ಕರ್ನಾಟಕ

karnataka

By ETV Bharat Karnataka Team

Published : Jan 23, 2024, 5:29 PM IST

ETV Bharat / bharat

ಭಾರತ್ ಜೋಡೋ ನ್ಯಾಯ ಯಾತ್ರೆ: ಗುವಾಹಟಿ ಪ್ರವೇಶಕ್ಕಿಲ್ಲ ಅನುಮತಿ, ಘರ್ಷಣೆ - ರಾಹುಲ್​ ವಿರುದ್ಧ ಕೇಸ್​ಗೆ ಸೂಚನೆ

Bharat Jodo Nyay Yatra: ಗುವಾಹಟಿಯೊಳಗೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಪ್ರವೇಶಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ. ಈ ವೇಳೆ, ಪೊಲೀಸರು ಮತ್ತು ಕಾಂಗ್ರೆಸ್​ ಕಾರ್ಯಕರ್ತರ ಮಧ್ಯೆ ಘರ್ಷಣೆ ಉಂಟಾಗಿದೆ.

bharat-jodo-nyay-yatra-cong-workers-injured-in-clash-with-cops-cm-orders-action-against-rahul
ಭಾರತ್ ಜೋಡೋ ನ್ಯಾಯ ಯಾತ್ರೆ: ಗುವಾಹಟಿ ಪ್ರವೇಶಕ್ಕಿಲ್ಲ ಅನುಮತಿ, ಘರ್ಷಣೆ

ಗುವಾಹಟಿ (ಅಸ್ಸೋಂ):ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಅಸ್ಸೋಂನಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗುತ್ತಿವೆ. ಯಾತ್ರೆಯ ಗುವಾಹಟಿ ಪ್ರವೇಶಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ. ಹೀಗಾಗಿ ಇಂದು ಪೊಲೀಸರು ಮತ್ತು ಕಾಂಗ್ರೆಸ್​ ನಾಯಕರ ಮಧ್ಯೆ ಘರ್ಷಣೆ ಉಂಟಾಗಿದೆ. ಈ ವೇಳೆ, ಪಕ್ಷದ ಅಸ್ಸೋಂ ರಾಜ್ಯಾಧ್ಯಕ್ಷ ಭೂಪೇನ್ ಕುಮಾರ್​ ಬೋರಾ ಮತ್ತು ಮುಖಂಡ ಜಾಕಿರ್ ಹುಸೇನ್ ಸಿಕ್ದರ್ ಸೇರಿದಂತೆ ಇತರರು ಗಾಯಗೊಂಡಿದ್ದಾರೆ. ಮತ್ತೊಂದೆಡೆ, ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಪ್ರಚೋದನೆ ಆರೋಪದಡಿ ರಾಹುಲ್​ ಗಾಂಧಿ ವಿರುದ್ಧ ಕೇಸ್​ ದಾಖಲಿಸುವಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೂಚಿಸಿದ್ದಾರೆ.

ಜನವರಿ 14ರಂದು ಮಣಿಪುರದಿಂದ ಮುಂಬೈಗೆ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭವಾಗಿದೆ. ಈಶಾನ್ಯ ರಾಜ್ಯಗಳಾದ ಮಣಿಪುರ, ನಾಗಾಲ್ಯಾಂಡ್​, ಅಸ್ಸೋಂ, ಅರುಣಾಚಲ ಪ್ರದೇಶ, ಮೇಘಾಲಯದಲ್ಲಿ ಯಾತ್ರೆ ಸಂಚರಿಸುತ್ತಿದೆ. ಆದರೆ, ಅಸ್ಸೋಂನಲ್ಲಿ ನಿರಂತರವಾಗಿ ಅಹಿತಕರ ಘಟನೆಗಳು ವರದಿಯಾಗುತ್ತಿವೆ. ಭಾನುವಾರ ಸೋನಿತ್‌ಪುರ ಜಿಲ್ಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಭೂಪೇನ್ ಕುಮಾರ್ ಬೋರಾ ಅವರ ಹಲ್ಲೆ ನಡೆಸಲಾಗಿತ್ತು. ಹಿರಿಯ ನಾಯಕ ಜೈರಾಮ್ ರಮೇಶ್ ಅವರ ಕಾರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ, ರಾಹುಲ್​ ಗಾಂಧಿ ಸಂಚರಿಸುತ್ತಿದ್ದ ಬಸ್​ಗೆ ಅಡ್ಡಿಪಡಿಸುವ ಯತ್ನಗಳು ನಡೆದಿದ್ದವು ಎಂಬ ಆರೋಪವೂ ಇದೆ.

ಗುವಾಹಟಿ ಪ್ರವೇಶಕ್ಕೆ ನಿರಾಕರಣೆ: ಅಲ್ಲದೇ, ಸೋಮವಾರ ಸಮಾಜ ಸುಧಾರಕ - ಸಂತ ಶ್ರೀಮಂತ ಶಂಕರದೇವರ ಜನ್ಮಸ್ಥಳಕ್ಕೆ ರಾಹುಲ್​ ಗಾಂಧಿ ಭೇಟಿ ನೀಡಲು ಯೋಜಿಸಿದ್ದರು. ಆದರೆ, ಶಂಕರದೇವ ದೇವಾಲಯಕ್ಕೆ ರಾಹುಲ್​ ಗಾಂಧಿ ಅನುಮತಿ ನೀಡಿರಲಿಲ್ಲ. ಪಕ್ಷದ ಸ್ಥಳೀಯ ಇಬ್ಬರಿಗೆ ಮಾತ್ರ ದೇಗುಲಕ್ಕೆ ತೆರಳಲು ಅವಕಾಶ ನೀಡಲಾಗಿತ್ತು. ಇಂದು ಬೆಳಗ್ಗೆ ಮೇಘಾಲಯದಿಂದ ಗುವಾಹಟಿ ಕಡೆಗೆ ಯಾತ್ರೆ ಸಾಗುತ್ತಿತ್ತು. ಆದರೆ, ಗುವಾಹಟಿಯೊಳಗೆ ಯಾತ್ರೆ ಪ್ರವೇಶಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳ ಬದಲಿಗೆ ರಾಷ್ಟ್ರೀಯ ಹೆದ್ದಾರಿ 27ರ ಮಾರ್ಗದ ಮೂಲಕ ಯಾತ್ರೆ ಸಾಗಲು ಕಾಂಗ್ರೆಸ್​ಗೆ ಸರ್ಕಾರ ಸೂಚಿಸಿದೆ.

ಮತ್ತೊಂದೆಡೆ, ಇದಕ್ಕೆ ಕಾಂಗ್ರೆಸ್​ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಆಧಾರ ರಹಿತ ಕಾರಣ ನೀಡಿ ಯಾತ್ರೆ ಸಂಚಾರಕ್ಕೆ ಅನುಮತಿ ನಿರಾಕರಿಸಲಾಗುತ್ತಿದೆ. ಯಾತ್ರೆಗೆ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ಗುವಾಹಟಿ ನಗರದ ಪ್ರವೇಶದ ಮುಖ್ಯ ಸ್ಥಳವಾದ ಖಾನಪಾರಾಕ್ಕೆ ಯಾತ್ರೆ ಆಗಮಿಸಿದೆ. ಆದರೆ, ಅಸ್ಸೋಂ ಪೊಲೀಸರು ಈ ಪ್ರದೇಶದಲ್ಲಿ ಬೆಳಗ್ಗೆಯಿಂದಲೇ ದೊಡ್ಡ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ, ಯಾತ್ರೆ ಪ್ರವೇಶಿಸದಂತೆ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.

ಆಗ ಕಾಂಗ್ರೆಸ್​ ಅನೇಕ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ತಳ್ಳಿ ಪ್ರವೇಶಿಸಲು ಪ್ರಯತ್ನಿದ್ದಾರೆ. ಈ ವೇಳೆ, ಪೊಲೀಸರೊಂದಿಗೆ ತೀವ್ರ ಘರ್ಷಣೆ ನಡೆಸಿದರು. ಪೊಲೀಸರು ಲಾಠಿ ಪ್ರಹಾರ ಸಹ ನಡೆಸಿದ್ದಾರೆ. ಇದರಿಂದ ಹಲವರು ಗಾಯಗೊಂಡಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ರಸ್ತೆಯಲ್ಲಿ ಸೇರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್​ ಗಾಂಧಿ, ಅಸ್ಸೋಂ ಸರ್ಕಾರ, ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಮಂತ ಭ್ರಷ್ಟ ಸಿಎಂ - ರಾಹುಲ್​:ಗುವಾಹಟಿ ಪ್ರವೇಶಿಸದಂತೆ ತಡೆವೊಡ್ಡಿರುವ ಬಗ್ಗೆ ಟೀಕಾ ಪ್ರಹಾರ ನಡೆಸಿದ ರಾಹುಲ್​ ಗಾಂಧಿ, ರಸ್ತೆಯು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಬಜರಂಗ ದಳದವರಿಗೆ ಮಾತ್ರವೇ ಸೇರಿದೆಯೇ?, ನಾವು ಬ್ಯಾರಿಕೇಡ್‌ಗಳನ್ನು ಮುರಿದಿದ್ದೇವೆ. ಕಾನೂನನ್ನು ಅಲ್ಲ. ನಮ್ಮನ್ನು ದುರ್ಬಲರು ಎಂದು ಭಾವಿಸಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಅಲ್ಲದೇ, ಪೊಲೀಸರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​, ನೀವು ನಿಮ್ಮ ಕರ್ತವ್ಯವನ್ನು ಮಾಡುತ್ತಿದ್ದೀರಿ ಎಂದು ನಮಗೆ ಗೊತ್ತಿದೆ. ಇದು ನಿಮ್ಮ ತಪ್ಪಲ್ಲ. ಆದರೆ, ಅಸ್ಸೋಂನಲ್ಲಿ ನ್ಯಾಯ ಇರಬೇಕು. ಅನ್ಯಾಯ ಅಲ್ಲ ಎಂಬುದನ್ನು ನೆನಪಿಡಿ. ನಾವು ನಿಮ್ಮ ವಿರುದ್ಧವಾಗಿಲ್ಲ. ಆದರೆ, ಅಸ್ಸೋಂನ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ವಿರುದ್ಧ ಇದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ ಎಂದು ಹೇಳಿದರು. ಅಷ್ಟೇ ಅಲ್ಲ, ಮೇಘಾಲಯ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಜೊತೆಗೆ ಸಂವಾದವನ್ನು ಸರ್ಕಾರ ರದ್ದುಗೊಳಿಸಿದೆ. ಆದರೆ, ವಿದ್ಯಾರ್ಥಿಗಳೇ ನಮ್ಮನ್ನು ಭೇಟಿಯಾಗಲು ಬಂದಿದ್ದಾರೆ ಎಂದು ತಿಳಿಸಿದರು.

ರಾಹುಲ್​ ವಿರುದ್ಧ ಕೇಸ್​ಗೆ ಸಿಎಂ ಸೂಚನೆ:ಮತ್ತೊಂದೆಡೆ, ಪೊಲೀಸ್​ ಬ್ಯಾರಿಕೇಡ್‌ಗಳನ್ನು ಕೆಡವಿದ್ದಕ್ಕೆ ಸಿಎಂ ಹಿಮಂತ ಬಿಸ್ವಾ ಶರ್ಮಾ ಆಕ್ರೋಶ ಹೊರಹಾಕಿದ್ದಾರೆ. 'ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಬ್ಯಾರಿಕೇಡ್‌ಗಳನ್ನು ಹಾಕಿ ಮತ್ತೊಮ್ಮೆ ತಡೆಯುವ ಷಡ್ಯಂತ್ರ ನಡೆಯುತ್ತಿದೆ. ಆದರೆ, ನಾವು ಹಾಗಾಗಲು ಬಿಡುವುದಿಲ್ಲ. ನಿಮಗೆ ಬೇಕಾದಷ್ಟು ಲಾಠಿಗಳನ್ನು ಬಳಸಿ.. ಈ ಯುದ್ಧವು ಮುಂದುವರಿಯುತ್ತದೆ' ಎಂದು ಕಾಂಗ್ರೆಸ್​ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸಾಮಾಜಿಕ ಜಾಲತಾಣ 'ಏಕ್ಸ್​'ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದಕ್ಕೆ ಮರು ಪೋಸ್ಟ್​ ಮಾಡಿರುವ ಹಿಮಂತ ಬಿಸ್ವಾ, ಇದು ಅಸ್ಸಾಮಿ ಸಂಸ್ಕೃತಿಯ ಭಾಗವಲ್ಲ. ನಮ್ಮದು ಶಾಂತಿಯುತ ರಾಜ್ಯ. ಇಂತಹ 'ನಕ್ಸಲೀಯ ತಂತ್ರಗಳು' ನಮ್ಮ ಸಂಸ್ಕೃತಿಗೆ ಸಂಪೂರ್ಣವಾಗಿ ಪರಕೀಯವಾಗಿವೆ. ಜನಸಂದಣಿಯನ್ನು ಪ್ರಚೋದಿಸಿದ್ದಕ್ಕಾಗಿ ನಿಮ್ಮ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲು ಮತ್ತು ನಿಮ್ಮ ಹ್ಯಾಂಡಲ್‌ಗಳಲ್ಲಿ ನೀವು ಪೋಸ್ಟ್ ಮಾಡಿದ ದೃಶ್ಯಗಳನ್ನು ಸಾಕ್ಷಿಯಾಗಿ ಬಳಸಲು ನಾನು ಡಿಜಿಪಿಗೆ ಸೂಚನೆ ನೀಡಿದ್ದೇನೆ. ನಿಮ್ಮ ಅಶಿಸ್ತಿನ ನಡವಳಿಕೆ ಮತ್ತು ಒಪ್ಪಿಗೆ ಸೂಚಿಸಿದ ಮಾರ್ಗಸೂಚಿಗಳ ಉಲ್ಲಂಘನೆಯಿಂದಾಗಿ ಈಗ ಗುವಾಹಟಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಭಾರತ್ ಜೋಡೋ ನ್ಯಾಯ ಯಾತ್ರೆ: ಅಸ್ಸೋಂ ಕಾಂಗ್ರೆಸ್​ ರಾಜ್ಯಾಧ್ಯಕ್ಷರ ಮೇಲೆ ಹಲ್ಲೆ

ABOUT THE AUTHOR

...view details