ಕರ್ನಾಟಕ

karnataka

ETV Bharat / bharat

ಒಡಿಶಾದಲ್ಲಿ ₹ 68 ಸಾವಿರ ಕೋಟಿ ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ - ಒಡಿಶಾದಲ್ಲಿ ಪ್ರಧಾನಿ ಮೋದಿ

ಒಡಿಶಾದಲ್ಲಿ ಸಂಬಲ್‌ಪುರದ ಐಐಎಂನ ಖಾಯಂ ಕ್ಯಾಂಪಸ್, ಪುರಿ-ಸೋನೆಪುರ್ ಸಾಪ್ತಾಹಿಕ ಎಕ್ಸ್‌ಪ್ರೆಸ್‌, ರಾಷ್ಟ್ರೀಯ ಗ್ಯಾಸ್ ಗ್ರಿಡ್​ ಸೇರಿದಂತೆ ವಿವಿಧ 18 ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.

pm-modi-unveils-projects-worth-over-rs-68000-crore-in-odisha
ಒಡಿಶಾದಲ್ಲಿ ₹ 68 ಸಾವಿರ ಕೋಟಿ ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

By PTI

Published : Feb 3, 2024, 7:54 PM IST

ಸಂಬಲ್‌ಪುರ (ಒಡಿಶಾ): ಒಡಿಶಾದಲ್ಲಿ 68,000 ಕೋಟಿ ರೂ.ಗಳ ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ಶನಿವಾರ ನೆರವೇರಿಸಿದರು. ಈ ಯೋಜನೆಗಳು ಒಡಿಶಾದ ಯುವಕರಿಗೆ ಪ್ರಯೋಜನಕಾರಿಯಾಗಲಿದ್ದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಪ್ರತಿ ವಲಯದಲ್ಲೂ ಒಡಿಶಾಗೆ ಕೇಂದ್ರ ಬೆಂಬಲಿಸುತ್ತಿದೆ ಎಂದು ಮೋದಿ ತಿಳಿಸಿದರು.

ಸಂಬಲ್‌ಪುರದ ಐಐಎಂನ ಖಾಯಂ ಕ್ಯಾಂಪಸ್, ಪುರಿ-ಸೋನೆಪುರ್ ಸಾಪ್ತಾಹಿಕ ಎಕ್ಸ್‌ಪ್ರೆಸ್‌, ರಾಷ್ಟ್ರೀಯ ಗ್ಯಾಸ್ ಗ್ರಿಡ್​ ಸೇರಿದಂತೆ ವಿವಿಧ 18 ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದರು. ಈ ಸಮಾರಂಭದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ರಾಜ್ಯಪಾಲ ರಘುಬರ್ ದಾಸ್ ಮತ್ತು ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಬಿಶ್ವೇಶ್ವರ್ ತುಡು ಮತ್ತು ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು.

ನಂತರ ಬಿಜೆಪಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಇತ್ತೀಚಿಗೆ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್​ನಲ್ಲಿ​ ಯುವಕರು, ಮಹಿಳೆಯರು, ಬಡವರು, ರೈತರು ಮತ್ತು ಆದಿವಾಸಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮೋದಿ ಗ್ಯಾರಂಟಿ ದೇಶಾದ್ಯಂತ ಇರುವ ಅಸಹಾಯಕ ಜನರ ಭರವಸೆಯಾಗಿದೆ ಎಂದರು.

ಪಿಎಂ ಕಿಸಾನ್​ ಸಮ್ಮಾನ್ ನಿಧಿ ಯೋಜನೆ ಅಡಿ ಒಡಿಶಾದಲ್ಲಿ ಸುಮಾರು 40 ಲಕ್ಷ ರೈತರು ನೇರ ಪ್ರಯೋಜನ ಪಡೆದಿದ್ದಾರೆ. 2014ಕ್ಕಿಂತ ಮೊದಲು ಸರ್ಕಾರವು ಒಡಿಶಾದಿಂದ 36,000 ಕೋಟಿ ರೂಪಾಯಿಗಳ ಭತ್ತವನ್ನು ಎಂಎಸ್‌ಪಿ ಅಡಿಯಲ್ಲಿ ಖರೀದಿಸುತ್ತಿತ್ತು. ಪ್ರಸ್ತುತ ಸರ್ಕಾರವು ರಾಜ್ಯದಿಂದ 1.10 ಲಕ್ಷ ಕೋಟಿ ರೂ. ಮೌಲ್ಯದ ಭತ್ತವನ್ನು ಖರೀದಿಸುತ್ತಿದೆ. ಏಕೆಂದರೆ, ರೈತರ ನಿಜವಾದ ಸಬಲೀಕರಣಕ್ಕಾಗಿ ಬಿಜೆಪಿ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಅದೇ ರೀತಿ ಬಿಜೆಪಿ ಸರ್ಕಾರ ಮೀನುಗಾರ ಸಮುದಾಯದ ಉನ್ನತಿಗೆ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮೀನು ಕೃಷಿಕರ ಜೀವನ ಸುಧಾರಣೆಗೆ ಸರ್ಕಾರ ಒತ್ತು ನೀಡುತ್ತಲೇ ಇದೆ. ಈ ಬಾರಿ ಬಜೆಟ್‌ನಲ್ಲಿ ಮೇಲ್ಛಾವಣಿ ಸೌರ ಯೋಜನೆಗೆ 10,000 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಈ ಮೇಲ್ಛಾವಣಿಯ ಸೌರ ಯೋಜನೆಯಿಂದ ಜನರು ಶೂನ್ಯ ವಿದ್ಯುತ್​ ಬಿಲ್​ಗಳನ್ನು ಪಡೆಯಬಹುದು ಎಂದರು.

ನಾನು ಬುಡಕಟ್ಟು ಜನರೊಂದಿಗೆ ಕೆಲಸ ಮಾಡಿದ್ದು, ಕಷ್ಟಗಳು ಮತ್ತು ಸಂಕಟಗಳನ್ನು ತಿಳಿದಿದ್ದೇನೆ. ಆದರೆ, ಅವರು (ಕಾಂಗ್ರೆಸ್) ಆದಿವಾಸಿಗಳನ್ನು ತಮ್ಮ ಮತ ಬ್ಯಾಂಕ್‌ಗಾಗಿ ಬಳಸಿಕೊಂಡಿದ್ದಾರೆ. ಆದಾಗ್ಯೂ, ಕಳೆದ 10 ವರ್ಷಗಳಲ್ಲಿ ಒಡಿಶಾ ಮತ್ತು ಇತರ ರಾಜ್ಯಗಳಲ್ಲಿ ಆದಿವಾಸಿಗಳ ಅಭಿವೃದ್ಧಿಗೆ ಬಿಜೆಪಿ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು.

ವಂಶಪಾರಂಪರ್ಯ ರಾಜಕೀಯಕ್ಕೆ ಅಡ್ವಾಣಿ ಸವಾಲು: ಇದೇ ವೇಳೆ, ಎಲ್​.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಬಗ್ಗೆ ಉಲ್ಲೇಖಿಸಿದ ಮೋದಿ ಅವರು, ಅಡ್ವಾಣಿ ಅವರು ವಂಶಪಾರಂಪರ್ಯ ರಾಜಕೀಯಕ್ಕೆ ಸವಾಲು ಎಸೆದವರು. ರಾಜಕೀಯವಾಗಿ ಅಸ್ಪೃಶ್ಯ ಎಂಬ ಪಕ್ಷದ ಗುರುತನ್ನು ಅಳಿಸಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವನ್ನಾಗಿ ಬದಲಾಯಿಸಿದವರು. ಪ್ರಜಾಪ್ರಭುತ್ವವು ಒಂದು ಪಕ್ಷದ ಹಿಡಿತದಿಂದ ಹೊರಬರಲು ಅಡ್ವಾಣಿ ನಿರಂತರವಾಗಿ ಹೋರಾಡಿದವರು. ಅಡ್ವಾಣಿ ಅವರಿಗೆ ಭಾರತ ರತ್ನ ನೀಡಿರುವುದು ರಾಷ್ಟ್ರವೇ ಮೊದಲು ಎಂಬ ಸಿದ್ಧಾಂತಕ್ಕೆ ಸಂದ ಗೌರವ. ದೇಶಾದ್ಯಂತ ಕೋಟ್ಯಂತರ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಗೂ ಸಂದ ಮನ್ನಣೆಯಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ:ಎಲ್.ಕೆ. ಅಡ್ವಾಣಿಗೆ ಭಾರತ ರತ್ನ ಘೋಷಣೆ: ಪ್ರಧಾನಿ ಮೋದಿ ಅಭಿನಂದನೆ

ABOUT THE AUTHOR

...view details