ್ಡು ​ಪಾತ್ರಕ್ಕೆ ಪ್ರೇರಣೆಯಾಗಿದ್ದರು. ಲಡಾಖ್‌ ಜನತೆಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಾರ್ಚ್ 5ರಿಂದ ಲೇಹ್‌ನ ಎನ್​ಡಿಎಸ್​ ಕ್ರೀಡಾಂಗಣದಲ್ಲಿ ಅವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಸರ್ಕಾರವು ಈಡೇರಿಸುವವರೆಗೆ ಹೋರಾಟವನ್ನು ವಿವಿಧ ಹಂತಗಳಲ್ಲಿ ಮುಂದುವರಿಸಲು ನಿರ್ಧರಿಸಿದ್ದಾರೆ.

ಲಡಾಖ್‌ನಲ್ಲಿ ಹೆಪ್ಪುಗಟ್ಟುವ ಚಳಿ ಆವರಿಸಿದೆ. ಮೈನಸ್ 16 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇದೆ. ಇದರ ನಡುವೆಯೂ ವಾಂಗ್‌ಚುಕ್ ಮತ್ತು ಸ್ಥಳೀಯ ನಿವಾಸಿಗಳು ಸರ್ಕಾರದ ಗಮನ ಸೆಳೆಯಲು ಹಗಲು - ರಾತ್ರಿ ತೆರೆದ ಜಾಗದಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ. 2019ರ ಚುನಾವಣೆ ಸಮಯದಲ್ಲಿ ಲಡಾಖ್‌ನಲ್ಲಿ ಸಂವಿಧಾನದ 6ನೇ ಪರಿಚ್ಛೇದ ಜಾರಿ ಮಾಡುವುದಾಗಿ ಹೇಳಿದ್ದ ಬಿಜೆಪಿಯ ಭರವಸೆಯನ್ನು ನೆನಪಿಸುತ್ತಿದ್ದಾರೆ.

ಗಾಂಧಿ ಅವರ ಹಾದಿಯಲ್ಲಿ ನಾನು:ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ವಾಂಗ್‌ಚುಕ್, ನಾನು 21 ದಿನಗಳ ಉಪವಾಸ ಕೈಗೊಳ್ಳುತ್ತಿದ್ದೇನೆ. ಏಕೆಂದರೆ, ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮಹಾತ್ಮ ಗಾಂಧಿಯವರು ನಡೆಸಿದ ದೀರ್ಘಾವಧಿಯ ಉಪವಾಸದೊಂದಿಗೆ ಹೊಂದಿಕೆಯಾಗುತ್ತದೆ. ಮಹಾತ್ಮ ಗಾಂಧಿಯವರ ಶಾಂತಿಯುತ ಮಾರ್ಗವನ್ನು ಅನುಕರಿಸುವ ಗುರಿಯನ್ನು ನಾನು ಹೊಂದಿದ್ದೇನೆ. ನಮ್ಮ ಗುರಿಯತ್ತ ಗಮನ ಸೆಳೆಯುವುದೇ ನಮ್ಮ ಉದ್ದೇಶವಾಗಿದೆ. ನಮ್ಮ ಹೋರಾಟವು ಸರ್ಕಾರ ಮತ್ತು ನೀತಿ ನಿರೂಪಕರನ್ನು ತ್ವರಿತವಾಗಿ ಕಾರ್ಯನಿರ್ವಹಿಸುವಂತೆ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.

ಉಪವಾಸ ಸತ್ಯಾಗ್ರಹದ ನಾಲ್ಕನೇ ದಿನವಾದ ಶನಿವಾರ ವಾಂಗ್‌ಚುಕ್ ಸಹ ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ತಮ್ಮ ವಿಡಿಯೋ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. ''ಮುಖ್ಯವಾಹಿನಿಯ ಭಾರತೀಯ ಮಾಧ್ಯಮಗಳು ಲಡಾಖ್‌ನ ನಿರ್ಣಾಯಕ ಸೀಮಾ (ಗಡಿ) ಪ್ರದೇಶಕ್ಕಿಂತ ಸೀಮಾ ಹೈದರ್ (ಪಾಕಿಸ್ತಾನದಿಂದ ತನ್ನ ಪ್ರಿಯಕರನಿಗಾಗಿ ಅಕ್ರಮವಾಗಿ ಭಾರತಕ್ಕೆ ಬಂದ ಮಹಿಳೆ) ಬಗ್ಗೆ ಹೆಚ್ಚು ಕಾಳಜಿ ವಹಿಸುವುದರಿಂದ ಈ ವಿಷಯವನ್ನು ಹರಡಲು ನಾನು ನಿಮ್ಮನ್ನು (ಜನತೆ) ಒತ್ತಾಯಿಸುತ್ತೇನೆ. ನೀವು ಫ್ರೆಂಡ್ಸ್ ಆಫ್ ಲಡಾಖ್ ಗುಂಪಿಗೆ ಸೇರಿ, ನಿಮ್ಮ ಸ್ವಂತ ನಗರದಲ್ಲಿ ಒಂದು ದಿನದ ಕ್ಲೈಮೇಟ್‌ಫಾಸ್ಟ್ ಆಯೋಜಿಸುವ ಮೂಲಕ ಲಡಾಖ್​ ಅನ್ನು ಬೆಂಬಲಿಸಬಹುದು'' ಎಂದು ಅವರು ಬರೆದುಕೊಂಡಿದ್ದಾರೆ.

ಮಾಧ್ಯಮಗಳ ಬಗ್ಗೆ ಅಸಮಾಧಾನ:ಅಲ್ಲದೇ, ಲಡಾಖ್ ಹಂಚಿಕೊಂಡಿರುವ ಭಾರತ-ಚೀನಾ ಮತ್ತು ಭಾರತ-ಪಾಕಿಸ್ತಾನ ಗಡಿಗಳಲ್ಲಿ ಆತಂಕಕಾರಿ ಭದ್ರತಾ ಬೆದರಿಕೆಗಳನ್ನೂ ಗಮನ ಸೆಳೆದಿರುವ ಅವರು, ಲಡಾಖ್‌ನಲ್ಲಿ ನಡೆಯುತ್ತಿರುವ ಆಂದೋಲನದ ಬಗ್ಗೆ ಮಾಧ್ಯಮಗಳು ತೋರಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೌನವು ನಂಬಿಕೆಯ ದ್ರೋಹ ಮತ್ತು ರಾಷ್ಟ್ರಕ್ಕೆ ಅಪಚಾರ ಎಂದು ಟೀಕಿಸಿದ್ದಾರೆ.

ಲಡಾಖ್‌ನ ಒಟ್ಟು ಜನಸಂಖ್ಯೆಯ ಶೇ.97ರಷ್ಟು ಜನರು ಸ್ಥಳೀಯ ಬುಡಕಟ್ಟು ಸಮುದಾಯದವರೇ ಆಗಿದ್ದಾರೆ. 2019ರಲ್ಲಿ ಲಡಾಖ್​ ಅನ್ನು ಕೇಂದ್ರಾಡಳಿತ ಪ್ರದೇಶ ಕೇಂದ್ರ ಸರ್ಕಾರ ಘೋಷಿಸಿತ್ತು. ಇದೇ ವರ್ಷ ನಡೆದ ಲೋಕಸಭೆ ಚುನಾವಣೆ ಮತ್ತು 2020ರ ಸ್ಥಳೀಯ ಹಿಲ್ ಕೌನ್ಸಿಲ್ ಚುನಾವಣೆ ಎರಡೂ ಸಂದರ್ಭಗಳಲ್ಲೂ ಲಡಾಖ್‌ನಲ್ಲಿ ಸಂವಿಧಾನದ 6ನೇ ಪರಿಚ್ಛೇದ ಜಾರಿ ಮಾಡುವುದಾಗಿ ಬಿಜೆಪಿ ತಿಳಿಸಿತ್ತು. ಲಡಾಖ್ ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಗೆಲುವು ಸಾಧಿಸಿದ್ದರೂ, ಈ ಭರವಸೆಯನ್ನು ಈಡೇರಿಸಿಲ್ಲ.

6ನೇ ಪರಿಚ್ಛೇದದ ಮೂಲಕ ಬುಡಕಟ್ಟು ಪ್ರದೇಶಗಳಲ್ಲಿ ಭೂಮಿ, ಕಾಡುಗಳು, ಕಾಲುವೆ ನೀರು, ಸಾಗುವಳಿ ಬದಲಾವಣೆ, ಗ್ರಾಮ ಆಡಳಿತ, ಆಸ್ತಿಯ ಉತ್ತರಾಧಿಕಾರ, ಮದುವೆ ಮತ್ತು ವಿಚ್ಛೇದನ ಮತ್ತು ಸಾಮಾಜಿಕ ಪದ್ಧತಿಗಳಂತಹ ಕೆಲವು ನಿರ್ದಿಷ್ಟ ವಿಷಯಗಳ ಮೇಲೆ ಕಾನೂನುಗಳನ್ನು ಸ್ಥಳೀಯವಾಗಿಯೇ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಹೋರಾಟ ನಡೆಯುತ್ತಿದೆ.

ಇದನ್ನೂ ಓದಿ:ಲಡಾಖ್‌ಗೆ ರಾಜ್ಯದ ಸ್ಥಾನಮಾನ: ಮರು ಹೋರಾಟಕ್ಕೆ ಎಲ್‌ಎಬಿ, ಕೆಡಿಎ ಸಜ್ಜು

ABOUT THE AUTHOR

...view details