ಕರ್ನಾಟಕ

karnataka

ಸ್ವಾತಂತ್ರ್ಯ ದಿನದಂದು ಹಾರದೆ ಕೆಳಗೆ ಬಿದ್ದ ಪಾರಿವಾಳ: ಕ್ರಮಕ್ಕೆ ಆಗ್ರಹಿಸಿದ ಎಸ್​​ಪಿ - Pigeon Fails To Fly

By ETV Bharat Karnataka Team

Published : Aug 21, 2024, 6:36 PM IST

ಛತ್ತೀಸ್​ಗಢದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಎಸ್​ಪಿ ಬಿಡುಗಡೆ ಮಾಡಿದ ಪಾರಿವಾಳ ಹಾರದೆ ನೆಲಕ್ಕೆ ಬಿದ್ದ ಘಟನೆ ನಡೆದಿತ್ತು. ಇದರ ವಿರುದ್ಧ ಅವರು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯಂದು ಹಾರದೆ ಕೆಳಗೆ ಬಿದ್ದ ಪಾರಿವಾಳ
ಸ್ವಾತಂತ್ರ್ಯ ದಿನಾಚರಣೆಯಂದು ಹಾರದೆ ಕೆಳಗೆ ಬಿದ್ದ ಪಾರಿವಾಳ (ETV Bharat)

ರಾಯಪುರ\ಮುಂಗೇಲಿ:ಪಾರಿವಾಳ ಶಾಂತಿ ಮತ್ತು ಸ್ವಾತಂತ್ರ್ಯದ ಸಂಕೇತ. ಸಾಮಾನ್ಯವಾಗಿ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಹಾರಿ ಬಿಡುವುದು ವಾಡಿಕೆ. ಈಚೆಗೆ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಛತ್ತೀಸ್​​ಗಢದಲ್ಲಿ ಪೊಲೀಸ್​​ ವರಿಷ್ಠಾಧಿಕಾರಿ (ಎಸ್​​ಪಿ) ಬಿಡುಗಡೆ ಮಾಡಿದ ಪಾರಿವಾಳ ಹಾರದೆ, ಕೆಳಕ್ಕೆ ಬಿದ್ದಿದೆ. ಇದರಿಂದ ಅವರಿಗೆ ಇರಿಸುಮುರಿಸಾಗಿದ್ದು, ಇಂತಹ ಪಾರಿವಾಳವನ್ನು ತಂದ ಅಧಿಕಾರಿಯ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ.

ಪೊಲೀಸ್​ ಅಧಿಕಾರಿ ಹಾರಿಬಿಟ್ಟ ಪಾರಿವಾಳ ಮುದುಡಿಕೊಂಡೇ ಕೆಳ ಬಿದ್ದ ವಿಡಿಯೋ ವೈರಲ್​ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಯನ್ನು ಟ್ರೋಲ್ ಕೂಡಾ​ ಮಾಡಲಾಗಿದೆ. ಪಂಚಾಯತ್​ ವೆಬ್​ ಸಿರೀಸ್​​ನಲ್ಲಿ ಇಂಥದ್ದೇ ದೃಶ್ಯವಿದ್ದು, ಅದಕ್ಕೆ ಹೋಲಿಸಲಾಗಿದೆ. ಇದರಿಂದ ಅಧಿಕಾರಿಯನ್ನು ಕೆರಳಿಸಿದೆ.

ಅಂದು ನಡೆದ ಘಟನೆ:ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಪುನ್ನುಲಾಲ್ ಮೊಹಲೆ, ಜಿಲ್ಲಾಧಿಕಾರಿ ರಾಹುಲ್ ದೇವ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಗಿರಿಜಾ ಶಂಕರ್ ಜೈಸ್ವಾಲ್ ಭಾಗವಹಿಸಿದ್ದರು. ಧ್ವಜಾರೋಹಣದ ಬಳಿಕ ಶಾಂತಿ ಮತ್ತು ಸ್ವಾತಂತ್ರ್ಯದ ಸಂಕೇತವಾಗಿ ಪಾರಿವಾಳವನ್ನು ಬಿಡುಗಡೆ ಮಾಡಲಾಯಿತು. ಶಾಸಕ ಮತ್ತು ಜಿಲ್ಲಾಧಿಕಾರಿ ಬಿಟ್ಟ ಪಾರಿವಾಳಗಳು ರೆಕ್ಕೆ ಬಡಿಯುತ್ತಾ ಹಾರಿ ಹೋಗಿವೆ.

ಎಸ್​​ಪಿ ಬಿಟ್ಟ ಪಾರಿವಾಳ ಮುದುಡಿಕೊಂಡು ನೆಲಕ್ಕೆ ಬಿದ್ದಿದೆ. ಇದರಿಂದ ಅಧಿಕಾರಿ ತುಸು ಗಾಬರಿಗೊಂಡಂತೆ ಕಂಡುಬಂದರು. ತಕ್ಷಣವೇ ಪಾರಿವಾಳವನ್ನು ಅಲ್ಲಿದ್ದವರು ಎತ್ತಿಕೊಂಡು ಉಪಚರಿಸಿದ್ದಾರೆ. ಎಸ್​​ಪಿ ಹಾರಿ ಬಿಟ್ಟ ಪಾರಿವಾಳ ನೆಲಕ್ಕೆ ಬೀಳುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. ಜೊತೆಗೆ, ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯೂ ಆಯಿತು.

ಕ್ರಮಕ್ಕೆ ಆಗ್ರಹಿಸಿದ ಅಧಿಕಾರಿ:ಎಸ್​ಪಿ ಗಿರಿಜಾ ಶಂಕರ್ ಜೈಸ್ವಾಲ್ ಅವರು ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಪಾರಿವಾಳ ನೆಲಕ್ಕೆ ಬಿದ್ದ ಘಟನೆ ಸಾಮಾಜಿಕ ಮಾಧ್ಯಮ ಮತ್ತು ಇತರ ಮಾಧ್ಯಮಗಳಲ್ಲಿ ಪ್ರಮುಖವಾಗಿ ಬಿತ್ತರಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪಾರಿವಾಳವನ್ನು ಹಾರಲು ನನಗೆ ನೀಡಲಾಗಿದೆ. ಈ ಪಾರಿವಾಳಗಳನ್ನು ತಂದ ಅಧಿಕಾರಿ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸಿ ಎಂದು ಕೋರಿದ್ದಾರೆ.

ಈಗ ಪಾರಿವಾಳದ ಸ್ಥಿತಿ ಹೇಗಿದೆ?:ಪಾರಿವಾಳಕ್ಕೆ ತಕ್ಷಣ ವೈದ್ಯರ ತಂಡ ಚಿಕಿತ್ಸೆ ನೀಡಿದೆ. ಔಷಧಿ ಮತ್ತು ನೀರನ್ನು ನೀಡಿ ಉಪಚರಿಸಿದ ಬಳಿಕ ಅದಕ್ಕೆ ಪ್ರಜ್ಞೆ ಬಂದಿದೆ. ನಂತರ ಆಸ್ಪತ್ರೆಯಿಂದ ಹೊರಕ್ಕೆ ಹಾರಿ ಬಿಡಲಾಗಿದೆ.

ಇದನ್ನೂ ಓದಿ:ದಸರಾ ಆನೆ ಅರ್ಜುನನ ನೆನಪು ಕಾಡುತ್ತಿದೆ: ಅರ್ಚಕ ಪ್ರಹ್ಲಾದ್‌ ರಾವ್ - Mysuru Dasara 2024

ABOUT THE AUTHOR

...view details