ಸೂರತ್: ಗುಜರಾತ್ನ ಸೂರತ್ನಲ್ಲಿ ಹಳಿಗಳ ಮೇಲಿನ ಫಿಶ್ ಪ್ಲೇಟ್ ಮತ್ತು ಕೀಗಳನ್ನು ಕಿತ್ತು ಹಾಕಿ ರೈಲು ಅಪಘಾತಕ್ಕೆ ಸಂಚು ರೂಪಿಸಿದ್ದ ಪ್ರಕರಣದ ಅಸಲಿ ಸತ್ಯ ಹೊರಬಿದ್ದಿದೆ. ದುಷ್ಕರ್ಮಿಗಳ ದುರುದ್ದೇಶಪೂರಿತ ಕೃತ್ಯ ಎಂದು ಅಂದಾಜಿಸಿದ್ದ ಘಟನೆ ಹಿಂದೆ ರೈಲ್ವೆ ಸಿಬ್ಬಂದಿಗಳ ಕಾರ್ಯ ಇರುವುದು ಬೆಳಕಿಗೆ ಬಂದಿದೆ.
ರೈಲ್ವೆ ಇಲಾಖೆ ಸಿಬ್ಬಂದಿಗಳಾದ ಸುಭಾಷ್ ಪೊದಾರ್ (39), ಮನೀಷ್ಕುಮಾರ್ ಧಮಸ್ತ್ರಿ (28) ಮತ್ತು ಶುಭಮ್ ಜೈಸ್ವಾಲ್ (26) ಈ ಕೃತ್ಯ ಎಸಗಿದ್ದು, ಸದ್ಯ ಇವರನ್ನು ಸೂರತ್ ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಆರೋಪಿಗಳು ರೈಲ್ವೆ ನಿರ್ವಹಣೆ ವಿಭಾಗದಲ್ಲಿ ಟ್ರಾಕ್ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಎಸ್ಪಿ ಹೊತೆಶ್ ಜೊಯ್ಸರ್ ತಿಳಿಸಿದ್ದಾರೆ.
ಆರೋಪಿಗಳ ಉದ್ದೇಶ ಮತ್ತು ಅಪರಾಧ ಕೃತ್ಯದ ಕುರಿತು ಮಾತನಾಡಿರುವ ಅಧಿಕಾರಿಗಳು, ದುರಂತ ತಪ್ಪಿಸಿದರು ಎಂದು ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಪಡೆಯುವ ಹಾಗೂ ಇನ್ನಿತರೆ ಸೌಲಭ್ಯ ಪಡೆಯುವ ಉದ್ದೇಶದಿಂದ ಈ ದುಷ್ಕೃತ್ಯ ನಡೆಸಿರುವುದು ತನಿಖೆಯಲ್ಲಿ ಬಯಲಾಗಿದೆ ಎಂದು ತಿಳಿಸಿದ್ದಾರೆ.
ಏನಿದು ಘಟನೆ:ಸೆಪ್ಟೆಂಬರ್ 21ರಂದು ಬೆಳಗ್ಗೆ 5.30ರ ಸುಮಾರಿಗೆ ಸೂರತ್ನ ಕಿಮ್ ರೈಲ್ವೆ ನಿಲ್ದಾಣದ ಸಮೀಪದ ಹಳಿಗಳ ಎಲೆಸ್ಟಿಕ್ ಕ್ಲಿಪ್ ಮತ್ತು ಎರಡು ಫಿಕ್ ಪ್ಲೇಟ್ ಅನ್ನು ಯಾರೋ ದುಷ್ಕರ್ಮಿಗಳು ತೆಗೆದಿದ್ದಾರೆ ಎಂದು ತಿಳಿಸಿ, ಕರ್ತವ್ಯದಲ್ಲಿದ್ದ ಈ ಮೂವರು ಸ್ಟೇಷನ್ ಮಾಸ್ಟರ್ಗೆ ಸುದ್ದಿ ತಲುಪಿಸಿದ್ದರು.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರಕರಣದ ತನಿಖೆಗೆ ಪೊಲೀಸರು 16 ತಂಡ ರಚಿಸಿದ್ದಾರೆ. ಅಲ್ಲದೇ, ಡ್ರೋನ್ ಕೂಡ ಬಳಕೆ ಮಾಡಲಾಗಿದೆ. ಹಾಗೇ ಎನ್ಐಎ, ಗುಜರಾತ್ನ ಭಯೋತ್ಪಾದಕ ವಿರೋಧಿ ಸ್ಕ್ವಾಡ್ (ಎಟಿಎಸ್) ಮತ್ತು ಇತರೆ ಸಂಸ್ಥೆಗಳು ತನಿಖೆಗೆ ಮುಂದಾಗಿತು ಎಂದು ಎಸ್ಪಿ ಮಾಹಿತಿ ನೀಡಿದರು.
ಬಯಲಾಯ್ತು ಸಂಚಿನ ಕೃತ್ಯ: ತನಿಖೆ ಶುರು ಮಾಡಿದ ಪೊಲೀಸರು ಸುಭಾಶ್, ಮನಿಷ್ ಮತ್ತು ಶುಭಂ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರ ಹಾಕಿದ್ದಾರೆ. ದಿಢೀರ್ ಪ್ರಖ್ಯಾತಿ, ಹಣ ಗಳಿಸುವ ಹಾಗೇ ರಾತ್ರಿ ಪಾಳಿ ಮುಂದುವರೆಸುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾಗಿ ಬಾಯ್ಬಿಟಿದ್ದಾರೆ.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು ಬೆಳಗಿನ ಹೊತ್ತು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದರು. ಅಲ್ಲದೇ, ರಾತ್ರಿ ಡ್ಯೂಟಿ ಇದ್ದಾಗ ಮರುದಿನ ರಜೆ ಪಡೆಯುತ್ತಿದ್ದರು. ಇದೀಗ ಇವರ ರಾತ್ರಿ ಪಾಳಿ ಅವಧಿ ಮುಗಿಯುತ್ತ ಬಂದ ಹಿನ್ನೆಲೆ ಇದನ್ನು ಮುಂದುವರೆಸಬೇಕು ಎಂಬ ಉದ್ದೇಶಕ್ಕಾಗಿ ಈ ದುಷ್ಕೃತ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.
ಈ ಮೂವರು ಶನಿವಾರ ನಸುಕಿನಜಾವ 2.56 ರಿಂದ 4.57ರ ವರೆಗೆ ಈ ಕೃತ್ಯ ನಡೆಸಿದ್ದಾರೆ. ಅಲ್ಲದೇ, ರೈಲು ಹಳಿಗಳ ಪ್ಲೇಟ್ ತೆಗೆಯುತ್ತಿರುವ ದೃಶ್ಯಗಳನ್ನು ಮೊಬೈಲ್ನಲ್ಲಿ ಫೋಟೋ ತೆಗೆದುಕೊಂಡಿದ್ದಾರೆ. ತನಿಖೆ ವೇಳೆ ಬಯಲಾದ ಮತ್ತೊಂದು ಅಂಶ ಎಂದರೆ, ಇವರು ಫೋಟೋ ತೆಗೆದ ಸಮಯ ಹಾಗೂ ಈ ಕುರಿತು ಸ್ಟೇಷನ್ ಮಾಸ್ಟರ್ಗೆ ವಿಷಯ ಮುಟ್ಟಿಸಿದ ಸಮಯದಲ್ಲಿ ಭಾರೀ ವ್ಯತ್ಯಾಸವಿದೆ. ಜೊತೆಗೆ ಹಲವು ಫೋಟೋಗಳನ್ನು ಇವರು ಅಳಿಸಿ ಹಾಕಿರುವುದು ಗೊತ್ತಾಗಿದೆ.
ಇದನ್ನೂ ಓದಿ:ಗುಜರಾತ್: ರೈಲು ಹಳಿ ತಪ್ಪಿಸಲು ಮತ್ತೊಂದು ಸಂಚು, ತಪ್ಪಿದ ಅನಾಹುತ