ಕರ್ನಾಟಕ

karnataka

ದೇಶದ ಆರ್ಥಿಕತೆ ಹಾಳು ಮಾಡಲು ಕಾಂಗ್ರೆಸ್​ ಪಿತೂರಿ: ಬಿಜೆಪಿ ಗಂಭೀರ ಆರೋಪ - Hindenburg Allegations

By ETV Bharat Karnataka Team

Published : Aug 12, 2024, 9:34 PM IST

ಹಿಂಡೆನ್​​ಬರ್ಗ್​ ವರದಿ ಅನ್ವಯ ಅದಾನಿ ಗ್ರೂಪ್​ ವಿರುದ್ಧ ಜೆಪಿಸಿ ತನಿಖೆ ನಡೆಸಬೇಕು ಎಂಬ ವಿಪಕ್ಷಗಳ ಬೇಡಿಕೆಯನ್ನು ಬಿಜೆಪಿ ಟೀಕಿಸಿದೆ.

ದೇಶದ ಆರ್ಥಿಕತೆ ಹಾಳು ಮಾಡಲು ಕಾಂಗ್ರೆಸ್​ನಿಂದ ಪಿತೂರಿ
'ದೇಶದ ಆರ್ಥಿಕತೆ ಹಾಳು ಮಾಡಲು ಕಾಂಗ್ರೆಸ್​ನಿಂದ ಪಿತೂರಿ' (ETV Bharat)

ನವದೆಹಲಿ:ಅದಾನಿ-ಹಿಂಡೆನ್​ಬರ್ಗ್​ ವಿಷಯವನ್ನಿಟ್ಟುಕೊಂಡು ದೇಶದ ಆರ್ಥಿಕತೆಯನ್ನು ಹಾಳು ಮಾಡಲು ಕಾಂಗ್ರೆಸ್​ ಪಿತೂರಿ ನಡೆಸಿದೆ. ಭಾರತೀಯ ಷೇರು ಮಾರುಕಟ್ಟೆ ಕುಸಿಯಲು ಅದರ ನಾಯಕರು ಬಯಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದರ ಜೊತೆಗೆ, ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ನೀಡಬೇಕೆಂಬ ವಿಪಕ್ಷಗಳ ಬೇಡಿಕೆಯನ್ನೂ ತಿರಸ್ಕರಿಸಿದೆ.

ಸೆಬಿ ಮುಖ್ಯಸ್ಥೆ ಮಾಧವಿ ಬುಚ್​ ಅವರು ಅದಾನಿ ಗ್ರೂಪ್​ನ ಬೇನಾಮಿ ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದರಿಂದಾಗಿ ಅವರು ಕಳೆದ ವರ್ಷ ಗ್ರೂಪ್​ ವಿರುದ್ಧ ಕೇಳಿಬಂದ ಆರೋಪಗಳಿಗೆ ಕ್ಲೀನ್​ಚಿಟ್​ ನೀಡಿದ್ದಾರೆ ಎಂದು ಹಿಂಡೆನ್​​ಬರ್ಗ್​ ಆರೋಪ ಮಾಡಿದೆ. ಇದರ ವಿರುದ್ಧ ಮುಗಿಬಿದ್ದಿರುವ ವಿಪಕ್ಷಗಳು ಪ್ರಕರಣವನ್ನು ಜೆಪಿಸಿ ತನಿಖೆಗೆ ನೀಡಬೇಕು ಎಂದು ಕೋರುತ್ತಿವೆ. ಜೊತೆಗೆ ಹಿಂಡೆನ್​​ಬರ್ಗ್​ ವರದಿಗೆ ಬೆಂಬಲಿಸುವ ಮಾದರಿಯಲ್ಲಿ ಮಾತನಾಡುತ್ತಿವೆ.

ದೇಶದ ಆರ್ಥಿಕತೆ ವಿರುದ್ಧ ಪಿತೂರಿ:ಈ ಬಗ್ಗೆ ಮಾತನಾಡಿರುವ ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಜಾರ್ಜ್ ಸೊರೊಸ್ ಹಿಂಡೆನ್‌ಬರ್ಗ್ ರಿಸರ್ಚ್‌ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಭಾರತದ ಆರ್ಥಿಕತೆಯನ್ನು ದುರ್ಬಲಗೊಳಿಸುವ ದೊಡ್ಡ ಪಿತೂರಿ ನಡೆದಿದೆ. ಜಾರ್ಜ್ ಸೊರೊಸ್ ಭಾರತ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಇದಕ್ಕೆ ವಿಪಕ್ಷಗಳು ಬೆಂಬಲಿಸುತ್ತಿವೆ. ದೇಶದ ಷೇರು ಮಾರುಕಟ್ಟೆ ಕುಸಿಯಬೇಕೆಂದು ಪ್ರಮುಖ ವಿಪಕ್ಷ ಕಾಂಗ್ರೆಸ್ ಬಯಸುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿ ಹೂಡಿಕೆ ನಿಲ್ಲಿಸಲು ವಿರೋಧ ಪಕ್ಷಗಳು ಸಂಚು ರೂಪಿಸಿವೆ. ಭಾರತದ ಹೂಡಿಕೆ ಮಾಡುವುದು 'ಅಸುರಕ್ಷಿತ' ಎಂದು ಬಿಂಬಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ವಿರೋಧ ಪಕ್ಷವು ಭಾರತೀಯ ಮಾರುಕಟ್ಟೆಗಳನ್ನು ದುರ್ಬಲಗೊಳಿಸುವ, ಆರ್ಥಿಕ ಅಸ್ಥಿರತೆ, ದ್ವೇಷವನ್ನು ಬಿತ್ತುವ ಪಿತೂರಿ ನಡೆಸುತ್ತಿದೆ ಎಂದು ಅವರು ಹೇಳಿದರು.

ಹಿಂಡೆನ್​​ಬರ್ಗ್​ ದುರುದ್ದೇಶದ ವರದಿ:ಹಿಂಡೆನ್‌ಬರ್ಗ್ ವರದಿಯು ದುರುದ್ದೇಶದಿಂದ ಕೂಡಿದೆ ಎಂದು ಟೀಕಿಸಿದ ರವಿಶಂಕರ್ ಪ್ರಸಾದ್, ಅದಾನಿ ಸಮೂಹದ ವಿರುದ್ಧ ಸ್ಟಾಕ್ ಮಾರ್ಕೆಟ್ ಮ್ಯಾನಿಪುಲೇಷನ್ ಆರೋಪಗಳ ತನಿಖೆಯ ಭಾಗವಾಗಿ ಸೆಬಿ ಕಳುಹಿಸಿರುವ ನೋಟಿಸ್‌ಗೆ ಹಿಂಡೆನ್‌ಬರ್ಗ್ ಇದುವರೆಗೂ ಉತ್ತರ ನೀಡಿಲ್ಲ. ಇಂತಹ ಸಂಸ್ಥೆ ನೀಡಿದ ವರದಿಯನ್ನೇ ವಿಪಕ್ಷಗಳು ನಂಬುತ್ತಿವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದ್ವೇಷ ಹೊಂದಿರುವ ಕಾಂಗ್ರೆಸ್, ಅದನ್ನು ಇಡೀ ಭಾರತದ ಮೇಲೆ ವ್ಯಾಪಿಸಲು ಪ್ರಯತ್ನಿಸುತ್ತಿದೆ. ಆಧಾರರಹಿತವಾಗಿ ಆರೋಪ ಮಾಡುತ್ತಿವೆ. ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರು ಸೆಬಿ ಮುಖ್ಯಸ್ಥರ ರಾಜೀನಾಮೆ ಬಯಸುತ್ತಿದ್ದಾರೆ. ಇದು ಹಾಸ್ಯಾಸ್ಪದ ಎಂದು ಹೇಳಿದರು.

ಇದನ್ನೂ ಓದಿ:ಷೇರು ಮಾರುಕಟ್ಟೆ ಅಲ್ಪ ಕುಸಿತ: ಅದಾನಿ ಗ್ರೂಪ್​​ನ 8 ಷೇರು ಇಳಿಕೆ, 2 ಏರಿಕೆ - Stock Market Today

ABOUT THE AUTHOR

...view details