ಕರ್ನಾಟಕ

karnataka

ETV Bharat / bharat

ದೆಹಲಿ ಚುನಾವಣೆ ಫಲಿತಾಂಶ : ಅಭಿವೃದ್ಧಿ, ಉತ್ತಮ ಆಡಳಿತಕ್ಕೆ ಸಿಕ್ಕ ಜಯ- ಪ್ರಧಾನಿ ಮೋದಿ - DELHI ELECTIONS 2025

ದೆಹಲಿ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಬಿಜೆಪಿ ಬಹುಮತಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ಅಧಿಕಾರದ ಗದ್ದುಗೆ ಏರಿದೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ (ETV Bharat)

By ETV Bharat Karnataka Team

Published : Feb 8, 2025, 3:37 PM IST

Updated : Feb 8, 2025, 3:46 PM IST

ನವದೆಹಲಿ :ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ದೊಡ್ಡ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಶ್ಲಾಘಿಸಿದ್ದಾರೆ. ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಗೆದ್ದಿದೆ ಎಂದು ಬಣ್ಣಿಸಿದ್ದಾರೆ.

ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಪ್ರಧಾನಿ ಮೋದಿ, ಬಿಜೆಪಿಗೆ ಐತಿಹಾಸಿಕ ಗೆಲುವು ನೀಡಿದ್ದಕ್ಕಾಗಿ ದೆಹಲಿಯ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಅಭಿನಂದನೆಗಳು. ನಿಮ್ಮೆಲ್ಲರಿಗೂ ನನ್ನ ಹೃದಯಾಂತರಾಳದಿಂದ ಕೃತಜ್ಞತೆ. ದೆಹಲಿಯ ಸರ್ವತೋಮುಖ ಅಭಿವೃದ್ಧಿ, ಜನರ ಜೀವನವನ್ನು ಉತ್ತಮಗೊಳಿಸಲು ಸಿಗುವ ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ ಎಂದು ಖಾತರಿಪಡಿಸುತ್ತೇವೆ ಎಂದಿದ್ದಾರೆ.

ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ದೆಹಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಕ್ಷಕ್ಕೆ ಇಷ್ಟು ದೊಡ್ಡದ ಮಟ್ಟದ ಜನಾದೇಶ ಬರುವಲ್ಲಿ ಹಗಲಿರುಳು ಶ್ರಮಿಸಿದ ಪಕ್ಷದ ನನ್ನ ಎಲ್ಲಾ ಕಾರ್ಯಕರ್ತರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಈಗ ನಾವು ದೆಹಲಿಯ ಜನರಿಗೆ ಸೇವೆ ಸಲ್ಲಿಸಲು ಇನ್ನಷ್ಟು ಶ್ರಮವಹಿಸಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ.

ದೆಹಲಿ ಗದ್ದುಗೆಗೆ ಬಿಜೆಪಿ ಬಾದ್​​ಶಾ :ಪ್ರಸ್ತುತ ಫಲಿತಾಂಶದ ಪ್ರಕಾರ, ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 40 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, 10 ರಲ್ಲಿ ಮುನ್ನಡೆ ಹೊಂದಿದೆ. ಆಮ್​ ಆದ್ಮಿ ಪಕ್ಷ (ಆಪ್​) 19 ರಲ್ಲಿ ಗೆದ್ದು 4 ರಲ್ಲಿ ಮುನ್ನಡೆ ಹೊಂದಿದೆ. ಉಳಿದಂತೆ ಕಾಂಗ್ರೆಸ್​ ಸತತ ಮೂರನೇ ಚುನಾವಣೆಯಲ್ಲೂ ಒಂದೇ ಒಂದು ಸ್ಥಾನ ಗಳಿಸುವಲ್ಲಿ ವಿಫಲವಾಗಿ ತೀವ್ರ ಮುಖಭಂಗ ಅನುಭವಿಸಿದೆ.

ಆಪ್​ಗೆ ಹ್ಯಾಟ್ರಿಕ್​ ಚಾನ್ಸ್​ ಮಿಸ್ ​:ಕಳೆದ ಎರಡು ಚುನಾವಣೆಗಳಲ್ಲಿ ಸತತವಾಗಿ ಗೆದ್ದು ದೆಹಲಿ ಗದ್ದುಗೆಯಲ್ಲಿ ಅಧಿಕಾರ ನಡೆಸಿದ್ದ ಆಮ್​ ಆದ್ಮಿ ಪಕ್ಷವು (ಆಪ್​) ಮೂರನೇ ಪರೀಕ್ಷೆಯಲ್ಲಿ ನಪಾಸಾಗಿದೆ. ಕಳೆದ 10 ವರ್ಷದಿಂದ ಅಧಿಕಾರದಲ್ಲಿದ್ದ ಪಕ್ಷವು ಕೇಸರಿ ಪಡೆಯ ಮುಂದೆ ಮಂಡಿಯೂರಿದೆ. ಕೇವಲ 19 ಸ್ಥಾನಗಳಲ್ಲಿ ಗೆದ್ದು, 4 ಕಡೆಗಳಲ್ಲಿ ಮುನ್ನಡೆಯಲ್ಲಿದೆ. ಈ ಮೂಲಕ ಹೀನಾಯ ಸೋಲು ಕಂಡಿದೆ.

ಇಂದು (ಶನಿವಾರ) ಬೆಳಗ್ಗೆ ಮತ ಎಣಿಕೆ ಆರಂಭವಾದಾಗ ಬಿಜೆಪಿ ಅಚ್ಚರಿಯ ರೀತಿಯಲ್ಲಿ 70 ಸ್ಥಾನಗಳ ಪೈಕಿ 50 ರಲ್ಲಿ ಮುನ್ನಡೆ ಸಾಧಿಸಿತು. ಬಳಿಕ ಮರು ಹೋರಾಟ ನಡೆಸಿದ ಆಪ್​ 23 ರಲ್ಲಿ ಮುನ್ನಡೆಗೆ ಬಂದಿತು.

ಅರವಿಂದ್​ ಕೇಜ್ರಿವಾಲ್​ಗೇ ಸೋಲು :ಆಪ್​ದೆಹಲಿಯ ಅಧಿಕಾರ ಕಳೆದುಕೊಳ್ಳುವ ಜೊತೆಗೆ ದೊಡ್ಡ ಆಘಾತಗಳನ್ನೂ ಅನುಭವಿಸಿದೆ. ಪಕ್ಷದ ನೇತಾರ ಮತ್ತು ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ ಸ್ವತಃ ಸೋಲು ಅನುಭವಿಸಿದ್ದಾರೆ. ಬಿಜೆಪಿಯ ಪರ್ವೇಶ್ ವರ್ಮಾ ಎದುರು ಪರಾಜಯ ಕಂಡಿದ್ದಾರೆ.

ಓದಿ:ಯಮುನೆಯ ಮೇಲಿನ ಆರೋಪಕ್ಕೆ ಬೆಲೆ ತೆತ್ತರಾ ಕೇಜ್ರಿವಾಲ್​?: ಫಲಿತಾಂಶದ ಮೇಲೆ ಪರಿಣಾಮ ಬೀರಿತಾ 'ವಿಷಕಾರಿ' ಮಾತು

ಕೇಜ್ರಿವಾಲ್​ಗಿದ್ದ ಹಣದ ದುರಾಸೆಯೇ ಎಎಪಿ ಹಿನ್ನಡೆಗೆ ಕಾರಣ; ಅಣ್ಣಾ ಹಜಾರೆ ಆಕ್ರೋಶ

ಆಪ್​ ವರಿಷ್ಠ ಅರವಿಂದ್ ಕೇಜ್ರಿವಾಲ್​ಗೆ ಭಾರಿ ಆಘಾತ: ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೂ ಸೋಲು

ದೆಹಲಿ ಚುನಾವಣೆ ಫಲಿತಾಂಶ: ಪಕ್ಷದ ಕಚೇರಿ ಹೊರಗೆ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

Last Updated : Feb 8, 2025, 3:46 PM IST

ABOUT THE AUTHOR

...view details