ಪುಣೆ: ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದಲ್ಲಿ ಪೆರೋಲ್ ಮೇಲೆ ಹೊರಬಂದು ಪರಾರಿಯಾಗಿದ್ದ 55 ವರ್ಷದ ಅಪರಾಧಿಯು ಕಳ್ಳತನ ಪ್ರಕರಣದಲ್ಲಿ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಸೋಮವಾರ ಮಾಹಿತಿ ನೀಡಿದ್ದಾರೆ.
ಸಲೀಂ ಜರ್ದಾ ಬಂಧಿತ. 2002ರ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 31 ಅಪರಾಧಿಗಳಲ್ಲಿ ಸಲೀಂ ಜರ್ದಾ ಕೂಡ ಒಬ್ಬ. ಕಳ್ಳತನ ಪ್ರಕರಣವೊಂದರಲ್ಲಿ ಈತನನ್ನು ಜ.22ರಂದು ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೆರೋಲ್ ಮೇಲೆ ಹೊರಬಂದು ತಲೆಮರೆಸಿಕೊಂಡಿದ್ದ: ಗೋಧ್ರಾ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಸಲೀಂ ಜರ್ದಾ ಏಳು ದಿನಗಳ ಪೆರೋಲ್ ಮೇಲೆ 2024ರ ಸೆಪ್ಟೆಂಬರ್ 17 ರಂದು ಗುಜರಾತ್ನ ಜೈಲಿನಿಂದ ಹೊರಬಂದಿದ್ದ. ಬಳಿಕ ಪೆರೋಲ್ ಅವಧಿ ಮುಗಿದರೂ ವಾಪಸ್ ಜೈಲಿಗೆ ಬಂದಿರಲಿಲ್ಲ.
"ಪುಣೆಯ ಗ್ರಾಮೀಣ ಭಾಗಗಳಲ್ಲಿ ಕಳ್ಳತನ ನಡೆಸುತ್ತಿದ್ದ ಪ್ರಕರಣದಲ್ಲಿ ಸಲೀಂ ಜರ್ದಾ ಮತ್ತು ಅವರ ಗ್ಯಾಂಗ್ ಸದಸ್ಯರನ್ನು ಬಂಧಿಸಿದ್ದೇವೆ. ತನಿಖೆಯ ವೇಳೆ ಸಲೀಂ ಜರ್ದಾ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ ಅಪರಾಧಿ ಎಂಬುದು ಗೊತ್ತಾಗಿದೆ" ಎಂದು ಅಲೆಫಾಟಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಿನೇಶ್ ಟೇಡೆ ತಿಳಿಸಿದ್ದಾರೆ.
ಗ್ಯಾಂಗ್ ಜೊತೆಗೆ ಪುಣೆಗೆ ಬಂದು ಕಳ್ಳತನ: ಜೊತೆಗೆ ಗುಜರಾತ್ನ ಗೋಧ್ರಾದಿಂದ ಪುಣೆ ಜಿಲ್ಲೆಗೆ ತನ್ನ ಗ್ಯಾಂಗ್ನೊಂದಿಗೆ ಬಂದು ಕಳ್ಳತನ ಕೃತ್ಯಗಳನ್ನು ಎಸಗುತ್ತಿದ್ದನ್ನು. ಜರ್ದಾ ನಡೆಸಿದ್ದಾರೆ ಎನ್ನಲಾದ ಮೂರು ಕಳ್ಳತನ ಪ್ರಕರಣಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
2002ರ ಫೆ.27 ರಂದು ಗೋಧ್ರಾದಲ್ಲಿ ಸಾಬರಮತಿ ಎಕ್ಸ್ಪ್ರೆಸ್ನ ಎಸ್ - 6 ಕೋಚ್ಗೆ ಬೆಂಕಿ ಹಚ್ಚಿ 59 ಸಾವಿಗೆ ಕಾರಣವಾದ ಆರೋಪ ಪ್ರಕರಣದಲ್ಲಿ ಜರ್ದಾ ಮತ್ತು ಇತರರು ಶಿಕ್ಷೆಗೊಳಗಾಗಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಪ್ರಕರಣದ ಅಪರಾಧಿ ರಾಮ್ ರಹೀಮ್ಗೆ 12ನೇ ಬಾರಿ ಸಿಕ್ತು ಪೆರೋಲ್!
ಇದನ್ನೂ ಓದಿ: ಕೊಲೆ ಕೇಸ್ನಲ್ಲಿ ಜೀವಾವಧಿ ಶಿಕ್ಷೆ: ತಂದೆಯ ಜಮೀನಿನಲ್ಲಿ ಕೃಷಿ ಮಾಡಲು ಕೈದಿಗೆ 90 ದಿನ ಪೆರೋಲ್ ಮಂಜೂರು