ಕರ್ನಾಟಕ

karnataka

ETV Bharat / bharat

ರಾಜ್ಯಸಭಾ ಸಭಾಪತಿ ಧನ್ಕರ್ ವಿರುದ್ಧ 'ಅವಿಶ್ವಾಸ ಗೊತ್ತುವಳಿ' ಮಂಡಿಸಿದ ಇಂಡಿಯಾ ಮೈತ್ರಿಕೂಟ - JAGDEEP DHANKHAR

ಸಭಾಪತಿ ಧನ್ಕರ್ ವಿರುದ್ಧ ಇಂಡಿಯಾ ಬ್ಲಾಕ್ ಅವಿಶ್ವಾಸ ಗೊತ್ತುವಳಿ ಮಂಡಿಸಿದೆ.

ಸಭಾಪತಿ ಜಗದೀಪ್ ಧನ್ಕರ್
ರಾಜ್ಯಸಭಾ ಸಭಾಪತಿ ಜಗದೀಪ್ ಧನ್ಕರ್ (IANS)

By ETV Bharat Karnataka Team

Published : Dec 10, 2024, 4:25 PM IST

ನವದೆಹಲಿ: ರಾಜ್ಯಸಭೆಯ ಸಭಾಪತಿ ಜಗದೀಪ್ ಧನ್ಕರ್ ವಿರುದ್ಧ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ರಾಜ್ಯಸಭೆಯಲ್ಲಿ ಮಂಗಳವಾರ ಅವಿಶ್ವಾಸ ಗೊತ್ತುವಳಿ ಮಂಡಿಸಿವೆ. ಈ ಸಂಬಂಧ ಇಂಡಿಯಾ ಮೈತ್ರಿಕೂಟ ಸದಸ್ಯರು ಔಪಚಾರಿಕವಾಗಿ ಮೇಲ್ಮನೆಯ ಪ್ರಧಾನ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಪ್ರತಿಪಕ್ಷಗಳ ಆರೋಪವೇನು?: ಸಭಾಪತಿ ಧನ್ಕರ್ ಮೇಲ್ಮನೆಯ ಕಾರ್ಯಕಲಾಪಗಳನ್ನು ತೀರಾ ಪಕ್ಷಪಾತದಿಂದ ನಡೆಸುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದು, ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದರ ಹೊರತಾಗಿ ತಮಗೆ ಬೇರೆ ದಾರಿಯೇ ಇರಲಿಲ್ಲ ಎಂದು ಹೇಳಿವೆ. ರಾಜ್ಯಸಭೆಯ ಕಲಾಪಗಳನ್ನು ಪಕ್ಷಪಾತದಿಂದ ನಿರ್ವಹಿಸುವುದರಿಂದ ಪ್ರಜಾಪ್ರಭುತ್ವ ಪ್ರಕ್ರಿಯೆಯು ದುರ್ಬಲಗೊಳ್ಳುತ್ತದೆ ಎಂದು ಕಾಂಗ್ರೆಸ್ ಸದಸ್ಯರು ಸಮರ್ಥಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಡಿಯಾ ಬ್ಲಾಕ್​ನ ಎಲ್ಲಾ ಪಕ್ಷಗಳು ಒಟ್ಟಾಗಿ ನಿರ್ಣಯವನ್ನು ಮಂಡಿಸಿವೆ.

ನಿರ್ಣಯಕ್ಕೆ ಸಹಿ ಹಾಕಿದ ವಿರೋಧ ಪಕ್ಷದ ಸಂಸದರು ಇಂಥ ಪರಿಸ್ಥಿತಿ ಉದ್ಭವಿಸಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದು, ಸಂಸದೀಯ ಪ್ರಜಾಪ್ರಭುತ್ವದ ರಕ್ಷಣೆಗೆ ಇದು ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ. ಸುಮಾರು 60 ಸಂಸದರು ಸಹಿ ಮಾಡಿದ ಈ ಪ್ರಸ್ತಾಪವನ್ನು ಸಂವಿಧಾನದ 67- ಬಿ ವಿಧಿಯಡಿ ಸಲ್ಲಿಸಲಾಗಿದೆ.

ಈ ವಿಷಯವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸದಸ್ಯ ರಣದೀಪ್ ಸಿಂಗ್ ಸುರ್ಜೆವಾಲಾ ಭ್ರಷ್ಟಾಚಾರ, ಹಣದುಬ್ಬರ ಮತ್ತು ನಿರುದ್ಯೋಗದಂಥ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗಳು ನಡೆಯದಂತೆ ಆಡಳಿತ ಪಕ್ಷವು ಸಂಸತ್ತಿನಲ್ಲಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು.

"ಇದು ಸಂಸದೀಯ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ. ಸರ್ಕಾರವು ಚರ್ಚೆಗಳಿಂದ ಓಡಿಹೋಗುತ್ತಿದೆ ಮತ್ತು ಸಂಸತ್ತಿನ ಸಮಯವನ್ನು ವ್ಯರ್ಥ ಮಾಡುತ್ತಿದೆ" ಎಂದು ಅವರು ಹೇಳಿದರು.

ಭಾರತದ 75 ವರ್ಷಗಳ ಇತಿಹಾಸದಲ್ಲಿ ಸರ್ಕಾರವೇ ಸಂಸತ್ತಿನ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿರುವುದು ಇದೇ ಮೊದಲು ಎಂದು ಸುರ್ಜೆವಾಲಾ ಹೇಳಿದ್ದಾರೆ.

ಪ್ರತಿಪಕ್ಷಗಳು ಚರ್ಚೆಗೆ ಯಾವಾಗಲೂ ಸಿದ್ಧವಿವೆ ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಹೇಳಿದ್ದಾರೆ. ಆದರೆ ನಿರುದ್ಯೋಗ ಮತ್ತು ಯುಪಿಯ ಸಂಭಾಲ್​ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದಂಥ ವಿಷಯಗಳ ಬಗ್ಗೆ ಚರ್ಚೆ ನಡೆಯದಂತೆ ಬಿಜೆಪಿ ಉದ್ದೇಶಪೂರ್ವಕವಾಗಿ ಸದನವನ್ನು ಮುಂದೂಡುತ್ತಿದೆ ಎಂದು ಆರೋಪಿಸಿದರು. ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿಯು ಸಂಸತ್ತಿನಲ್ಲಿ ಉದ್ವಿಗ್ನತೆಯು ಹೆಚ್ಚಾಗುತ್ತಿರುವುದರ ಸಂಕೇತವಾಗಿದೆ. ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಎನ್​ಡಿಎ ಮತ್ತು ಇಂಡಿಯಾ ಬ್ಲಾಕ್​ನ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ.

ಇದನ್ನೂ ಓದಿ : ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ; ಡಿ. 12ರಿಂದ ಭಾರೀ ಮಳೆ ಸಾಧ್ಯತೆ

ABOUT THE AUTHOR

...view details