ಭುವನೇಶ್ವರ, ಒಡಿಶಾ: ಇದೇ ಮೊದಲ ಬಾರಿಗೆ ಒಡಿಶಾ ಸರ್ಕಾರ ಮೂರು ದಿನಗಳ ಕಾಲ ಅದ್ದೂರಿಯ ಭಾರತೀಯ ಪ್ರವಾಸಿ ದಿವಸ್ ಆಚರಣೆಗೆ ಸಜ್ಜಾಗಿದೆ. ಜನವರಿ 8 ರಿಂದ ಪ್ರಾರಂಭವಾಗಲಿರುವ ಈ ಕಾರ್ಯಕ್ರಮಕ್ಕೂ ಮುನ್ನ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಭಯೋತ್ಪಾದಕ ದಾಳಿ ನಡೆಸುವ ಬೆದರಿಕೆ ಸಂದೇಶ ರವಾನಿಸಿದ್ದಾನೆ. ವಿಡಿಯೋ ಮೂಲಕ ಸಂದೇಶ ಹಂಚಿಕೊಂಡಿರುವ ಪನ್ನುನ್, ಇದರ ಜೊತೆಗೆ ವಿದೇಶಾಂಗ ಸಚಿವ ಜೈಶಂಕರ್ಗೆ ಕೂಡ ವಾರ್ನಿಂಗ್ ಕೊಟ್ಟಿದ್ದಾನೆ.
ನಿಷೇಧಿತ ಸಿಖ್ ಫಾರ್ ಜಸ್ಟೀಸ್ ಸಂಘಟನೆಯ ಪನ್ನುನ್ ವಕ್ತಾರ ಈ ಕುರಿತು ಹಿರಿಯ ಪತ್ರಕರ್ತರೊಬ್ಬರಿಗೆ ಬೆದರಿಕೆ ಸಂದೇಶ ರವಾನಿಸಿದ್ದು, 18ನೇ ಪ್ರವಾಸಿ ಭಾರತೀಯ ದಿವಸ್ಗೆ ದೊಡ್ಡ ಅಡಚಣೆ ಉಂಟು ಮಾಡುವುದಾಗಿ ತಿಳಿಸಿದ್ದಾನೆ.
ಭುವನೇಶ್ವರ್ ಪ್ರವಾಸಿ ಭಾರತೀಯ ದಿನವನ್ನು ಆಯೋಜಿಸುವ ಮೂಲಕ ದೇಗುಲ ನಗರದ ಬದಲಾಗಿ ಉಗ್ರರ ನಗರ ಎಂಬುದನ್ನು ಸಾಬೀತು ಮಾಡಲಿದೆ. ಈ ಕಾರ್ಯಕ್ರಮವನ್ನು ಭಾರತೀಯ ಹಿಂದೂ ಉಗ್ರ ಮುಖವಾದ ನರೇಂದ್ರ ಮೋದಿ ಅವರು ಉದ್ಭಾಟಿಸಲಿದ್ದಾರೆ ಎಂದು ಪನ್ನುನ್ ತನ್ನ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾನೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡಲು ನೋಂದಣಿ ಮಾಡುವಂತೆ ಕೂಡ ಖಲಿಸ್ತಾನಿ ಪರ ಕಾರ್ಯಕರ್ತರಿಗೆ ಕರೆ ನೀಡಿದ್ದಾನೆ.
ವಿದೇಶಾಂಗ ಸಚಿವ ಜೈ ಶಂಕರ್ಗೆ ಎಚ್ಚರಿಕೆ: ವಿದೇಶಾಂಗ ಸಚಿವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಪನ್ನುನ್ ಜೈ ಶಂಕರ್ ಭಾರತೀಯ ಹಿಂದೂ ಉಗ್ರರ ನೆಟ್ವರ್ಕ್ನ ಮುಖವಾಗಿದ್ದಾರೆ. ಅವರು, ಗೂಢಚಾರರ ನೆಟ್ವರ್ಕ್ ಅಭಿಯಾನವನ್ನು ಪುನರ್ಕಟ್ಟುವಲ್ಲಿ ಮುಂಚೂಣಿಯಲ್ಲಿದ್ದಾರೆ. ಖಲಿಸ್ತಾನಿ ಪರ ಸಿಖ್ಖರು ನಿಮ್ಮನ್ನು ಶೂನ್ಯಗೊಳಿಸಲಿದ್ದಾರೆ ಎಂದು ಆತ ತನ್ನ ಸಂದೇಶದಲ್ಲಿ ಎಚ್ಚರಿಸಿದ್ದಾನೆ.