ಕರ್ನಾಟಕ

karnataka

By ETV Bharat Karnataka Team

Published : Jan 28, 2024, 4:09 PM IST

ETV Bharat / bharat

ಇಂಡಿಯಾ ಕೂಟ, ಆರ್​ಜೆಡಿ ಜೊತೆ ಕೆಲಸ ಮಾಡಲಾಗಲ್ಲ: ನಿತೀಶ್​ಕುಮಾರ್​

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿತೀಶ್​ಕುಮಾರ್​ ಮೊದಲ ಹೇಳಿಕೆ ನೀಡಿದ್ದು, ಇಂಡಿಯಾ ಕೂಟ ಮತ್ತು ಆರ್​ಜೆಡಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿತೀಶ್​ಕುಮಾರ್​
ನಿತೀಶ್​ಕುಮಾರ್​

ಪಾಟ್ನಾ (ಬಿಹಾರ) :ವಿಪಕ್ಷಗಳು ಸೇರಿಕೊಂಡು ರಚಿಸಿದ I.N.D.I.A ಮೈತ್ರಿಕೂಟವು ನಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ. ಆದ್ದರಿಂದ ಅಂತಿಮವಾಗಿ ನಾನು ಅಲ್ಲಿಂದ ಹೊರಬರಬೇಕಾಯಿತು ಎಂದು ಆರ್​ಜೆಡಿ, ಕಾಂಗ್ರೆಸ್​, ಎಡರಂಗದ ಮೈತ್ರಿ ಸರ್ಕಾರದಿಂದ ಹೊರಬಂದ ಬಳಿಕ ನಿತೀಶ್​ಕುಮಾರ್​ ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ನಾವೆಲ್ಲರೂ (ವಿಪಕ್ಷಗಳು) ಸೇರಿಕೊಂಡು ಮೈತ್ರಿಕೂಟವನ್ನು ರಚಿಸಿಕೊಂಡಿದ್ದೆವು. ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಲ್ಲಿನ ನಾಯಕರು ವಿಫಲವಾದರು. ನಾವು ನಿರೀಕ್ಷಿಸಿದ ಮಟ್ಟಿಗೆ ಕೂಟ ಸಕ್ರಿಯವಾಗಿ ಕೆಲಸ ಮಾಡಲಿಲ್ಲ. ಹೀಗಾಗಿ ನಾವು ಅಲ್ಲಿಂದ ಹೊರಬರಬೇಕಾಗಿ ಬಂತು ಎಂದು ಹೇಳಿದರು.

ಆರ್​ಜೆಡಿ ವಿರುದ್ಧವೂ ಟೀಕೆ:ಇನ್ನು, ಲಾಲು ಪ್ರಸಾದ್​ ಯಾದವ್​ ಅವರ ಆರ್​ಜೆಡಿ ವಿರುದ್ಧವೂ ಟೀಕಿಸಿದ ನಿತೀಶ್​ಕುಮಾರ್​, ಮೈತ್ರಿ ಪಕ್ಷವಾಗಿದ್ದ ಆರ್​ಜೆಡಿ ಜೊತೆ ಸರ್ಕಾರ ನಡೆಸುವುದು ಕಷ್ಟವಾಗಿತ್ತು. ಅಲ್ಲಿನ ನಾಯಕರ ನಡೆಗಳು, ನುಡಿಗಳು ಕಿರಿಕಿರಿ ಉಂಟು ಮಾಡುತ್ತಿದ್ದವು. ನನ್ನ ವಿರುದ್ಧವೇ ಅವರ ನಾಯಕರು ಟೀಕೆ ಮಾಡುತ್ತಿದ್ದರು. ಹೀಗಾಗಿ ಮೈತ್ರಿಯನ್ನು ಕಡಿದುಕೊಳ್ಳಬೇಕಾಗಿ ಬಂತು ಎಂದು ತಮ್ಮ ವಿರುದ್ಧ ಹಲವಾರು ಹೇಳಿಕೆಗಳನ್ನು ನೀಡುತ್ತಿರುವ ಆರ್‌ಜೆಡಿ ನಾಯಕರನ್ನು ದೂಷಿಸಿದರು.

ಲಾಲು ಪ್ರಸಾದ್ ಅವರ ಎರಡನೇ ಪುತ್ರಿ ರೋಹಿಣಿ ಆಚಾರ್ಯ ಅವರು ಎಕ್ಸ್​ನಲ್ಲಿ ಪೋಸ್ಟ್​ವೊಂದು ಹಂಚಿಕೊಂಡಿದ್ದರು. ಅದರಲ್ಲಿ ಅಯೋಗ್ಯ ಮತ್ತು ಒರಟ ಎಂದು ಬಳಕೆ ಮಾಡಲಾಗಿತ್ತು. ಅದನ್ನು ನಿತೀಶ್​ಕುಮಾರ್​ ಕುರಿತೇ ಹೇಳಲಾಗಿತ್ತು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು. ಆದರೆ, ಯಾವುದೇ ನಾಯಕರ ಹೆಸರನ್ನೂ ಅಲ್ಲಿ ಉಲ್ಲೇಖ ಮಾಡಿರಲಿಲ್ಲ. ಜೊತೆಗೆ "ಲಾಲು ಪ್ರಸಾದ್ ಅವರ ಆಶೀರ್ವಾದದಿಂದಾಗಿಯೇ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದಾರೆ" ಎಂದು ಆರ್​ಜೆಡಿ ಶಾಸಕ ಭಾಯಿ ವೀರೇಂದ್ರ ಅವರು ಹೇಳಿಕೆ ನೀಡಿದ್ದರು. ಇದೂ ಕೂಡ ಜೆಡಿಯು ನಾಯಕನಿಗೆ ಇರಿವುಮುರಿಸು ತಂದಿತ್ತು.

ನಿತೀಶ್​ ವಿರುದ್ಧ ಕಾಂಗ್ರೆಸ್​ ಕೆಂಡ:ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು 'ಊಸರವಳ್ಳಿ'ಗೆ ಹೋಲಿಸಿರುವ ಕಾಂಗ್ರೆಸ್, ಅವರು ಮಾಡಿರುವ ದ್ರೋಹವನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸಲ್ಲ ಎಂದು ಹೇಳಿದೆ. ಮಹಾಘಟಬಂಧನ್ ಮೈತ್ರಿಕೂಟ ತೊರೆಯುವ ನಿತೀಶ್ ಕುಮಾರ್ ಅವರ ನಿರ್ಧಾರಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

"ಭಾರತ್ ಜೋಡೋ ನ್ಯಾಯ್ ಯಾತ್ರೆಯಿಂದ ಗಮನ ಬೇರೆಡೆಗೆ ಸೆಳೆಯಲು ರಾಜಕೀಯ ನಾಟಕ ಸೃಷ್ಟಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಶೀಘ್ರದಲ್ಲೇ ಬಿಹಾರ ಪ್ರವೇಶಿಸಲಿರುವ ರಾಹುಲ್ ಗಾಂಧಿಯವರ ಭಾರತ್ ಜೋಡೊ ನ್ಯಾಯ್ ಯಾತ್ರೆಯ ಬಗ್ಗೆ ಪ್ರಧಾನಿ ಮತ್ತು ಬಿಜೆಪಿಗೆ ಭಯವಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ" ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹರಿಹಾಯ್ದಿದ್ದಾರೆ.

ಇದನ್ನೂ ಓದಿ:ನಿತೀಶ್ ದ್ರೋಹವನ್ನು ಬಿಹಾರ ಜನತೆ ಕ್ಷಮಿಸಲ್ಲ: ಕಾಂಗ್ರೆಸ್​ ಕಿಡಿ

ABOUT THE AUTHOR

...view details