ಕರ್ನಾಟಕ

karnataka

ETV Bharat / bharat

ತನ್ನ ರಕ್ಷಣೆಗಾಗಿ ಹಿಂದೂ ಸಮಾಜ ಒಗ್ಗಟ್ಟಾಗಲಿ: ಸರಸಂಘಚಾಲಕ ಭಾಗವತ್ ಕರೆ - RSS chief Mohan Bhagwat

ಭಾಷೆ, ಜಾತಿ ಮತ್ತು ಪ್ರಾಂತ್ಯಗಳ ನಡುವಿನ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಬದಿಗಿಟ್ಟು ಹಿಂದೂ ಸಮಾಜ ಒಂದಾಗಲಿ ಎಂದು ಭಾಗವತ್ ಕರೆ ನೀಡಿದ್ದಾರೆ.

By ANI

Published : 3 hours ago

ಸರಸಂಘಚಾಲಕ ಮೋಹನ್ ಭಾಗವತ್
ಸರಸಂಘಚಾಲಕ ಮೋಹನ್ ಭಾಗವತ್ (ani)

ಬರಾನ್ ನಗರ್ (ರಾಜಸ್ಥಾನ): ಭಾಷೆ, ಜಾತಿ ಮತ್ತು ಪ್ರಾಂತ್ಯಗಳ ನಡುವಿನ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಬದಿಗಿಟ್ಟು ಹಿಂದೂ ಸಮಾಜವು ತನ್ನ ಸುರಕ್ಷತೆಗಾಗಿ ಒಂದಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಕರೆ ನೀಡಿದ್ದಾರೆ.

ಬರಾನ್ ನಗರದ ಕೃಷಿ ಉಪಜ್ ಮಂಡಿಯಲ್ಲಿ ಶನಿವಾರ ಆರ್​ಎಸ್ಎಸ್ ಸ್ವಯಂಸೇವಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಗವತ್, ಶಿಸ್ತು ಅಳವಡಿಕೆ, ದೇಶದ ಬಗ್ಗೆ ಕರ್ತವ್ಯ ಮತ್ತು ಗುರಿ ಆಧಾರಿತ ಜೀವನ ನಡೆಸುವುದು ಇಂದಿನ ಸಮಾಜದಲ್ಲಿ ಅಗತ್ಯವಾಗಿದೆ ಎಂದು ಅವರು ಹೇಳಿದರು.

"ತನ್ನ ಸುರಕ್ಷತೆಗಾಗಿ ಹಿಂದೂ ಸಮಾಜವು ಭಾಷೆ, ಜಾತಿ ಮತ್ತು ಪ್ರಾಂತ್ಯದ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಬದಿಗಿಟ್ಟು ಒಂದಾಗಬೇಕಾಗಿದೆ. ಸಂಘಟನೆ, ಸದ್ಭಾವನೆ ಮತ್ತು ಅನ್ಯೋನ್ಯತೆಯ ಭಾವನೆಗಳು ಹಿಂದೂ ಸಮಾಜದ ಭಾಗವಾಗಬೇಕು. ಶಿಸ್ತಿನ ಅಳವಡಿಕೆ, ದೇಶದ ಬಗ್ಗೆ ನಮ್ಮ ಕರ್ತವ್ಯ ಮತ್ತು ಗುರಿ ಆಧಾರಿತ ಜೀವನ ಸಮಾಜದಲ್ಲಿ ಅವಶ್ಯಕವಾಗಿದೆ. ನಾನು ಮತ್ತು ನನ್ನ ಕುಟುಂಬ ಎಂಬುದರಿಂದ ಮಾತ್ರ ಸಮಾಜ ನಿರ್ಮಾಣ ಸಾಧ್ಯವಿಲ್ಲ; ಬದಲಾಗಿ ಸಮಾಜದ ಬಗ್ಗೆ ಸರ್ವಾಂಗೀಣ ಕಾಳಜಿ ವಹಿಸುವ ಮೂಲಕ ನಾವು ನಮ್ಮ ಜೀವನದಲ್ಲಿ ದೈವತ್ವವನ್ನು ಸಾಧಿಸಬೇಕು" ಎಂದು ಅವರು ಹೇಳಿದರು.

ಭಾರತವು ಹಿಂದೂ ರಾಷ್ಟ್ರವಾಗಿದೆ ಮತ್ತು ಹಿಂದೂ ಎಂಬ ಪದವು ದೇಶದಲ್ಲಿ ವಾಸಿಸುವ ಎಲ್ಲಾ ಧರ್ಮಗಳ ಜನರಿಗೆ ಅನ್ವಯವಾಗುತ್ತದೆ ಎಂದು ಅವರು ಹೇಳಿದರು.

"ಭಾರತ ಒಂದು ಹಿಂದೂ ರಾಷ್ಟ್ರವಾಗಿದೆ. ನಾವು ಪ್ರಾಚೀನ ಕಾಲದಿಂದಲೂ ಇಲ್ಲಿ ವಾಸಿಸುತ್ತಿದ್ದೇವೆ. ಹಿಂದೂ ಎಂಬ ಹೆಸರು ನಂತರ ಬಂದಿದೆ. ಭಾರತದಲ್ಲಿ ವಾಸಿಸುವ ಎಲ್ಲಾ ಧರ್ಮೀಯರಿಗೆ ಹಿಂದೂ ಪದವನ್ನು ಬಳಸಲಾಗುತ್ತಿತ್ತು. ಹಿಂದೂಗಳು ಎಲ್ಲರನ್ನೂ ತಮ್ಮವರೆಂದು ಪರಿಗಣಿಸುತ್ತಾರೆ ಮತ್ತು ಎಲ್ಲರನ್ನೂ ಸ್ವೀಕರಿಸುತ್ತಾರೆ. ನಾವು ಸರಿ ಮತ್ತು ನಿಮ್ಮ ಸ್ಥಾನದಲ್ಲಿ ನೀವೂ ಸರಿ ಎಂದು ಹಿಂದೂಗಳು ನಂಬುತ್ತಾರೆ" ಎಂದು ಭಾಗವತ್ ನುಡಿದರು.

ಆರ್​ಎಸ್ಎಸ್​ನ ಕೆಲಸವು ಯಾಂತ್ರಿಕವಲ್ಲ, ಬದಲಾಗಿ ಆಲೋಚನೆ ಆಧಾರಿತವಾಗಿದೆ ಮತ್ತು ಆರ್​ಎಸ್ಎಸ್ ಮಾಡಿದ ಕೆಲಸಕ್ಕೆ ಜಗತ್ತಿನಲ್ಲಾದ ಯಾವುದೇ ಕೆಲಸವನ್ನೂ ಹೋಲಿಸಲು ಸಾಧ್ಯವಿಲ್ಲ ಎಂದು ಅವರು ಉಲ್ಲೇಖಿಸಿದರು. ಆರ್​ಎಸ್​ಎಸ್​ನಲ್ಲಿ ಮೌಲ್ಯಗಳು ಸಂಘದ ನಾಯಕನಿಂದ ಸ್ವಯಂಸೇವಕರಿಗೆ ಮತ್ತು ಅವರಿಂದ ಸ್ವಯಂಸೇವಕರ ಕುಟುಂಬ ಸದಸ್ಯರಿಗೆ ವರ್ಗಾಯಿಸಲ್ಪಡುತ್ತವೆ ಎಂದು ಅವರು ಹೇಳಿದರು. ಇದು ಸಂಘದಲ್ಲಿ ವ್ಯಕ್ತಿತ್ವ ವಿಕಸನದ ವಿಧಾನವಾಗಿದೆ ಎಂದು ಭಾಗವತ್ ತಿಳಿಸಿದರು.

ಈ ಸಂದರ್ಭದಲ್ಲಿ ರಾಜಸ್ಥಾನ ವಲಯದ ಸಂಘಚಾಲಕ ರಮೇಶ್ ಅಗರ್ ವಾಲ್, ಚಿತ್ತೋರ್ ಪ್ರಾಂತ್ಯದ ಸಂಘಚಾಲಕ ಜಗದೀಶ್ ಸಿಂಗ್ ರಾಣಾ, ಬರಾನ್ ವಿಭಾಗದ ಸಂಘಚಾಲಕ ರಮೇಶ್ ಚಂದ್ ಮೆಹ್ತಾ ಮತ್ತು ಬರಾನ್ ಜಿಲ್ಲಾ ಸಂಘಚಾಲಕ ವೈದ್ಯ ರಾಧೇಶ್ಯಾಮ್ ಗರ್ಗ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಪುಟ್ಟ ಮಗುವಿನ ಮೇಲೆ ದಾಳಿ ಮಾಡಿದ ನರಭಕ್ಷಕ ತೋಳ ಕೊಂದು ಹಾಕಿದ ಗ್ರಾಮಸ್ಥರು - Man Eating Wolf

ABOUT THE AUTHOR

...view details