ಮಹಾಕುಂಭ ನಗರ(ಉತ್ತರ ಪ್ರದೇಶ):ಭಾರತ ಪ್ರವಾಸದಲ್ಲಿರುವ ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗೇಲ್ ವಾಂಗ್ಚುಕ್ ಅವರು, ಮಂಗಳವಾರ ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಗಂಗೆಗೆ ಅರ್ಘ್ಯ ಸಲ್ಲಿಸುವ ಮೂಲಕ ಸನಾತನ ಆಚರಣೆಯಲ್ಲಿ ಪಾಲ್ಗೊಂಡರು.
ಭೂತಾನ್ ದೊರೆಯೊಂದಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗಂಗಾ ನದಿಯಲ್ಲಿ ಮಿಂದೆದ್ದರು. ಈ ವೇಳೆ ಸಚಿವರಾದ ಸ್ವತಂತ್ರ ದೇವ್ ಸಿಂಗ್, ನಂದ ಗೋಪಾಲ್ ಗುಪ್ತಾ ಮತ್ತು ಮಹಾಮಂಡಲೇಶ್ವರ ಸಂತೋಷ್ ದಾಸ್ ಮಹಾರಾಜ್ ಅವರಿದ್ದರು.
ಭೂತಾನ್ ದೊರೆ ತಮ್ಮ ಸಾಂಪ್ರದಾಯಿಕ ದಿರಿಸಿನಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಇದಕ್ಕೂ ಮೊದಲು ಸನಾತನ ಧರ್ಮದ ಆಚರಣೆಯ ಪ್ರಕಾರ, ಸೂರ್ಯದೇವನಿಗೆ ಅರ್ಘ್ಯ ಸಲ್ಲಿಸಿದರು. ಪೂಜಾ ಕೈಂಕರ್ಯದಲ್ಲಿ ಕುಳಿತು ಗಂಗೆಗೆ ಹೂವು, ಹಣ್ಣುಗಳನ್ನು ಸಮರ್ಪಿಸಿದರು. ಸಿಎಂ ಯೋಗಿ ಆದಿತ್ಯನಾಥ್ ಅವರು ಕೂಡ ಪೂಜೆಯಲ್ಲಿ ಜೊತೆಗೆ ಭಾಗಿಯಾದರು.
ಇದಾದ ಬಳಿಕ, ಗಂಗಾ ನದಿಯ ಸೊಬಗನ್ನು 3ಡಿ ಮೂಲಕ ತೋರಿಸಲಾಯಿತು. ಹಡಗಿನಲ್ಲಿ ಕುಳಿತು ತಾವೇ ಅರಗೋಲು ಹಾಕಿದ ಮಾದರಿಯಲ್ಲಿ 3ಡಿ ಸಂಚಾರ ನಡೆಸಿದರು. ನಂತರ, ತೀರ್ಥರಾಜ್ ಪ್ರಯಾಗಕ್ಕೆ ಭೇಟಿ ನೀಡಿ ಅಲ್ಲಿನ ಮಲಗಿರುವ ಭಂಗಿಯಲ್ಲಿರುವ ವಾಯುಪುತ್ರ ಹನುಮಾನ್ಗೆ ಪೂಜೆ ಸಲ್ಲಿಸಿದರು.
ಭೂತಾನ್ ದೊರೆಗೆ ಅದ್ಧೂರಿ ಸ್ವಾಗತ:ಇದಕ್ಕೂ ಮೊದಲು ಉತ್ತರಪ್ರದೇಶದ ರಾಜಧಾನಿ ಲಖನೌಗೆ ಸೋಮವಾರ ವಿಮಾನದಲ್ಲಿ ಬಂದಿಳಿದ ಭೂತಾನ್ ರಾಜನನ್ನು ಸಿಎಂ ಯೋಗಿ ಆದಿತ್ಯನಾಥ್ ಅವರು ಅದ್ಧೂರಿಯಾಗಿ ಬರಮಾಡಿಕೊಂಡರು. ಕಲಾವಿದರಿಂದ ಸಾಂಸ್ಕೃತಿಕ ಪ್ರದರ್ಶನ ಮತ್ತು ಪುಷ್ಪವೃಷ್ಟಿ ಸುರಿಸಲಾಯಿತು.