ಕರ್ನಾಟಕ

karnataka

ಬಾಂಗ್ಲಾದೇಶದಲ್ಲಿ ಸಿಲುಕಿದ ರಾಂಚಿಯ ಎಂಜಿನಿಯರ್​ ಕುಟುಂಬ: ಸಹಾಯಕ್ಕೆ ಮೊರೆ - Bangladesh Crisis

By ETV Bharat Karnataka Team

Published : Aug 6, 2024, 1:49 PM IST

ರಾಂಚಿ ಮೂಲದ ವ್ಯಕ್ತಿಯೊಬ್ಬರು ತಮ್ಮ ಕುಟುಂಬದೊಂದಿಗೆ ಬಾಂಗ್ಲಾದೇಶದಲ್ಲಿ ಸಿಲುಕಿಕೊಂಡಿದ್ದಾರೆ.

ಬಾಂಗ್ಲಾದೇಶದಲ್ಲಿ ಸಿಲುಕಿದ ರಾಂಚಿಯ ಎಂಜಿನಿಯರ್​ ಕುಟುಂಬ
ಬಾಂಗ್ಲಾದೇಶದಲ್ಲಿ ಸಿಲುಕಿದ ರಾಂಚಿಯ ಎಂಜಿನಿಯರ್​ ಕುಟುಂಬ (ETV Bharat)

ರಾಂಚಿ (ಜಾರ್ಖಂಡ್): ಬಾಂಗ್ಲಾದೇಶದಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟು ಉಂಟಾಗಿರುವ ಮಧ್ಯೆ ರಾಂಚಿಯ ವ್ಯಕ್ತಿಯೊಬ್ಬರು ತಮ್ಮ ಕುಟುಂಬದೊಂದಿಗೆ ಅಲ್ಲಿಯೇ ಸಿಲುಕಿ ಭಾರತಕ್ಕೆ ಬರಲಾಗದೇ ಪರದಾಡುತ್ತಿದ್ದಾರೆ. ರಾಂಚಿ ನಿವಾಸಿ ಮನೀಶ್ ಎಂಬುವರು ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಬಾಂಗ್ಲಾದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಮನೀಶ್ ಚೌಧರಿ ರಾಂಚಿ ನಿವಾಸಿಯಾಗಿದ್ದು, ಪ್ರಸ್ತುತ ಬಾಂಗ್ಲಾದೇಶದಲ್ಲಿನ ಖಾಸಗಿ ಕಂಪನಿಯೊಂದರ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಮನೀಶ್ ಚೌಧರಿ ಬಾಂಗ್ಲಾದೇಶದ ರಂಗ್ಪುರದಲ್ಲಿ ಖಾಸಗಿ ಕಂಪನಿಯ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ರಂಗ್ಪುರದ ಟೋಲ್ ಪಾಕರ್ ಮಠ ಎಂಬ ಪ್ರದೇಶದಲ್ಲಿ ವಾಸವಾಗಿದ್ದಾರೆ. ಭಾರತದಲ್ಲಿನ ತಮ್ಮ ಸ್ನೇಹಿತರೊಂದಿಗೆ ದೂರವಾಣಿಯ ಮೂಲಕ ಮಾತನಾಡಿರುವ ಮನೀಷ್, ಬಾಂಗ್ಲಾದೇಶದಲ್ಲಿನ ಬಿಕ್ಕಟ್ಟಿನ ಬಗ್ಗೆ ತಿಳಿಸಿದ್ದಾರೆ.

ಆದಾಗ್ಯೂ, ತಾನು ಕೆಲಸ ಮಾಡುತ್ತಿರುವ ಪ್ರದೇಶದಲ್ಲಿ ಅಂಥ ಅಪಾಯವೇನೂ ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ. ರಂಗ್ಪುರದ ಖಾಸಗಿ ಕಂಪನಿಯ ಪ್ರಾಜೆಕ್ಟ್​ನಲ್ಲಿ 150 ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದು, ಇವರೆಲ್ಲರೂ ಭಾರತೀಯರಾಗಿದ್ದಾರೆ. ಆದರೆ ಸದ್ಯ ಬಾಂಗ್ಲಾದೇಶದ ಪರಿಸ್ಥಿತಿಯನ್ನು ನೋಡಿ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ ಮತ್ತು ಆದಷ್ಟು ಬೇಗ ಎಲ್ಲರೂ ತಾಯ್ನಾಡಿಗೆ ಹಿಂತಿರುಗಲು ಬಯಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಮನೀಶ್ ಕಳೆದ ಎರಡು ವರ್ಷಗಳಿಂದ ಪತ್ನಿ ಮತ್ತು ಮಗುವಿನೊಂದಿಗೆ ಬಾಂಗ್ಲಾದೇಶದಲ್ಲಿದ್ದಾರೆ.

ರಾಂಚಿಯಲ್ಲಿನ ಮನೀಶ್ ಅವರ ಸ್ನೇಹಿತರು ಇಡೀ ವಿಷಯದ ಬಗ್ಗೆ ಜಾರ್ಖಂಡ್ ಮುಖ್ಯಮಂತ್ರಿಗಳ ಕಚೇರಿಗೆ ಮಾಹಿತಿ ನೀಡಿದ್ದಾರೆ. ಏತನ್ಮಧ್ಯೆ ಖಾಸಗಿ ಕಂಪನಿಯು ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಬಾಂಗ್ಲಾದೇಶದಲ್ಲಿ ವಾಸಿಸುವ ಎಲ್ಲಾ ಭಾರತೀಯ ಪ್ರಜೆಗಳ ಸುರಕ್ಷತೆಯ ಬಗ್ಗೆ ಭಾರತೀಯ ರಾಯಭಾರ ಕಚೇರಿ ಎಚ್ಚರಿಕೆ ವಹಿಸಿದೆ. ಪ್ರಧಾನ ಮಂತ್ರಿಗಳ ಕಚೇರಿ ಕೂಡ ಈ ವಿಷಯದ ಬಗ್ಗೆ ನಿಗಾ ವಹಿಸಿದೆ.

ಸದ್ಯ ಮನೀಶ್ ಚೌಧರಿ ಆದಷ್ಟು ಬೇಗ ಬಾಂಗ್ಲಾದೇಶದಿಂದ ಹೊರಬರಲು ಬಯಸುತ್ತಿದ್ದಾರೆ. ರಂಗ್ಪುರದಲ್ಲಿ ಯಾವುದೇ ಉದ್ವಿಗ್ನತೆ ಇಲ್ಲದಿದ್ದರೂ ಅಲ್ಲಿನ 150 ಭಾರತೀಯ ತೀವ್ರ ಆತಂಕಕ್ಕೊಳಗಾಗಿದ್ದಾರೆ. ತಮ್ಮನ್ನು ಭಾರತಕ್ಕೆ ಕರೆಸಿಕೊಳ್ಳುವಂತೆ ಇವರೆಲ್ಲರೂ ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಿದ್ದಾರೆ. ತಮ್ಮ ಪಾಸ್ ಪೋರ್ಟ್ ಕೊರಿಯರ್​ನಲ್ಲಿ ಸಿಲುಕಿಕೊಂಡಿದೆ ಎಂದು ದೂರವಾಣಿ ಮೂಲಕ ಎಂಜಿನಿಯರ್ ಮನೀಶ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

ಮನೀಶ್ ಅವರ ಪ್ರಕಾರ, ಭಾರತೀಯ ರಾಯಭಾರ ಕಚೇರಿಯಿಂದ ಎಲ್ಲಾ ಭಾರತೀಯರಿಗೆ ಭದ್ರತೆಯನ್ನು ಒದಗಿಸಲಾಗಿದೆ. ಕೆಲವರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಲಾಗಿದೆ. ಮನೀಶ್ ಕೂಡ ಒಂದು ಅಥವಾ ಎರಡು ದಿನಗಳಲ್ಲಿ ಭಾರತಕ್ಕೆ ಮರಳುವ ನಿರೀಕ್ಷೆಯಿದೆ.

ಇದನ್ನೂ ಓದಿ : ಬಾಂಗ್ಲಾ ಬಿಕ್ಕಟ್ಟು: ಬ್ರಿಟನ್​​ನ​ ಆಶ್ರಯ ಸಿಗುವವರೆಗೆ ಭಾರತದಲ್ಲಿ ಶೇಖ್​ ಹಸೀನಾ? - Bangladesh PM Sheikh Hasina

ABOUT THE AUTHOR

...view details