ಕರ್ನಾಟಕ

karnataka

ETV Bharat / bharat

ಯಮುನಾ ತೀರದ ಎಲ್ಲ ಅತಿಕ್ರಮಣ ತೆರವುಗೊಳಿಸುವಂತೆ ದೆಹಲಿ ಹೈಕೋರ್ಟ್ ಆದೇಶ - Delhi HC order to DDA

ಯಮುನಾ ತೀರದಲ್ಲಿನ ಎಲ್ಲ ಅತಿಕ್ರಮಣಗಳನ್ನು ತೆರವುಗೊಳಿಸುವಂತೆ ದೆಹಲಿ ಹೈಕೋರ್ಟ್​ ಆದೇಶಿಸಿದೆ.

By ETV Bharat Karnataka Team

Published : Jul 11, 2024, 8:19 PM IST

ಯಮುನಾ ನದಿ ತೀರ
ಯಮುನಾ ನದಿ ತೀರ (IANS)

ನವದೆಹಲಿ: ಯಮುನಾ ನದಿ ತೀರದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ (ಡಿಡಿಎ) ಆದೇಶಿಸಿದೆ. ಯಮುನಾ ನದಿಯ ದಡ, ನದಿ ಪಾತ್ರ ಮತ್ತು ನದಿಗೆ ಹರಿಯುವ ಚರಂಡಿಗಳಲ್ಲಿನ ಎಲ್ಲಾ ಅತಿಕ್ರಮಣಗಳು ಮತ್ತು ಅಕ್ರಮ ನಿರ್ಮಾಣವನ್ನು ತೆಗೆದುಹಾಕುವಂತೆ ಡಿಡಿಎ ಉಪಾಧ್ಯಕ್ಷರಿಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಹನ್ ನೇತೃತ್ವದ ನ್ಯಾಯಪೀಠವು ನಿರ್ದೇಶನ ನೀಡಿತು.

"ಅವರನ್ನು (ಡಿಡಿಎ ಉಪಾಧ್ಯಕ್ಷರು) ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಮತ್ತು ಎಂಸಿಡಿ, ದೆಹಲಿ ಪೊಲೀಸ್, ಡಿಎಂಆರ್​ಸಿ, ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ, ಪಿಡಬ್ಲ್ಯೂಡಿ, ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಅವರು ಸಮನ್ವಯತೆಯಿಂದ ಕೆಲಸ ಮಾಡಲಿದ್ದಾರೆ. ಡಿಡಿಎ ಉಪಾಧ್ಯಕ್ಷರು ಒಂದು ವಾರದೊಳಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಸಭೆಯನ್ನು ಕರೆಯಬೇಕು" ಎಂದು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿದೆ.

ಶಾಹೀನ್ ಬಾಗ್ ಪ್ರದೇಶದಲ್ಲಿನ ಎಲ್ಲಾ ಅನಧಿಕೃತ ನಿರ್ಮಾಣಗಳನ್ನು ನೆಲಸಮಗೊಳಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ನದಿ ತೀರ ಮತ್ತು ಪ್ರವಾಹ ಪ್ರದೇಶಗಳಲ್ಲಿ ಅಕ್ರಮ ನಿರ್ಮಾಣವನ್ನು ತಡೆಯಲು ನಿರ್ದೇಶನ ನೀಡುವಂತೆ ವಕೀಲ ಸುಮಿತ್ ಕುಮಾರ್ ಸಲ್ಲಿಸಿದ ಮನವಿಯಲ್ಲಿ ಕೋರಲಾಗಿದೆ.

ಪರಿಸರಕ್ಕೆ ಹಾನಿಯಾಗುತ್ತಿರುವುದನ್ನು ನಿರ್ಲಕ್ಷಿಸಿ ಯಾವುದೇ ಅನುಮತಿ ಇಲ್ಲದೇ ಅಕ್ರಮ ನಿರ್ಮಾಣ ನಡೆಯುತ್ತಿದೆ. ಇದು ಪರಿಸರ ಸೂಕ್ಷ್ಮ ಯಮುನಾ ಪ್ರವಾಹ ಪ್ರದೇಶಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಪ್ರವಾಹ ಉಂಟಾಗುವ ಪ್ರದೇಶವು ನಿಷೇಧಿತ ಚಟುವಟಿಕೆ ವಲಯವಾಗಿದೆ ಮತ್ತು ಈ ಪ್ರದೇಶದಲ್ಲಿನ ಅತಿಕ್ರಮಣದಿಂದ ನೀರು ಬೇರೆಡೆಗೆ ತಿರುಗಲು ಕಾರಣವಾಗಬಹುದು. ಇದರಿಂದ ಪಕ್ಕದ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಬಹುದು ಎಂದು ಪ್ರತಿವಾದಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಒಪ್ಪಿಕೊಂಡರು.

ಅನೇಕ ತಜ್ಞರ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಂಟಾಗುವ ಪ್ರವಾಹಗಳು ಮಾನವ ನಿರ್ಮಿತವಾಗಿದ್ದು ಮುಖ್ಯವಾಗಿ ಚರಂಡಿಗಳು, ನದಿ ತೀರಗಳು ಮತ್ತು ನದಿ ಪಾತ್ರಗಳ ಅತಿಕ್ರಮಣದಿಂದಾಗಿ ಉಂಟಾಗಿವೆ ಎಂದು ದೆಹಲಿ ಹೈಕೋರ್ಟ್ ಗಮನಿಸಿದೆ. ಆರು ವಾರಗಳಲ್ಲಿ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ಡಿಡಿಎ ಉಪಾಧ್ಯಕ್ಷರಿಗೆ ಆದೇಶಿಸಿದ ದೆಹಲಿ ಹೈಕೋರ್ಟ್, ಮುಂದಿನ ವಿಚಾರಣೆಗಾಗಿ ಸೆಪ್ಟೆಂಬರ್ 9 ರಂದು ಈ ವಿಷಯವನ್ನು ಪಟ್ಟಿ ಮಾಡಲು ನಿರ್ದೇಶಿಸಿತು. ದೆಹಲಿ ಹೈಕೋರ್ಟ್​ ಆದೇಶದಿಂದ ಕೊನೆಗೂ ಈಗ ನದಿ ಪಕ್ಕದ ಅತಿಕ್ರಮಣಗಳನ್ನು ತೆಗೆದು ಹಾಕುವ ಸಂದರ್ಭ ಒದಗಿ ಬಂದಿದೆ.

ಇದನ್ನೂ ಓದಿ : ಕೇಂದ್ರ ಬಜೆಟ್​ ಪೂರ್ವಸಿದ್ಧತೆ: ಅರ್ಥಶಾಸ್ತ್ರಜ್ಞರು, ವಿಷಯ ತಜ್ಞರೊಂದಿಗೆ ಪಿಎಂ ಮೋದಿ ಮಹತ್ವದ ಸಭೆ - Union Budget 2024

ABOUT THE AUTHOR

...view details