ಕರ್ನಾಟಕ

karnataka

ETV Bharat / bharat

ದೆಹಲಿ ಚುನಾವಣೆ: ಕಾಂಗ್ರೆಸ್​​ನಿಂದ ಇದೇ ಮೊದಲ ಸಲ 'ಉಚಿತ'ವಲ್ಲದ ಭರವಸೆ ಘೋಷಣೆ - YUVA UDAAN YOJANA

ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್​ ಮೊದಲ ಬಾರಿಗೆ 'ಉಚಿತ'ದ ಬದಲಾಗಿ, ಕೌಶಲ್ಯದ ಆಧಾರದ ಮೇಲೆ ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಪ್ರಕಟಿಸಿದೆ.

ಕಾಂಗ್ರೆಸ್​​ನಿಂದ ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ಯೋಜನೆ
ಕಾಂಗ್ರೆಸ್​​ನಿಂದ ದೆಹಲಿಯ ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ಯೋಜನೆ (Congress X Handle)

By ETV Bharat Karnataka Team

Published : Jan 12, 2025, 3:56 PM IST

ನವದೆಹಲಿ:ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಸಾಲು ಸಾಲು ಭರವಸೆಗಳನ್ನು ಘೋಷಿಸುತ್ತಿದೆ. ಮಹಿಳೆಯರು, ಆರೋಗ್ಯ ಕ್ಷೇತ್ರದ ಬಳಿಕ ಇದೀಗ, ನಿರುದ್ಯೋಗಿ ಯುವಕರಿಗೆ ಭರ್ಜರಿ ಭರವಸೆ ನೀಡಿದೆ.

ಪಕ್ಷವು ದೆಹಲಿಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ, ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ತಮ್ಮ ಕೌಶಲ್ಯ ಆಧರಿತವಾಗಿ ಒಂದು ವರ್ಷದವರೆಗೆ 8,500 ರೂಪಾಯಿ ನೀಡುವುದಾಗಿ ಭಾನುವಾರ ಹೇಳಿದೆ. ಆದರೆ, ಇತರ ರಾಜ್ಯಗಳಲ್ಲಿ ಇರುವಂತೆ 'ಉಚಿತ'ವಲ್ಲ ಎಂದೂ ಹೇಳಿದೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್​ ಪೈಲಟ್​, "ಯುವ ಉಡಾನ್​ ಯೋಜನೆಯಡಿ, ಕಾಂಗ್ರೆಸ್​ ಅಧಿಕಾರಕ್ಕೆ ಬಂದಲ್ಲಿ ದೆಹಲಿಯ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಒಂದು ವರ್ಷದವರೆಗೆ 8,500 ರೂಪಾಯಿ ಆರ್ಥಿಕ ನೆರವು ನೀಡಲಾಗುವುದು. ಆದರೆ, ಇದು ಪುಕ್ಕಟೆಯಲ್ಲ" ಎಂದರು.

"ಯಾವುದಾದರೂ ಕಂಪನಿ, ಕಾರ್ಖಾನೆ ಅಥವಾ ಸಂಸ್ಥೆಯಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದಲ್ಲಿ ಅಂತಹ ಯುವಕರಿಗೆ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ಅವರು ಆಯಾ ಕಂಪನಿಗಳ ಮೂಲಕ ಹಣವನ್ನು ಪಡೆಯುತ್ತಾರೆ. ಇದು ಮನೆಯಲ್ಲಿ ಕುಳಿತು ಹಣ ಪಡೆಯುವ ಯೋಜನೆಯಲ್ಲ" ಎಂದು ಹೇಳಿದರು.

ವಿದ್ಯಾವಂತ ಯುವಕರು ತಾವು ಪರಿಣತಿ ಹೊಂದಿರುವ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುವ ಯೋಜನೆ ಇದಾಗಿದೆ. ಇದರಿಂದ ವಿದ್ಯಾವಂತ ನಿರುದ್ಯೋಗಿ ಯುವಕರು ಯಾವುದಾದರೂ ಸಂಸ್ಥೆಗೆ ಸೇರಿಕೊಂಡು ತಮ್ಮ ಕೌಶಲ್ಯ ಪ್ರದರ್ಶನ ಮಾಡಿದಂತಾಗುತ್ತದೆ ಎಂದು ತಿಳಿಸಿದರು.

ಇತರ ಆಶ್ವಾಸನೆಗಳು:

  • ಇದಕ್ಕೂ ಮೊದಲು ಜನವರಿ 6 ರಂದು 'ಪ್ಯಾರಿ ದೀದಿ ಯೋಜನೆ'ಯನ್ನು ಘೋಷಿಸಿತು. ಕಾಂಗ್ರೆಸ್​ ಪಕ್ಷವು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಆರ್ಥಿಕ ನೆರವು ನೀಡುವುದಾಗ ಹೇಳಿತ್ತು. ಇದನ್ನು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಪ್ರಕಟಿಸಿದ್ದರು.
  • ಜನವರಿ 8ರಂದು 'ಜೀವನ್ ರಕ್ಷಾ ಯೋಜನೆ'ಯನ್ನು ಘೋಷಿಸಿತು. ಇದರ ಅಡಿಯಲ್ಲಿ ತಲಾ 25 ಲಕ್ಷ ರೂಪಾಯಿಗಳವರೆಗೆ ಉಚಿತ ಆರೋಗ್ಯ ವಿಮೆಯನ್ನು ಒದಗಿಸುವುದಾಗಿ ಭರವಸೆ ನೀಡಿತು. ಇದನ್ನು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​​ ಘೋಷಿಸಿದ್ದರು.

ದೆಹಲಿ ವಿಧಾನಸಭೆ ಚುನಾವಣೆ: 70 ಸದಸ್ಯರ ದೆಹಲಿ ವಿಧಾನಸಭೆಗೆ ಫೆಬ್ರವರಿ 5ರಂದು ಮತದಾನ ನಡೆಯಲಿದೆ. ಫೆಬ್ರವರಿ 8ರಂದು ಮತ ಎಣಿಕೆಯಾಗಲಿದೆ.

ಇದನ್ನೂ ಓದಿ:ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ₹2,500: ಯೋಜನೆ ಘೋಷಿಸಿದ ಡಿಕೆಶಿ

ABOUT THE AUTHOR

...view details