ನವದೆಹಲಿ: "ನಮ್ಮ ಸರ್ಕಾರ ದೇಶದ ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ತಿಳಿಸಿದರು.
ಸರ್ಕಾರದ ಸಾಧನೆಗಳ ಕುರಿತು ಸುದೀರ್ಘ ಭಾಷಣ ಮಾಡಿದ ಅವರು, ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆಮ್ ಆದ್ಮಿ ಪಕ್ಷ, ಅರವಿಂದ್ ಕೇಜ್ರಿವಾಲ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
'ನಾವು ಶೀಶ್ ಮಹಲ್ ಕಟ್ಟಲು ಹಣ ಬಳಸಿಲ್ಲ': "ನಮ್ಮ ಸರ್ಕಾರ ಅನೇಕ ಯೋಜನೆಗಳಲ್ಲಿ ಪೋಲಾಗುತ್ತಿದ್ದ ಅಪಾರ ಪ್ರಮಾಣದ ಹಣ ಉಳಿಸಿದೆ. ಆ ಹಣವನ್ನು ನಾವು ಶೀಶ್ ಮಹಲ್ ಕಟ್ಟಲು ಬಳಸಿಲ್ಲ" ಎಂದು ಕೇಜ್ರಿವಾಲ್ ಅವರಿಗೆ ಪರೋಕ್ಷ ಟಾಂಗ್ ಕೊಟ್ಟರು. ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಬಂಗಲೆ ಪುನರ್ನಿರ್ಮಾಣದ ವಿಚಾರವನ್ನು ಪರೋಕ್ಷವಾಗಿ ಮೋದಿ ಪ್ರಸ್ತಾಪಿಸಿದರು. "ನಾವು ಸುಳ್ಳು ಭರವಸೆಗಳನ್ನು ನೀಡಿಲ್ಲ. ವಾಸ್ತವವಾಗಿ ಜನರ ಅಭಿವೃದ್ಧಿ ಮಾಡಿದ್ದೇವೆ" ಎಂದು ತಿಳಿಸಿದರು.
SC, ST, OBCಗೆ ಮೆಡಿಕಲ್ ಸೀಟು ಹೆಚ್ಚಳ: "ದೇಶದಲ್ಲಿ ಸದ್ಯ 780 ಮೆಡಿಕಲ್ ಕಾಲೇಜುಗಳಿವೆ. ಎಸ್ಸಿ, ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗಾಗಿ ಮೆಡಿಕಲ್ ಸೀಟುಗಳನ್ನು ಹೆಚ್ಚಿಸಲಾಗಿದೆ" ಎಂದು ಹೇಳಿದರು.
ರಾಹುಲ್ ಗಾಂಧಿ ವಿರುದ್ಧ ಟೀಕಾಸ್ತ್ರ ಪ್ರಯೋಗ: "ಕೆಲವರು ವಿದೇಶಾಂಗ ನೀತಿ ಬಗ್ಗೆ ಪದೇ ಪದೇ ಮಾತನಾಡುತ್ತಿರುತ್ತಾರೆ. ಅವರು ಹೀಗೆ ಮಾತನಾಡುವುದರಿಂದ ದೇಶಕ್ಕಾಗುವ ತೊಂದರೆಗಳ ಕುರಿತು ಯೋಚಿಸುವುದಿಲ್ಲ. ಅವರ ಮಾತುಗಳು ಅರ್ಬನ್ ನಕ್ಸಲರಂತಿದೆ" ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಟೀಕಾಸಮರ ನಡೆಸಿದರು.
"ತಮ್ಮ ಜೇಬಿನಲ್ಲಿ ಸಂವಿಧಾನ ಇಟ್ಟುಕೊಂಡು ಓಡಾಡುತ್ತಿರುವವರು ಮುಸ್ಲಿಂ ಮಹಿಳೆಯರು ಸಂಕಷ್ಟದ ಬದುಕು ಸಾಗಿಸುವಂತೆ ಮಾಡಿದ್ದರು. ತ್ರಿವಳಿ ತಲಾಖ್ ಪದ್ಧತಿಯನ್ನು ಕೊನೆಗೊಳಿಸುವ ಮೂಲಕ ನಾವು ಅವರ ಹಕ್ಕುಗಳನ್ನು ನೀಡಿದೆವು" ಎಂದು ಹೇಳಿದರು.
'ಜಾತಿ ಕುರಿತು ಮಾತನಾಡುವುದು ಕೆಲವರಿಗೆ ಫ್ಯಾಷನ್': ಇದೇ ವೇಳೆ, "ಜಾತಿಯ ಕುರಿತು ಮಾತನಾಡುವುದು ಕೆಲವರಿಗೆ ಫ್ಯಾಷನ್ ಆಗಿದೆ. ಕಳೆದ 30-35 ವರ್ಷಗಳಿಂದ ವಿವಿಧ ಪಕ್ಷಗಳ ಸಂಸತ್ ಸದಸ್ಯರು ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಒತ್ತಾಯಿಸುತ್ತಿದ್ದರು. ಒಬಿಸಿಗೆ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ಕೊಟ್ಟವವರು ನಾವು. ಇದನ್ನು ಇಂದು ಆ ಕುರಿತು ಮಾತನಾಡುತ್ತಿರುವವರು ತಿಳಿದುಕೊಳ್ಳಬೇಕು" ಎಂದು ಮೋದಿ ಹೇಳಿದರು.
'ಅವರದ್ದು ತುಷ್ಟೀಕರಣ, ನಮ್ಮದು ಸಂತುಷ್ಟೀಕರಣ': "ಕೆಲವರು ತುಷ್ಟೀಕರಣದ ಹಾದಿ ಹಿಡಿದರು. ಆದರೆ ನಾವು ಸಂತುಷ್ಟೀಕರಣದ ಹಾದಿ ಹಿಡಿದೆವು. ಶೇ.100ರಷ್ಟು ಸರ್ಕಾರದ ಯೋಜನೆಗಳು ಎಲ್ಲ ಸಮುದಾಯದ ಜನರನ್ನು ತಲುಪುವುದೇ ನಿಜವಾದ ಸಾಮಾಜಿಕ ನ್ಯಾಯ, ಜಾತ್ಯತೀತತೆ ಮತ್ತು ಸಂವಿಧಾನಕ್ಕೆ ನೀಡುವ ಗೌರವ" ಎಂದು ಮೋದಿ ಪ್ರತಿಪಾದಿಸಿದರು.
'25 ಕೋಟಿ ಜನರು ಬಡತನದಿಂದ ಹೊರಕ್ಕೆ': ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾಗಿ ವಿವಿಧ ಅಧ್ಯಯನಗಳು ತಿಳಿಸಿವೆ. ಯೋಜನಾಬದ್ಧವಾಗಿ ನಾವು ನಮ್ಮ ಬದುಕನ್ನು ಬಡವರ ಶ್ರೇಯೋಭಿವೃದ್ಧಿಗೆ ತ್ಯಾಗ ಮಾಡಿದ್ದರಿಂದ ಇದು ಸಾಧ್ಯವಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ: ಬಜೆಟ್ ಅಧಿವೇಶನ: ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ, ಸಂಜೆ ಪ್ರಧಾನಿ ಮೋದಿ ಉತ್ತರ