ಕರ್ನಾಟಕ

karnataka

ಬಿಹಾರದಲ್ಲಿ ನಡೆಯುತ್ತಿರುವ ಭೂ ಸಮೀಕ್ಷೆಯಿಂದ ವ್ಯಾಜ್ಯಗಳ ಸಂಖ್ಯೆ ಹೆಚ್ಚಳ: ಪ್ರಶಾಂತ್ ಕಿಶೋರ್ - Land survey in Bihar

By ETV Bharat Karnataka Team

Published : Sep 3, 2024, 6:25 PM IST

ಬಿಹಾರದಲ್ಲಿ ನಡೆಯುತ್ತಿರುವ ಭೂ ಸಮೀಕ್ಷೆಯಿಂದ ವ್ಯಾಜ್ಯಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಜನ ಸುರಾಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್
ಜನ ಸುರಾಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್ (IANS)

ಪಾಟ್ನಾ:ಬಿಹಾರದಲ್ಲಿ ನಡೆಯುತ್ತಿರುವ ಭೂ ಸಮೀಕ್ಷೆಯಿಂದ ರಾಜ್ಯದಲ್ಲಿ ವ್ಯಾಜ್ಯಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಜನ ಸುರಾಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಮಂಗಳವಾರ ಹೇಳಿದ್ದಾರೆ.

"ಸಮೀಕ್ಷೆಯು ನಡೆಯುತ್ತಿರುವ ವಿಧಾನದಿಂದಾಗಿ ಮುಂದಿನ ಆರು ತಿಂಗಳಲ್ಲಿ ವ್ಯಾಪಕ ಭೂ ಮಾಲೀಕತ್ವದ ವಿವಾದಗಳು ಭುಗಿಲೇಳಬಹುದು. ಸರಿಯಾದ ಸಿದ್ಧತೆ ಅಥವಾ ಸಂಪನ್ಮೂಲಗಳ ಬಳಕೆ ಮಾಡದೇ ತರಾತುರಿಯಲ್ಲಿ ಸಮೀಕ್ಷೆ ಪ್ರಾರಂಭಿಸಲಾಗಿದೆ" ಎಂದು ಕಿಶೋರ್ ಕೈಮೂರ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ತಿಳಿಸಿದರು.

"ನಿತೀಶ್ ಕುಮಾರ್ ಬಹುಶಃ ತಮ್ಮ ರಾಜಕೀಯ ಜೀವನದ ಕೊನೆಯ ಇನ್ನಿಂಗ್ಸ್ ಆಡುತ್ತಿದ್ದಾರೆ. ನಾನು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಹಾಗಂತ ಅವರು ತಪ್ಪು ಮಾಡಿರುವುದನ್ನು ಎತ್ತಿ ತೋರಿಸಲು ನಾನು ಹಿಂಜರಿಯಲಾರೆ. ಭೂ ಸಮೀಕ್ಷೆ ನಡೆಸಲು ಬಿಹಾರ ಸರ್ಕಾರ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಪ್ರಸ್ತುತ, ಬಿಹಾರದಲ್ಲಿ ಶೇಕಡಾ 33 ರಷ್ಟು ಭೂಮಿ ವಿವಾದದಲ್ಲಿದೆ ಮತ್ತು ಸಮೀಕ್ಷೆಯ ನಂತರ ಅದು ದ್ವಿಗುಣಗೊಳ್ಳಲಿದೆ" ಎಂದು ಅವರು ಹೇಳಿದರು.

ಬಿಹಾರದಲ್ಲಿ ನಡೆಯುತ್ತಿರುವ ಭೂ ಸಮೀಕ್ಷೆಯಿಂದ ಉದ್ಭವಿಸಬಹುದಾದ ಸಂಭಾವ್ಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, "ಅನೇಕ ಪ್ಲಾಟ್​ಗಳು ಕುಟುಂಬದ ಕೇವಲ ಓರ್ವ ಸದಸ್ಯನ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿವೆ. ಅಂಥ ವ್ಯಕ್ತಿಯು ಆಸ್ತಿಯನ್ನು ಇತರ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಲು ಇಷ್ಟಪಡದಿದ್ದರೆ ಅಥವಾ ಭೂ ಮಾಲೀಕತ್ವದಲ್ಲಿ ಯಾವುದೇ ಬದಲಾವಣೆಗಳಿಗೆ ಅಗತ್ಯವಾದ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್ಒಸಿ) ಒದಗಿಸಲು ನಿರಾಕರಿಸಿದರೆ ಈ ಪರಿಸ್ಥಿತಿಯು ವಿವಾದಗಳಿಗೆ ಕಾರಣವಾಗಬಹುದು" ಎಂದು ಕಿಶೋರ್ ಹೇಳಿದರು.

ಈ ಸವಾಲುಗಳು ಸಮೀಕ್ಷೆ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಬಹುದು ಹಾಗೂ ಸಮೀಕ್ಷೆಗಾಗಿ ರಾಜ್ಯದ ಭೂ ಸುಧಾರಣಾ ಮತ್ತು ಕಂದಾಯ ಇಲಾಖೆ ಸಿದ್ಧವಾಗಿಲ್ಲ ಎಂದು ಅವರು ತಿಳಿಸಿದರು.

ಬಿಹಾರದಲ್ಲಿ ಭೂ ದಾಖಲೆಗಳ ಡಿಜಿಟಲೀಕರಣವನ್ನು ಇತ್ತೀಚೆಗೆ ಬಾಹ್ಯ ಏಜೆನ್ಸಿಯೊಂದು ನಡೆಸಿದೆ. ಆದರೆ, ಆ ಕಂಪನಿಯು ನಿಖರತೆಗಿಂತ ತರಾತುರಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಹೆಚ್ಚಿನ ಡಿಜಿಟೈಸೇಶನ್ ಮಾಡಿ ಹೆಚ್ಚು ಲಾಭ ಗಳಿಸುವುದು ಅದರ ಉದ್ದೇಶವಾಗಿದೆ ಎಂದು ಅವರು ನುಡಿದರು.

"ಈ ಅವಸರದ ವಿಧಾನದಿಂದ ಕುಟುಂಬ ಸದಸ್ಯರ ನಡುವೆ ಭೂಮಿಯನ್ನು ತಪ್ಪಾಗಿ ವರ್ಗಾಯಿಸುವಂಥ ಹಲವಾರು ತಪ್ಪುಗಳಿಗೆ ಕಾರಣವಾಗಿದೆ. ಇದು ಗ್ರಾಮ ಮಟ್ಟದಲ್ಲಿ ಗಮನಾರ್ಹ ಗೊಂದಲ ಮತ್ತು ಅವ್ಯವಸ್ಥೆಗೆ ಕಾರಣವಾಗಿದೆ" ಎಂದು ಕಿಶೋರ್ ಹೇಳಿದರು.

ಏತನ್ಮಧ್ಯೆ, ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ, ಪ್ರಶಾಂತ್ ಕಿಶೋರ್ ತಮ್ಮ ರಾಜಕೀಯ ಸಂಘಟನೆ ಜನ ಸುರಾಜ್ ಮುಂಬರುವ ರಾಮಗಢ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದರು. ಜನ್ ಸುರಾಜ್ ಅಭ್ಯರ್ಥಿಗಳು ಖಂಡಿತವಾಗಿಯೂ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ಮಹಾರಾಷ್ಟ್ರ ಸಾರಿಗೆ ನೌಕರರ ಮುಷ್ಕರ: ಬಸ್​ ಸಂಚಾರ ಸ್ಥಗಿತ, ಗಣೇಶ ಹಬ್ಬದ ಹೊಸ್ತಿಲಲ್ಲಿ ಜನ ಹೈರಾಣು - MSRTC employees strike

ABOUT THE AUTHOR

...view details