ನವದೆಹಲಿ: ಗೋವಾ, ಮಹಾರಾಷ್ಟ್ರದ ಹಲವು ಭಾಗ ಸೇರಿದಂತೆ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಜೂನ್ 11ರ ವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಮತ್ತು ರಾಜ್ಯದ ಹಲವು ಭಾಗಗಳಲ್ಲಿ ತೀವ್ರ ನೀರಿನ ಕೊರತೆ ಎದುರಿಸಿದ್ದ ಮಹಾರಾಷ್ಟ್ರದಲ್ಲಿ ಇದೀಗ ನೈರುತ್ಯ ಮಾನ್ಸೂನ್ ಸಾಕಷ್ಟು ನಿರಾಳತೆ ತರಲಿದೆ. ಐಎಂಡಿ ಪ್ರಕಾರ, ಕೊಂಕಣ ಮತ್ತು ಗೋವಾ, ಮರಾಠವಾಡ, ಕರ್ನಾಟಕ, ಕೇರಳ, ಮಾಹೆ ಮತ್ತು ಲಕ್ಷದ್ವೀಪದಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗಲಿದ್ದು, ಇಲ್ಲಿ ಗಾಳಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸಲಿದೆ.
ಮೇ 31ಕ್ಕೆ ಕೇರಳಕ್ಕೆ ಮಾನ್ಸೂನ್ ಆಗಮಿಸಿದ್ದು, ಅಂದಿನಿಂದ ದಕ್ಷಿಣ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಕೇರಳ ಮತ್ತು ಮಾಹೆಯ ಒಳ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಕರ್ನಾಟಕದ ಒಳನಾಡು ಪ್ರದೇಶದಲ್ಲಿ ಕೂಡ ಜೂನ್ 8 ಮತ್ತು 9 ಹಾಗೂ ತೆಲಂಗಾಣದಲ್ಲಿ ಜೂನ್ 10, ಕೇರಳ ಮತ್ತು ಮಾಹೆಯಲ್ಲಿ ಜೂನ್ 8ರಂದು ಅಧಿಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಇತರೆ ರಾಜ್ಯದಲ್ಲಿ ಮಳೆ: ಮುಂದಿನ ಎರಡು ವಾರ ವಾಯುವ್ಯ ಭಾರತದ ಅನೇಕ ಪ್ರದೇಶದಲ್ಲಿ ಕೂಡ ಗುಡುಗು ಮಿಂಚಿನಿಂದ ಕೂಡಿದ ಮಳೆಯನ್ನು ನಿರೀಕ್ಷಿಸಲಾಗಿದೆ. ಐಎಂಡಿ ಪ್ರಕಾರ, ಪಂಜಾಬ್, ಹರಿಯಾಣ- ಚಂಡೀಗಢ, ದೆಹಲಿ ಮತ್ತು ರಾಜಸ್ಥಾನದಲ್ಲಿ ಜೂನ್ 8ರಂದು ಗಾಳಿಯ ವೇಗ ಗಂಟೆಗೆ 40 ರಿಂದ 50 ಕಿ.ಮೀ ಇರಲಿದೆ. ಇಲ್ಲೂ ಕೂಡ ಗುಡುಗು ಮಿಂಚಿನಿಂದ ಕೂಡಿದ ಹಗುರ ಮಳೆಯಾಗಲಿದೆ.