ಕರ್ನಾಟಕ

karnataka

ಲೋಕಸಭೆಯಲ್ಲಿ ವಿಪತ್ತು ನಿರ್ವಹಣೆ ತಿದ್ದುಪಡಿ ಮಸೂದೆ ಮಂಡನೆ: ರಾಜ್ಯಗಳ ಅಧಿಕಾರದ ಬಗ್ಗೆ ಪ್ರತಿಪಕ್ಷಗಳಿಂದ ಆಕ್ಷೇಪ - Disaster Management Amendment Bill

By PTI

Published : Aug 1, 2024, 4:44 PM IST

ದೇಶದಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚುತ್ತಿದ್ದು, ವಿಪತ್ತು ನಿರ್ವಹಣಾ ತಂಡಗಳಿಗೆ ಹೆಚ್ಚಿನ ಬಲ ನೀಡಲು ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ವಿಪತ್ತು ನಿರ್ವಹಣೆ ಮಸೂದೆ (ತಿದ್ದುಪಡಿ) ಮಂಡಿಸಿದೆ. ಇದಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು.

ವಿಪತ್ತು ನಿರ್ವಹಣೆ ತಿದ್ದುಪಡಿ ಮಸೂದೆ ಮಂಡನೆ
ಲೋಕಸಭೆ (ETV Bharat)

ನವದೆಹಲಿ:ಮಳೆ, ಪ್ರವಾಹ, ಭೂಕುಸಿತದಂತಹ ಪ್ರಕೃತಿ ವಿಕೋಪಗಳ ವೇಳೆ ವಿಪತ್ತು ನಿರ್ವಹಣಾ ತಂಡಗಳ (ಎನ್​ಡಿಆರ್​ಎಫ್​, ಎಸ್​​ಡಿಆರ್​ಎಫ್​​) ಕಾರ್ಯನಿರ್ವಹಣೆಯನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಗುರುವಾರ ವಿಪತ್ತು ನಿರ್ವಹಣೆ ಮಸೂದೆ (ತಿದ್ದುಪಡಿ)ಯನ್ನು ಲೋಕಸಭೆಯಲ್ಲಿ ಮಂಡಿಸಿತು. ಇದಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೊಸ ಕಾಯ್ದೆಯಲ್ಲಿ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ ಎಂದು ದೂರಿವೆ.

ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪವಿಲ್ಲ:ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ವಿಪತ್ತು ನಿರ್ವಹಣಾ (ತಿದ್ದುಪಡಿ) ಮಸೂದೆಯನ್ನು ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಮಂಡಿಸಿದ್ದು, ಧ್ವನಿಮತದ ಮೂಲಕ ಅಂಗೀಕಾರಗೊಂಡಿತು.

ಬಳಿಕ ಮಾತನಾಡಿದ ಸಚಿವರು, "ವಿಪತ್ತು ನಿರ್ವಹಣೆಯ ವಿಚಾರದಲ್ಲಿ ರಾಜ್ಯಗಳ ಹಕ್ಕುಗಳಲ್ಲಿ ಕೇಂದ್ರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ವಿಪತ್ತು ನಿರ್ವಹಣೆ ರಾಜ್ಯಗಳ ಮೊದಲ ಜವಾಬ್ದಾರಿಯಾಗಿದೆ" ಎಂದು ಹೇಳಿದರು.

ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ತಂಡಗಳಲ್ಲಿ ಹೆಚ್ಚಿನ ಸ್ಪಷ್ಟತೆ, ಒಮ್ಮತ ತರಲು ಪ್ರಯತ್ನಿಸಲಾಗಿದೆ. ಕಾಯಿದೆಯಲ್ಲಿನ ಕೆಲವು ನಿಬಂಧನೆಗಳನ್ನು ತಿದ್ದುಪಡಿ ಮಾಡುವುದು ಈಗಿನ ಅಗತ್ಯ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಪ್ರಾಧಿಕಾರಗಳ ಬಲವರ್ಧನೆ:ಮಸೂದೆಯು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ ಮತ್ತು ಉನ್ನತ ಮಟ್ಟದ ಸಮಿತಿಗಳಿಗೆ ಶಾಸನಬದ್ಧ ಸ್ಥಾನಮಾನ ಒದಗಿಸುತ್ತದೆ. ಇದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ಕಾರ್ಯದಕ್ಷತೆಯನ್ನೂ ಬಲಪಡಿಸುವ ಗುರಿ ಹೊಂದಿದೆ ಎಂದು ಕೇಂದ್ರ ಹೇಳಿದೆ.

ಪ್ರತಿಪಕ್ಷಗಳ ಆಕ್ಷೇಪವೇನು?: ಪ್ರಸ್ತಾವಿತ ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್​ ಸಂಸದ ಮನೀಶ್ ತಿವಾರಿ, "ಸಂವಿಧಾನದ ಪ್ರಕಾರ ವಿಪತ್ತು ನಿರ್ವಹಣೆಯ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರಕ್ಕೆ ಸಮಾನ ಹಕ್ಕಿದೆ. ವಿಪತ್ತು ನಿರ್ವಹಣೆಯಲ್ಲಿ ರಾಜ್ಯಗಳ ಅಧಿಕಾರವನ್ನು ಸರಿಯಾಗಿ ವ್ಯಾಖ್ಯಾನಿಸಬೇಕು. ಮಸೂದೆಯಲ್ಲಿ ತಿಳಿಸಿರುವಂತೆ, ನಿಯಮ ರೂಪಿಸುವ ಅಧಿಕಾರ ಕೇಂದ್ರಕ್ಕೆ ಹೆಚ್ಚಿದೆ. ಇದು ರಾಜ್ಯಗಳ ಅಧಿಕಾರವನ್ನು ಅತಿಕ್ರಮಿಸಿದಂತಾಗುತ್ತದೆ. ಶಾಸಕಾಂಗ ಹೊರತಾದ ಯಾವುದೇ ಅಧಿಕಾರವು ಕಾನೂನಿನಲ್ಲಿ ಇರಬಾರದು" ಎಂದರು.

ತೃಣಮೂಲ ಕಾಂಗ್ರೆಸ್​ ಸಂಸದ ಸೌಗತ ರೇ ಮಾತನಾಡಿ, "ವಿಪತ್ತು ನಿರ್ವಹಣೆಯಲ್ಲಿನ ಹಲವು ತಂಡಗಳ ಪಾತ್ರದಿಂದಾಗಿ ಗೊಂದಲ ಸೃಷ್ಟಿಯಾಗುತ್ತದೆ. ಈ ಬಗ್ಗೆ ಸ್ಪಷ್ಟನೆ ಇರಲಿ" ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಹಿಮಾಚಲದಲ್ಲೂ ಭಾರಿ ಮೇಘಸ್ಫೋಟ: ಮೂವರು ಬಲಿ, 40 ಮಂದಿ ಕಣ್ಮರೆ.. ಮುಂದುವರಿದ ಕಾರ್ಯಾಚರಣೆ - Cloudburst in Himachal Pradesh

ABOUT THE AUTHOR

...view details