ಕರ್ನಾಟಕ

karnataka

ETV Bharat / bharat

ಆನ್​ಲೈನ್ ನೋಂದಣಿ ಇಲ್ಲದೆ ಶಬರಿಮಲೆಗೆ ಬರುವ ಭಕ್ತರಿಗೂ ದರ್ಶನದ ಅವಕಾಶ: ಸಿಎಂ ವಿಜಯನ್ ಭರವಸೆ

ಶಬರಿಮಲೆಗೆ ಆಗಮಿಸುವ ಎಲ್ಲಾ ಭಕ್ತರಿಗೆ ದೇವರ ದರ್ಶನ ಲಭ್ಯವಾಗುವಂತೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

By ANI

Published : 6 hours ago

ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಮುಖ್ಯಮಂತ್ರಿ ಪಿಣರಾಯಿ ವಿಜಯನ್ (ANI)

ತಿರುವನಂತಪುರಂ(ಕೇರಳ): ದೇವರ ದರ್ಶನಕ್ಕೆ ಆನ್‌ಲೈನ್ ನೋಂದಣಿ ಮಾಡಿಸಿಕೊಳ್ಳದೆ ಅಥವಾ ನೊಂದಣಿ ವ್ಯವಸ್ಥೆಯ ಅರಿವು ಇಲ್ಲದೆ ಶಬರಿಮಲೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಸುಗಮ ದರ್ಶನ ಸಿಗುವಂತೆ ಕೇರಳ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಹೇಳಿದ್ದಾರೆ.

ಹಿಂದಿನ ವರ್ಷಗಳಲ್ಲಿಯೂ ಅಂಥ ಯಾತ್ರಾರ್ಥಿಗಳಿಗೆ ದರ್ಶನ ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ಗಮನಸೆಳೆದರು. ಕೇರಳ ವಿಧಾನಸಭೆಯಲ್ಲಿ ಶಾಸಕ ವಿ. ಜಾಯ್ ಅವರು ಮಾಡಿದ ಮನವಿಗೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.

"ಸನ್ನಿಧಾನಂ, ಪಂಪಾ ಮತ್ತು ಮೂಲ ಶಿಬಿರಗಳಲ್ಲಿನ ಎಲ್ಲಾ ಭಕ್ತರಿಗೆ ಅನುಕೂಲತೆಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ, ಪೊಲೀಸ್, ಅರಣ್ಯ, ಆರೋಗ್ಯ, ಲೋಕೋಪಯೋಗಿ, ಅಗ್ನಿಶಾಮಕ ಮತ್ತು ಪಾರುಗಾಣಿಕಾ, ಕಾನೂನು ಮಾಪನಶಾಸ್ತ್ರ, ವಿಪತ್ತು ನಿರ್ವಹಣೆ, ಆಹಾರ ಮತ್ತು ನಾಗರಿಕ ಸರಬರಾಜು, ನೀರಾವರಿ, ಕೆಎಸ್ಇಬಿ, ಕೆಎಸ್ಆರ್​ಟಿಸಿ, ಬಿಎಸ್ಎನ್ಎಲ್, ಜಲ ಪ್ರಾಧಿಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಇಲಾಖೆಗಳು ಮತ್ತು ಏಜೆನ್ಸಿಗಳ ನಡುವೆ ಸಮನ್ವಯವನ್ನು ಬಲಪಡಿಸಲಾಗಿದೆ" ಎಂದು ಪಿಣರಾಯಿ ವಿಜಯನ್ ಹೇಳಿದರು.

ನಿಲಕ್ಕಲ್ ಮತ್ತು ಪಂಪಾದಲ್ಲಿ ಆಂಬ್ಯುಲೆನ್ಸ್ ಸೇವೆಗಳು, 12 ತುರ್ತು ವೈದ್ಯಕೀಯ ಕೇಂದ್ರಗಳ ಸ್ಥಾಪನೆ, ಕರಿಮಾಲಾ ಮಾರ್ಗದಲ್ಲಿ ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸಲು ಅರಣ್ಯ ಇಲಾಖೆಯೊಂದಿಗೆ ಸಹಯೋಗ ಮತ್ತು ಹೃದ್ರೋಗ ತಜ್ಞರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಹಲವಾರು ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಇತರ ರಾಜ್ಯಗಳಿಂದ ಆಗಮಿಸುವ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಅರಣ್ಯ ಮಾರ್ಗಗಳಲ್ಲಿ ರಸ್ತೆ ನಿರ್ವಹಣೆ ಮತ್ತು ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ.

ಮಂಡಲ-ಮಕರವಿಳಕ್ಕು ತೀರ್ಥಯಾತ್ರೆಯ ಸಿದ್ಧತೆಗಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಈಗಾಗಲೇ ವಿಸ್ತೃತವಾದ ಸಭೆಗಳು ನಡೆದಿವೆ. ದೇವಸ್ವಂ ಸಚಿವರು, ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕಾರಿಗಳು, ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಸುಗಮ ತೀರ್ಥಯಾತ್ರೆಗಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿದ್ದಾರೆ.

ಅಕ್ಟೋಬರ್ 5 ರಂದು ನಡೆದ ಪರಿಶೀಲನಾ ಸಭೆಯಲ್ಲಿ, ಎಲ್ಲರಿಗೂ ಸುಗಮ ಮತ್ತು ಸುರಕ್ಷಿತ ತೀರ್ಥಯಾತ್ರೆಯನ್ನು ಖಚಿತಪಡಿಸಿಕೊಳ್ಳಲು ದರ್ಶನಕ್ಕಾಗಿ ಸ್ಪಾಟ್​ ಬುಕಿಂಗ್​ಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು.

ಜನಸಂದಣಿಯನ್ನು ನಿರ್ವಹಿಸಲು, ವರ್ಚುವಲ್ ಕ್ಯೂ ವ್ಯವಸ್ಥೆಯಲ್ಲಿ ಯಾತ್ರಾರ್ಥಿಗಳು ತಾವು ತೀರ್ಥಯಾತ್ರೆಗೆ ಆಯ್ಕೆ ಮಾಡಿದ ಮಾರ್ಗದ ವಿವರಗಳನ್ನು ಕೂಡ ಸಲ್ಲಿಸಬೇಕಿದೆ. ಹೆಚ್ಚುವರಿಯಾಗಿ, ಯಾತ್ರಾರ್ಥಿಗಳಿಗೆ ತಮ್ಮ ಭೇಟಿಗಾಗಿ ಕಡಿಮೆ ಜನದಟ್ಟಣೆಯ ದಿನಗಳನ್ನು ಆಯ್ಕೆ ಮಾಡಲು ಅವಕಾಶ ನೀಡುವ ನಿಬಂಧನೆಗಳನ್ನು ಮಾಡಲಾಗುವುದು. ಪ್ರತಿ ದಿನ ಬುಕಿಂಗ್ ಆಗುವ ಯಾತ್ರಾರ್ಥಿಗಳ ಸಂಖ್ಯೆಯನ್ನು ಜಿಲ್ಲಾಡಳಿತ, ಪೊಲೀಸ್ ಮತ್ತು ಇತರ ಇಲಾಖೆಗಳೊಂದಿಗೆ ಮುಂಚಿತವಾಗಿ ಹಂಚಿಕೊಳ್ಳಲಾಗುವುದು ಮತ್ತು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುವುದು.

ವರ್ಚುವಲ್ ಕ್ಯೂ ನೋಂದಣಿ ವ್ಯವಸ್ಥೆಯ ಮೂಲಕ ಸಂಗ್ರಹಿಸಿದ ಯಾತ್ರಾರ್ಥಿಗಳ ವಿವರಗಳ ಡಿಜಿಟಲ್ ದಾಖಲೆಗಳು ಶಬರಿಮಲೆಯಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ತುರ್ತು ಸಂದರ್ಭಗಳಲ್ಲಿ ಅಥವಾ ಕಾಣೆಯಾದ ವ್ಯಕ್ತಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ತೀರ್ಥಯಾತ್ರೆಗೆ ಉತ್ತಮ ಸೌಲಭ್ಯಗಳನ್ನು ನೀಡಲಾಗಿದೆ.

ಪ್ರಮುಖ ಯಾತ್ರಾ ಕೇಂದ್ರವಾದ ತಿರುಪತಿಯಲ್ಲಿ ವರ್ಚುವಲ್ ಕ್ಯೂ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿತ್ತು. ನಂತರ 2011 ರಲ್ಲಿ ಇದನ್ನು ಶಬರಿಮಲೆಯಲ್ಲಿ ಪರಿಚಯಿಸಲಾಯಿತು. ಸುಗಮ ತೀರ್ಥಯಾತ್ರೆಯನ್ನು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಇದನ್ನೂ ಓದಿ :ಆಂಧ್ರದಲ್ಲಿ ಕರ್ನಾಟಕದ ಅತ್ತೆ-ಸೊಸೆ ಮೇಲೆ ಅತ್ಯಾಚಾರ: ಐವರು ಸೆರೆ, ಓರ್ವನ ಮೇಲೆ 37 ಕೇಸ್​!

ABOUT THE AUTHOR

...view details