ನವದೆಹಲಿ : ದೆಹಲಿ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಅವರ ಸಂಪುಟ ಸಚಿವರು ವಾಸ್ತವ್ಯಕ್ಕೆ ಸರ್ಕಾರಿ ಬಂಗಲೆ ಹುಡುಕಾಟಕ್ಕೆ ಮುಂದಾಗಿದ್ದಾರೆ. ಇದೀಗ ದೆಹಲಿ ಸಿಎಂಗೆ ಶಾಶ್ವತ ಸರ್ಕಾರಿ ನಿವಾಸವಿಲ್ಲದಿರುವುದು ಇದಕ್ಕೆ ಕಾರಣವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಬದಲಾವಣೆಯಾದಾಗಲೆಲ್ಲಾ ಮುಖ್ಯಮಂತ್ರಿಗಳ ನಿವಾಸ ಕೂಡ ಬದಲಾಗುತ್ತಲೇ ಇರುತ್ತದೆ.
ರೇಖಾ ಗುಪ್ತಾ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕಳೆದೆರಡು ದಿನಗಳಲ್ಲಿ ದೆಹಲಿ ಸೆಕ್ರೆಟೇರಿಯೇಟ್ನಲ್ಲಿ ವಿವಿಧ ಇಲಾಖೆಯಲ್ಲಿ ಸಭೆಯನ್ನು ನಡೆಸಿದ್ದಾರೆ. ಸದ್ಯ ಶಾಲಿಮಾರ್ ಬಾಗ್ನಲ್ಲಿ ಖಾಸಗಿ ನಿವಾಸದಲ್ಲಿ ಅವರು ವಾಸ್ತವ್ಯ ಹೂಡಿದ್ದಾರೆ. ಶೀಶ್ ಮಹಲ್ನಲ್ಲಿ ವಾಸ್ತವ್ಯ ಹೂಡಲು ಅವರು ನಿರಾಕರಿಸಿದ್ದು, ಅದಕ್ಕೆ ಪರ್ಯಾಯ ನಿವಾಸದ ಹುಡುಕಾಟ ನಡೆಸಿದ್ದಾರೆ. ಆದರೆ, ಇನ್ನು ಯಾವ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂಬುದನ್ನು ನಿರ್ಧರಿಸಿಲ್ಲ ಎಂದು ವರದಿಯಾಗಿದೆ.
ದೆಹಲಿ ವಿಧಾನಸಭೆ ಚುನಾವಣೆಗೆ ಮುನ್ನವೇ ಸಿಎಂ ನಿವಾಸ ಕುರಿತು ಮಾತನಾಡಿದ್ದ ಆಡಳಿತರೂಢ ಬಿಜೆಪಿ ರಾಜ್ಯಾಧ್ಯಕ್ಷ ವಿರೇಂದ್ರ ಸಚ್ದೇವ್, ತಮ್ಮ ಸರ್ಕಾರ ರಚನೆಯಾದಲ್ಲಿ ನಮ್ಮ ಸಿಎಂ ಈ ಹಿಂದೆ ಕೇಜ್ರಿವಾಲ್ ನೆಲೆಸಿದ್ದ ಶೀಶ್ಮಹಲ್ನಲ್ಲಿ ನೆಲೆಸುವುದಿಲ್ಲ ಎಂದಿದ್ದರು. ಇದೀಗ ಈ ಕುರಿತು ರೇಖಾ ಗುಪ್ತಾ ಕೂಡ ವಿವಾದಾತ್ಮಕ ಬಂಗಲೆಯಲ್ಲಿ ತಾವು ನೆಲೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ, ಈ ಶೀಶಮಹಲ್ ನಿರ್ಮಾಣದ ಅಕ್ರಮದ ಆರೋಪ ಕುರಿತು ತನಿಖೆ ನಡೆಯುತ್ತಿದೆ. ಈ ಹಿನ್ನೆಲೆ ಲೋಕೋಪಯೋಗಿ ಇಲಾಖೆಯು ಸಿಎಂ ರೇಖಾ ಗುಪ್ತಾ ಅವರ ಸರ್ಕಾರಿ ನಿವಾಸಕ್ಕೆ ಮತ್ತಷ್ಟು ಆಯ್ಕೆ ನೀಡಲಿದೆ. ಸಿವಿಲ್ ಲೈನ್, ದರ್ಯಾಗಂಜ್ ರಸ್ತೆ ಮತ್ತು ಮಥುರಾ ರಸ್ತೆಯಲ್ಲಿರುವ ಬಂಗಲೆಗಳ ಹುಡುಕಾಟವೂ ಸಾಗಿದೆ. ಆದರೆ, ಈ ಕುರಿತ ಅಂತಿಮ ನಿರ್ಧಾರ ಸಿಎಂ ರೇಖಾ ಗುಪ್ತಾ ಅವರದ್ದಾಗಿದೆ.
ಇತರೆ ರಾಜ್ಯಗಳಲ್ಲಿ ಸಿಎಂಗೆ ಸೀಮಿತವಾದ ಸರ್ಕಾರಿ ಬಂಗಲೆಗಳಿವೆ. ಆದರೆ, ದೆಹಲಿಯಲ್ಲಿ ಈ ರೀತಿ ನಿರ್ದಿಷ್ಟ ಬಂಗಲೆ ಇಲ್ಲದಿರುವುದು ಸರ್ಕಾರ ಬದಲಾಗುತ್ತಿದ್ದಂತೆ ಸಿಎಂ ಸರ್ಕಾರಿ ನಿವಾಸದ ಹುಡುಕಾಟ ದೊಡ್ಡ ವಿಷಯವಾಗುತ್ತದೆ. ಆಮ್ ಆದ್ಮಿ ಸರ್ಕಾರದಲ್ಲಿ ಎಲ್ಲಾ ಸಚಿವರು ದೆಹಲಿ ವಿಧಾನಸಭೆಗೆ ಸಮೀಪದ ರಾಜ್ ನಿವಾಸ್ ರಸ್ತೆಯ ಪಿಡಬ್ಕ್ಯೂಡಿಯ ಸರ್ಕಾರಿ ಬಂಗಲೆಯಲ್ಲಿ ವಾಸ್ತವ್ಯ ನಡೆಸಿದ್ದರು.
ಈಗಲೂ ಕೂಡ ಬಹತೇಕ ಸಚಿವರು ಸಿವಿಲ್ ಲೈನ್ನ ಬಂಗಲೆಗಳಲ್ಲೇ ಇದ್ದಾರೆ. 27 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಇದೀಗ ಸರ್ಕಾರಿ ನಿವಾಸ ಆಯ್ಕೆಯಲ್ಲಿ ಕೊಂಚ ಸಮಯ ತೆಗೆದುಕೊಳ್ಳಲಿದೆ.
2013ರಲ್ಲಿ ಅರವಿಂದ್ ಕೇಜ್ರಿವಾಲ್ ಮೊದಲ ಬಾರಿಗೆ ಸಿಎಂ ಆದಾಗ, ತಿಲಕ್ ಮಾರ್ಗ್ನಲ್ಲಿ ಸರ್ಕಾರಿ ನಿವಾಸದಲ್ಲಿ ಇದ್ದರು. 2015ರಲ್ಲಿ ಸಂಪೂರ್ಣ ಬಹುಮತದ ಸರ್ಕಾರ ರಚನೆ ಬಳಿಕ ಅವರು ಸಿವಿಲ್ ಲೈನ್ ರಸ್ತೆಯಲ್ಲಿನ ಫ್ಲಾಗ್ ಸ್ಟಾಫ್ ರೋಡ್ಗೆ ವಾಸ್ತವ್ಯ ಬದಲಾಯಿಸಿದರು. ಈ ಬಂಗಲೆಯ ನವೀಕರಣವನ್ನು ಅವರು ನಡೆಸಿದ್ದು ಅದು ವಿವಾದಕ್ಕೆ ಗುರೊಯಾಯಿತು. ಇದಕ್ಕೂ ಮುನ್ನ ಇದ್ದ ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಅವಧಿಯಲ್ಲೂ ಶೀಲಾ ದೀಕ್ಷಿತ್ ಮೋತಿಲಾಲ್ ನೆಹರೂ ಮಾರ್ಗನ ಸರ್ಕಾರಿ ನಿವಾಸದಲ್ಲಿ ನೆಲೆಸಿದ್ದರು.
ಇದನ್ನೂ ಓದಿ: ಸಚಿವರ ’ಅಜ್ಜಿ‘ ಹೇಳಿಕೆ ತಂದ ಕೋಲಾಹಲ; ರಾಜಸ್ಥಾನ ಕಾಂಗ್ರೆಸ್ ಶಾಸಕರಿಂದ ಅಹೋರಾತ್ರಿ ಧರಣಿ
ಇದನ್ನೂ ಓದಿ: ರೈಲ್ವೆ ಕಾಮಗಾರಿಗಾಗಿ ಮುಸ್ಲಿಮರಿಂದಲೇ 168 ವರ್ಷಗಳ ಹಳೆಯ ಮಸೀದಿ ತೆರವು