ಕರ್ನಾಟಕ

karnataka

ETV Bharat / bharat

ನೊಬೆಲ್ ಪ್ರಶಸ್ತಿ ಪುರಸ್ಕೃತೆ ಹ್ಯಾನ್ ಕಾಂಗ್ ಅವರ 'ದಿ ವೆಜಿಟೇರಿಯನ್' ಕಾದಂಬರಿ ಭಾಷಾಂತರ: ಕವಿ ಸಮಯವೇಲ್ ವಿಶೇಷ ಸಂದರ್ಶನ

2024ರ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ದಕ್ಷಿಣ ಕೊರಿಯಾದ ಪ್ರಸಿದ್ಧ ಲೇಖಕಿ ಹ್ಯಾನ್ ಕಾಂಗ್ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಅವರ ''ದಿ ವೆಜಿಟೇರಿಯನ್'' ಎಂಬ ಕಾದಂಬರಿಯನ್ನು ''ಮರಕಾರಿ'' ಶೀರ್ಷಿಕೆಯಡಿ ಕವಿ ಸಮಯವೇಲ್ ತಮಿಳಿಗೆ ಅನುವಾದಿಸಿದ್ದಾರೆ.

By ETV Bharat Karnataka Team

Published : 4 hours ago

Nobel Prize in Literature 2024: The vegetarian novel is a story that became a marakari
ಕವಿ ಸಮಯವೇಲ್ ವಿಶೇಷ ಸಂದರ್ಶನ (ETV Bharat)

ಮಧುರೈ (ತಮಿಳುನಾಡು): ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರಕ್ಕೆ ಪ್ರತಿ ವರ್ಷ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅದರಂತೆ ಈ ವರ್ಷ ಕಾವ್ಯ ರಚನೆ, ಕಥೆ, ಕಾದಂಬರಿಗಳ ಬರಹದಲ್ಲಿ ಸದಾ ಚಟುವಟಿಕೆಯಿಂದ ಇರುವ 53 ವರ್ಷದ ಲೇಖಕಿ ಹ್ಯಾನ್ ಕಾಂಗ್ ಅವರಿಗೆ 2024ರ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ''ಐತಿಹಾಸಿಕ ಆಘಾತಗಳು ಮತ್ತು ಮಾನವ ಜೀವನದ ದುರ್ಬಲತೆಯನ್ನು ಬಹಿರಂಗಪಡಿಸುವ ಅವರ ಕಾವ್ಯಾತ್ಮಕ ಗದ್ಯಕ್ಕೆ'' ಈ ಪ್ರಶಸ್ತಿ ನೀಡಲಾಗಿದ್ದು, ಸಾಹಿತ್ಯದಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊಟ್ಟ ಮೊದಲ ಮಹಿಳೆ ಇವರಾಗಿದ್ದಾರೆ.

ಹ್ಯಾನ್ ಕಾಂಗ್ ಅವರು 2016ರಲ್ಲಿ ''ದಿ ವೆಜಿಟೇರಿಯನ್‌'' ಎಂಬ ತಮ್ಮ ಕಾದಂಬರಿಗಾಗಿ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ಆ ಪ್ರಶಸ್ತಿಯನ್ನು ಗೆದ್ದ ಮೊದಲ ಕೊರಿಯನ್ ಎಂಬ ಹೆಗ್ಗಳಿಕೆ ಕೂಡ ಅವರದ್ದಾಗಿದೆ. ಓರ್ವ ಮಹಿಳೆ ಮಾಂಸ ತಿನ್ನುವುದನ್ನು ನಿಲ್ಲಿಸಲು ನಿರ್ಧರಿಸಿದ ಬಳಿಕ ಏನೆಲ್ಲ ಪರಿಣಾಮಗಳನ್ನು ಎದುರಿಸಬೇಕಾಯಿತು ಅನ್ನೋದನ್ನು ಈ ಕೃತಿ ಒಳಗೊಂಡಿದೆ. ಅವರ ಇನ್ನೊಂದು ಕಾದಂಬರಿ 'ಹ್ಯೂಮನ್ ಆಕ್ಟ್ಸ್' 2018 ರಲ್ಲಿ ಬೂಕರ್ ಪ್ರಶಸ್ತಿಯ ಅಂತಿಮ ಸುತ್ತನ್ನು ತಲುಪಿದೆ.

ನಿಯತಕಾಲಿಕದಲ್ಲಿ ಹ್ಯಾನ್ ಕಾಂಗ್ ಅವರ ಹಲವು ಕವಿತೆಗಳು ಪ್ರಕಟವಾಗಿವೆ. ಅವರೇ ಬರೆದ ''ದಿ ವೆಜಿಟೇರಿಯನ್‌'' ಕಾದಂಬರಿಯನ್ನು ತಮಿಳು ಕವಿ ಸಮಯವೇಲ್ ಅವರು ''ಮರಕರಿ'' ಎಂಬ ಹೆಸರಿನಲ್ಲಿ ತಮಿಳಿಗೆ ಅನುವಾದಿಸಿದ್ದಾರೆ. ಈಟಿವಿ ಭಾರತ ಕವಿ ಸಮಯವೇಲ್ ಅವರ ಸಂದರ್ಶನ ನಡೆಸಿದ್ದು, ವಿಶೇಷ ಸಂದರ್ಶನದ ಮಾಹಿತಿ ಇಲ್ಲಿದೆ.

ಹ್ಯಾನ್​ ಕಾಂಗ್ ಹಿನ್ನೆಲೆ:2024ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಹ್ಯಾನ್ ಕಾಂಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಇದೀಗ ಸೆಳೆದಿದ್ದಾರೆ. 1970ರಲ್ಲಿ ದಕ್ಷಿಣ ಕೊರಿಯಾದ ಗ್ವಾಂಗ್ಜುದಲ್ಲಿ ಜನಿಸಿದ ಹ್ಯಾನ್ ಕಾಂಗ್, ಆ ದೇಶದ ಸಾಹಿತ್ಯ ಲೋಕದಲ್ಲಿ ತನ್ನನ್ನು ತಾನು ಮೊದಲು ಕವಿಯಾಗಿ ಗುರುತಿಸಿಕೊಂಡವರು. 'ದಿ ವೆಜಿಟೇರಿಯನ್' ಎಂಬ ಮೂರು ಭಾಗಗಳ ಕಾದಂಬರಿಯನ್ನು ರಚಿಸುವ ಮೂಲಕ ಸಾಹಿತ್ಯದಲ್ಲಿ ಹೊಸ ಕ್ರಾಂತಿ ಹುಟ್ಟು ಹಾಕಿದ ಶ್ರೇಯಸ್ಸು ಅವರದ್ದಾಗಿದೆ. ಇದಕ್ಕೆ ಅವರು 2016ರಲ್ಲಿ ಮ್ಯಾನ್ ಬೂಕರ್ ಪ್ರಶಸ್ತಿ ಕೂಡ ಗೆದ್ದರು. ಆ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಗುರುತಿಸಿಕೊಂಡರು.

ಸಮಯವೇಲ್ ಅವರ ಸಂದರ್ಶನ: ನನ್ನ ಯೌವನದಿಂದಲೂ ನಾನು ಎಲ್ಲಾ ದೇಶದ ಸಾಹಿತ್ಯವನ್ನು ಓದುತ್ತಿದ್ದೆ. ಹಾಗಾಗಿಯೇ ನನಗೆ ದಕ್ಷಿಣ ಕೊರಿಯಾದ ಸಾಹಿತ್ಯದ ಪರಿಚಯವಾಯಿತು. ನನಗೆ ಕೊರಿಯಾದ ಬಗ್ಗೆ ವಿಶೇಷವಾದ ಆಕರ್ಷಣೆ ಇದೆ. ಏಕೆಂದರೆ ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯಿಂದ ಬೌದ್ಧ ಧರ್ಮ ಚೀನಾ, ಜಪಾನ್, ಕೊರಿಯಾ, ಶ್ರೀಲಂಕಾ ಮುಂತಾದ ದೇಶಗಳಿಗೆ ಹರಡಿತು. ಆಗ ಇಲ್ಲಿಂದ ಪುಸ್ತಕಗಳನ್ನು ಸಾಗಿಸುವುದು ತುಂಬಾ ಅಪಾಯಕಾರಿಯಾಗಿತ್ತು. ಆದ್ದರಿಂದ, 18 ಬೌದ್ಧ ಸನ್ಯಾಸಿಗಳ ಗುಂಪು ಅದನ್ನು ಓದಿ, ಕಂಠಪಾಠ ಮಾಡಿ ಮತ್ತು ಅಲ್ಲಿನ ವಿಚಾರಗಳನ್ನು ತೆಗೆದುಕೊಂಡಿತು ಎಂದು ಸಮಯವೇಲ್ ತಮ್ಮ ಸಾಹಿತ್ಯಾಸಕ್ತಿ ಬಗ್ಗೆ ಮಾಹಿತಿ ನೀಡಿದರು.

ಸಾವಿನ ಬಗ್ಗೆ ಮಹತ್ತರ ಅಧ್ಯಯನ:ಹ್ಯಾನ್​ ಹಾಂಗ್ ಅವರ ‘ದಿ ವೆಜಿಟೇರಿಯನ್’ ಕಾದಂಬರಿ ಕೂಡ ಇಂತಹದ್ದೇ ಸೈದ್ಧಾಂತಿಕ ಹಿನ್ನೆಲೆಯನ್ನು ಹೊತ್ತು ಬಂದಿದೆ. ಅದಕ್ಕಾಗಿಯೇ ಆ ಕಾದಂಬರಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಲೇಖಕಿ ಹಾನ್ ಹಾಂಗ್ ಅವರು ತಮ್ಮ ಮನಸ್ಸಿನಲ್ಲಿರುವ ಮೂಲಭೂತ ಪ್ರಶ್ನೆಗಳ ಹಿನ್ನೆಲೆಯಿಂದ ಈ ಕಾದಂಬರಿಯನ್ನು ರಚಿಸಿದ್ದಾರೆ. ಹಾಗಾಗಿ ಅದು ಎಲ್ಲರಿಗೂ ತಟ್ಟುತ್ತದೆ. ಹಾನ್ ಹಾಂಗ್ ಅವರು ಮಾನವರನ್ನು ಈ ಭೂಮಿಯ ಮೇಲಿನ ಎಲ್ಲಾ ಜೀವ ರಾಶಿಗಳೊಂದಿಗೆ ಹೋಲಿಸುತ್ತಾರೆ. ನಾವು ಏಕೆ ಹುಟ್ಟಿದ್ದೇವೆ? ನಾವು ಏಕೆ ಬದುಕುತ್ತೇವೆ? ನಾವೇಕೆ ಸಾಯುತ್ತೇವೆ? ಇದಲ್ಲದೆ, ಈ ಕಾದಂಬರಿಯು ಸಾವಿನ ಬಗ್ಗೆ ಒಂದು ಉತ್ತಮ ಅಧ್ಯಯನವಾಗಿದೆ. ಮನುಷ್ಯನು ಹುಟ್ಟಿನಿಂದ ಸಾಯುವವರೆಗೆ ಹೋರಾಟಗಳನ್ನು ಏಕೆ ಎದುರಿಸಬೇಕಾಗುತ್ತದೆ? ಎಂಬ ಪ್ರಶ್ನೆಯನ್ನು ಆಧರಿಸಿ ಅವರು ಈ ಕಾದಂಬರಿಯನ್ನು ರಚಿಸಿದ್ದಾರೆ ಎನ್ನುತ್ತಾರೆ ಕವಿ ಸಮಯವೇಲ್.

ಹ್ಯಾನ್ ಅವರು ಬೌದ್ಧ ಸಂಪ್ರದಾಯವನ್ನು ಆಧರಿಸಿ ಈ ಪುಸ್ತಕವನ್ನು ರಚಿಸಿದ್ದಾರೆ. 'ದಿ ವೆಜಿಟೇರಿಯನ್' ಅನ್ನು ಹ್ಯಾನ್ ಕಾಂಗ್ ಅವರ ವೈಯಕ್ತಿಕ ಮಾನಸಿಕ ಸಮಸ್ಯೆ, ಪಾಶ್ಚಿಮಾತ್ಯ ತತ್ವಶಾಸ್ತ್ರ, ಬೌದ್ಧ ಸಿದ್ಧಾಂತದೊಂದಿಗೆ ಸಂಘರ್ಷದಲ್ಲಿರುವ ನಿರಾಕರಣೆಯ ಸಿದ್ಧಾಂತದೊಂದಿಗೆ ಕಾದಂಬರಿಯಾಗಿ ಅಭಿವೃದ್ಧಿಪಡಿಸಲಾಗಿದೆ ಎನ್ನುತ್ತಾರೆ ಸಮಯವೇಲ್.

ಮರಕರಿಯ ಹಿನ್ನೆಲೆ: ''ದಿ ವೆಜಿಟೇರಿಯನ್‌'' ಕಾದಂಬರಿಯನ್ನು ತಮಿಳಿಗೆ ಅನುವಾದಿಸಿದಾಗ ''ಸಸ್ಯಾಹಾರ'' ಎಂದು ಅನುವಾದಿಸಿದರೆ ಧಾರ್ಮಿಕ ಸಿದ್ಧಾಂತವಾಗುವ ಅಪಾಯವಿತ್ತು. ಆದರೆ, ಈ ಕಾದಂಬರಿಯು ಯಾವುದೇ ಧರ್ಮವನ್ನು ಉಲ್ಲೇಖಿಸುವುದಿಲ್ಲವಾದ್ದರಿಂದ ಶೀರ್ಷಿಕೆಗೆ ಹೆಚ್ಚಿನ ಗಮನ ನೀಡಬೇಕಾಯಿತು. ಹಾಗಾಗಿ ಬಹಳ ಚರ್ಚೆಯ ನಂತರ ನಾನು ಅದನ್ನು ''ಮರಕರಿ'' ಎಂದು ಅನುವಾದಿಸಿದೆ. ಇಂದಿಗೂ ಸಿಂಗಾಪುರ, ಮಲೇಷಿಯಾ, ಶ್ರೀಲಂಕಾ ಮತ್ತು ಈಳಂನಲ್ಲಿ ನೆಲೆಸಿರುವ ಜನರು ''ಮರಕರಿ'' ಪದವನ್ನು ದಿನನಿತ್ಯ ಬಳಸುತ್ತಾರೆ. ಹಾಗಾಗಿ ಆ ಶೀರ್ಷಿಕೆಯನ್ನು ಆಯ್ಕೆ ಮಾಡಬೇಕಾಯಿತು ಎಂದು ಸಮಯವೇಲ್ ತಮ್ಮ ಪುಸ್ತಕದ ಪರಿಚಯ ಮಾಡಿಕೊಂಡರು.

ಖಿನ್ನತೆಯಿಂದ ಮುಕ್ತಿ:ಹ್ಯಾನ್ ಅವರು ಮ್ಯಾನ್ ಬೂಕರ್ ಪ್ರಶಸ್ತಿ ಪಡೆಯುವ ಮುನ್ನವೇ ನನ್ನ ಸ್ನೇಹಿತರಾಗಿದ್ದರು. ಈ ಕಾದಂಬರಿಯ ಬಗ್ಗೆ ಇಂಗ್ಲಿಷ್‌ನಲ್ಲಿ ನನ್ನ ವಿಮರ್ಶೆಯನ್ನು ಓದಿದ ನಂತರ ಅವರು ನನ್ನನ್ನು ಸಂಪರ್ಕಿಸಿದ್ದರು. ಅಂದಿನಿಂದ ಇಂದಿನವರೆಗೂ ನಮ್ಮ ಸ್ನೇಹ ಮುಂದುವರಿದಿದೆ. ಈ ಪ್ರಶಸ್ತಿಯು ಅವರನ್ನು ಮಾನಸಿಕ ಸಮಸ್ಯೆಗಳಿಂದ ಮುಕ್ತಿಗೊಳಿಸಿತು ಎಂದರೆ ಅತಿಶಯೋಕ್ತಿಯಲ್ಲ. ನೊಬೆಲ್ ಪ್ರಶಸ್ತಿ ಸ್ವೀಕರಿಸುವ ಮುನ್ನ ಅವರು ನಮಗೆ ಇ-ಮೇಲ್ ಮೂಲಕ ಪತ್ರ ಬರೆದಿದ್ದರು. ತನಗೆ ಬರೆಯಲು ಸಾಧ್ಯವಾಗುತ್ತಿಲ್ಲ, ನೊಬೆಲ್ ಪ್ರಶಸ್ತಿಯ ನಂತರ ತನ್ನಲ್ಲಿ ಸ್ಫೂರ್ತಿ ಹುಟ್ಟಿದೆ ಎಂದು ಇ-ಮೇಲ್​ ಕಳುಹಿಸಿದ್ದರು ಎಂದು ಸಮಯವೇಲ್ ಅವರ ಒಡನಾಟವನ್ನು ಸ್ಮರಿಸಿಕೊಂಡರು.

9ಕ್ಕೂ ಹೆಚ್ಚು ಕೃತಿ:ಹ್ಯಾನ್ ಕಾಂಗ್ ಅವರು ಸಾಹಿತ್ಯದ ಅನುಭವಕ್ಕಾಗಿ ಆರು ಕಾದಂಬರಿ ಮತ್ತು ಎರಡು ಕವನ ಸಂಕಲನಗಳನ್ನು ಒಳಗೊಂಡ ಒಟ್ಟು 9ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ Human Life ಎಂಬ ಇನ್ನೊಂದು ಕಾದಂಬರಿಯೂ ಬಹಳ ಮುಖ್ಯವಾದುದು. ಹ್ಯಾನ್ ಕಾಂಗ್​ ನೊಬೆಲ್ ಪ್ರಶಸ್ತಿಯನ್ನು ಗೆಲ್ಲಲು ಪ್ರಮುಖ ಕಾರಣವೆಂದರೆ ಅವರ ಬರವಣಿಗೆಯಲ್ಲಿರುವ ಶಕ್ತಿ. ಈವರೆಗೆ ಯಾರೂ ಬಳಸದ ಶೈಲಿಯನ್ನು ಅಕ್ಷರ ರೂಪದಲ್ಲಿ ಅವರು ಬಳಸಿದ್ದಾರೆ. ಅವರು ಕಾವ್ಯದಲ್ಲಿ ಪಾರಂಗತಳಾಗಿದ್ದರಿಂದ, 'ದಿ ವೆಜಿಟೇರಿಯನ್' ಕಾದಂಬರಿಯಲ್ಲಿ ಕಾವ್ಯಾತ್ಮಕ ಗದ್ಯವನ್ನು ಸಹ ಬಳಸಿದ್ದಾರೆ. ಹಾಗಾಗಿ ಇದು ಎಲ್ಲ ಓದುಗರಿಗೂ ಹೊಸ ಅನುಭವ ನೀಡುತ್ತದೆ ಎನ್ನುತ್ತಾರೆ ಸಮಯವೇಲ್.

18 ತಿಂಗಳಲ್ಲಿ ಮರಕರಿ: ನಾನು ಅವರ ಕಾದಂಬರಿಯನ್ನು ಓದಿ ಆನಂದಿಸಿದ್ದೆ. ಅದನ್ನು ಭಾಷಾಂತರಿಸಲು 18 ತಿಂಗಳು ಬೇಕಾಯಿತು. ಇದೇ ರೀತಿಯ ಗದ್ಯವನ್ನು ಬಳಸಿದ ಲಿಡಿಯಾ ಡೇವಿಸ್ ಅವರ ಬರವಣಿಗೆಯ ಶೈಲಿ ಈ ಕಾದಂಬರಿಯಲ್ಲಿದೆ ಎಂಬ ಬಗ್ಗೆ ಗೊತ್ತಾಯಿತು. ಹಾಗಾಗಿ ಅನುವಾದಿಸಲು ಸರಳವಾಯಿತು. ಕೋಣಂಗಿ ಸೇರಿದಂತೆ ಹಲವು ಸಾಹಿತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಮರಕರಿ ಕಾದಂಬರಿಯನ್ನು ತಮಿಳು ಸಾರ್ವಜನಿಕ ಪ್ರಕಾಶನವು ಹಕ್ಕುಸ್ವಾಮ್ಯ ಮತ್ತು ಪ್ರಕಟಿಸಿದೆ. ಇದಕ್ಕಾಗಿ ಪೇಟೆಂಟ್ ಪಡೆಯುವ ವಿಧಾನವನ್ನು ಲಂಡನ್‌ನಲ್ಲಿರುವ ಆಯಾ ಏಜೆಂಟ್‌ಗಳ ಮೂಲಕ ಮಾಡಲಾಯಿತು. ಇದಕ್ಕಾಗಿ ಭಾರತೀಯ ಕರೆನ್ಸಿಯಲ್ಲಿ ರೂ.13,000 ಶುಲ್ಕವನ್ನು ಪಾವತಿಸಲಾಗಿದೆ ಎಂದರು.

ಹೆಸರು ಪ್ರಕಟ:2024ರ ನೊಬೆಲ್ ಪ್ರಶಸ್ತಿ ಪಟ್ಟಿಯಲ್ಲಿ ಹ್ಯಾನ್ ಕಾಂಗ್ ಕೊನೆಯ ಸ್ಥಾನದಲ್ಲಿದ್ದರು. ಅವರು ಅನೇಕರು ನಿರೀಕ್ಷಿಸದ ವ್ಯಕ್ತಿಯಾಗಿದ್ದರು. ಪ್ರಶಸ್ತಿಯ ಮೊದಲ ಪಟ್ಟಿಯಲ್ಲಿ ಅವರ ಹೆಸರು ಇಲ್ಲದಿರುವುದು ನನಗೆ ಆಶ್ಚರ್ಯ ತಂದಿತ್ತು. ಆದರೆ, ನಂತರ, ಹ್ಯಾನ್ ಕಾಂಗ್ ಅವರ ಹೆಸರು ಪ್ರಕಟಿಸಲಾಯಿತು. ತಕ್ಷಣ ನಾನು ಅವರಿಗೆ ನನ್ನ ಶುಭಾಶಯ ತಿಳಿಸಿದೆ. ಈ ಕಾದಂಬರಿಯನ್ನು ಎಲ್ಲರೂ ಓದಲೇಬೇಕು. ಅದರಲ್ಲೂ ಯುವ ಬರಹಗಾರರು, ಕವಿಗಳು, ಸಣ್ಣ ಕಥೆಗಾರರು ಇದನ್ನು ಓದಬೇಕು ಎನ್ನುತ್ತಾರೆ ಸಮಯವೇಲ್.

ಇದನ್ನೂ ಓದಿ: ದಕ್ಷಿಣ ಕೊರಿಯಾದ ಲೇಖಕಿ ಹನ್ ಕಾಂಗ್​​ರಿಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ ಗರಿ

ABOUT THE AUTHOR

...view details