ಕರ್ನಾಟಕ

karnataka

'ಜಲ ಜೀವನ್ ಮಿಷನ್‌'ನಲ್ಲಿ ₹20 ಸಾವಿರ ಕೋಟಿ ಅಕ್ರಮ: ರಾಜಸ್ಥಾನದಲ್ಲಿ 4ನೇ ಆರೋಪಿ ಬಂಧನ - Rajasthan Jal Jeevan Mission Scam

By ETV Bharat Karnataka Team

Published : Jul 17, 2024, 10:49 AM IST

ರಾಜಸ್ಥಾನದಲ್ಲಿ ನಡೆದ ಕೇಂದ್ರ ಸರ್ಕಾರದ 'ಜಲ ಜೀವನ್ ಮಿಷನ್‌' ಅಕ್ರಮ ಪ್ರಕರಣದಲ್ಲಿ ನಾಲ್ಕನೇ ಆರೋಪಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ (ETV Bharat)

ಜೈಪುರ(ರಾಜಸ್ಥಾನ):ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ 'ಜಲ ಜೀವನ್ ಮಿಷನ್‌'ನಲ್ಲಿ ನಡೆದಿದೆ ಎನ್ನಲಾದ 20 ಸಾವಿರ ಕೋಟಿ ರೂಪಾಯಿ ಹಗರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಬಂಧಿಸಿದೆ. ಮಧ್ಯವರ್ತಿ ಸಂಜಯ್ ಬಡಾಯ ಬಂಧಿತ ಆರೋಪಿ. ಈತ ಸಾರ್ವಜನಿಕ ಆರೋಗ್ಯ ಇಂಜಿನಿಯರ್ ಇಲಾಖೆಯ (ಪಿಎಚ್‌ಇಡಿ) ಮಾಜಿ ಸಚಿವ ಮಹೇಶ್ ಜೋಶಿ ಅವರ ಆಪ್ತ ಎನ್ನಲಾಗಿದೆ.

ಪ್ರತಿ ಮನೆಗೆ ನಲ್ಲಿ ನೀರು ಒದಗಿಸುವುದು 'ಜಲ ಜೀವನ್ ಮಿಷನ್‌' ಉದ್ದೇಶ. ರಾಜಸ್ಥಾನದಲ್ಲಿ ಈ ಯೋಜನೆಯನ್ನು ಸಾರ್ವಜನಿಕ ಆರೋಗ್ಯ ಇಂಜಿನಿಯರ್​ ಇಲಾಖೆ ಅನುಷ್ಠಾನಗೊಳಿಸುತ್ತಿದೆ. 2023ರ ಆಗಸ್ಟ್ 6ರಂದು ಗುತ್ತಿಗೆದಾರ ಪದ್ಮಚಂದ್ ಜೈನ್ ಎಂಬವರಿಂದ 2.20 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಪಿಎಚ್‌ಇಡಿಯ ಇಬ್ಬರನ್ನು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿತ್ತು. ಇದರ ನಂತರ ಜಲಜೀವನ್ ಮಿಷನ್‌ನಲ್ಲಿನ ಅಕ್ರಮಗಳು ಬೆಳಕಿಗೆ ಬಂದಿವೆ. ಇದರಲ್ಲಿ ಅಕ್ರಮ ಹಣ ವರ್ಗಾವಣೆಯೂ ಬಯಲಾಗಿದೆ.

ಬಂಧಿತರ ಸಂಖ್ಯೆ 4ಕ್ಕೇರಿಕೆ: ಎಸಿಬಿ ದಾಖಲಿಸಿದ ಎಫ್‌ಐಆರ್‌ ಆಧಾರದ ಮೇರೆಗೆ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿದೆ. ಈಗಾಗಲೇ ಶ್ರೀ ಗಣಪತಿ ಟ್ಯೂಬ್‌ವೆಲ್ ಕಂಪನಿಯ ಮಾಲೀಕ ಮಹೇಶ್ ಮಿತ್ತಲ್, ಶ್ರೀ ಶ್ಯಾಮ್ ಟ್ಯೂಬ್‌ವೆಲ್ ಕಂಪನಿಯ ಮಾಲೀಕ ಪದ್ಮಚಂದ್ ಜೈನ್ ಮತ್ತು ಪಿಯೂಷ್ ಜೈನ್ ಎಂಬವರನ್ನು ಇಡಿ ಬಂಧಿಸಿದೆ. ಇದೀಗ ಮಂಗಳವಾರ, ಮಧ್ಯವರ್ತಿ ಸಂಜಯ್ ಬಡಾಯ ಅವರನ್ನು ಸತತವಾಗಿ ವಿಚಾರಣೆಗೆ ಒಳಪಡಿಸಿ ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 4ಕ್ಕೇರಿದೆ.

ಈ ಪ್ರಕರಣದಲ್ಲಿ ಪದ್ಮಚಂದ್ ಜೈನ್ ಮತ್ತು ಮಹೇಶ್ ಮಿತ್ತಲ್ ಮತ್ತು ಇತರರು ಟೆಂಡರ್‌ಗಳು, ಬಿಲ್‌ಗಳನ್ನು ಮಂಜೂರು ಮಾಡಲು ಮತ್ತು ಪಿಎಚ್‌ಇಡಿಯಿಂದ ಪಡೆದ ವಿವಿಧ ಟೆಂಡರ್‌ಗಳಿಗೆ ಸಂಬಂಧಿಸಿದಂತೆ ಅವರು ನಿರ್ವಹಿಸಿದ ಕಾಮಗಾರಿಗಳಲ್ಲಿನ ಅಕ್ರಮಗಳನ್ನು ಮುಚ್ಚಿ ಹಾಕಲು ಅಧಿಕಾರಿಗಳಿಗೆ ಲಂಚ ನೀಡುವಲ್ಲಿ ಭಾಗಿಯಾಗಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ಇದುವರೆಗೆ 11.03 ಕೋಟಿ ಮೌಲ್ಯದ ಆಸ್ತಿ ಜಪ್ತಿ: ಅಲ್ಲದೇ, ತಮ್ಮ ಟೆಂಡರ್‌ಗಳ ಕಾಮಗಾರಿಗಳಲ್ಲಿ ವಸ್ತುಗಳ ಬಳಸುವುದಕ್ಕಾಗಿ ಹರಿಯಾಣದಿಂದ ಕದ್ದ ಮಾಲುಗಳನ್ನು ಖರೀದಿಸುತ್ತಿದ್ದರು. ಗುತ್ತಿಗೆಗಳನ್ನು ಪಡೆಯಲು ನಕಲಿ ಪತ್ರಗಳನ್ನೂ ಸಲ್ಲಿಸುತ್ತಿದ್ದರು ಎಂಬುದು ಬಯಲಾಗಿದೆ. ಈ ಹಿಂದೆ ರಾಜಸ್ಥಾನದ ಮಾಜಿ ಸಚಿವ ಮಹೇಶ್ ಜೋಶಿ ಮತ್ತು ಪಿಎಚ್‌ಇಡಿ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೋಧ್ ಅಗರ್ವಾಲ್ ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳ ಮೇಲೆ ಇಡಿ ದಾಳಿ ಮಾಡಿತ್ತು. ಈ ಪ್ರಕರಣದಲ್ಲಿ ಇದುವರೆಗೆ 11.03 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ABOUT THE AUTHOR

...view details