ಕರ್ನಾಟಕ

karnataka

ಅಯೋಧ್ಯೆಯಿಂದ ಭಾರತದ ಪ್ರವಾಸೋದ್ಯಮಕ್ಕೆ ಉತ್ತೇಜನ: ವರದಿ

By ETV Bharat Karnataka Team

Published : Jan 22, 2024, 7:23 AM IST

ಭಾರತದ ಪ್ರವಾಸೋದ್ಯಮದ ಉತ್ತೇಜನಕ್ಕೆ ಅಯೋಧ್ಯೆ ಶಕ್ತಿ ನೀಡಲಿದೆ ಎಂದು ವಿದೇಶಿ ಬ್ರೋಕರೇಜ್ ಸಂಸ್ಥೆ ಜೆಫರೀಸ್ ವರದಿ ತಿಳಿಸಿದೆ.

ಭಾರತದ ಪ್ರವಾಸೋದ್ಯಮ ಉತ್ತೇಜನಕ್ಕೆ ಹೆಚ್ಚು ಶಕ್ತಿ ನೀಡಲಿದೆ ಅಯೋಧ್ಯೆ: ವರದಿ
ಭಾರತದ ಪ್ರವಾಸೋದ್ಯಮ ಉತ್ತೇಜನಕ್ಕೆ ಹೆಚ್ಚು ಶಕ್ತಿ ನೀಡಲಿದೆ ಅಯೋಧ್ಯೆ: ವರದಿ

ಅಯೋಧ್ಯೆ(ಉತ್ತರ ಪ್ರದೇಶ): ಇಂದು ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರದ ಉದ್ಘಾಟನೆ ನಡೆಯಲಿದೆ. ಮುಂದಿನ ಕೆಲವೇ ಗಂಟೆಗಳಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಆರಂಭವಾಗಲಿದೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು, ಗಣ್ಯರು ಅಯೋಧ್ಯಾ ನಗರಿಗೆ ಆಗಮಿಸಿದ್ದಾರೆ. ಈ ರಾಮ ಮಂದಿರ ಪ್ರತಿ ವರ್ಷ 5 ಕೋಟಿಗೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲಿದ್ದು, ಭಾರತ ಹೊಸ ಪ್ರವಾಸಿ ತಾಣವನ್ನು ಪಡೆದುಕೊಂಡಿದೆ ಎಂದು ವಿದೇಶಿ ಬ್ರೋಕರೇಜ್ ಸಂಸ್ಥೆ ಜೆಫರೀಸ್ ತಮ್ಮ ವರದಿಯಲ್ಲಿ ಹೇಳಿದೆ.

$10 ಬಿಲಿಯನ್ ವೆಚ್ಚದಲ್ಲಿ (ಹೊಸ ವಿಮಾನ ನಿಲ್ದಾಣ, ನವೀಕೃತ ರೈಲು ನಿಲ್ದಾಣ, ಟೌನ್‌ಶಿಪ್, ಸುಧಾರಿತ ರಸ್ತೆ ಸಂಪರ್ಕ ಇತ್ಯಾದಿ) ಹೊಸ ಹೋಟೆಲ್‌ಗಳು ಮತ್ತು ಇತರ ಆರ್ಥಿಕ ಚಟುವಟಿಕೆಗಳೊಂದಿಗೆ ಈ ನಗರಿ ಪ್ರವಾಸೋದ್ಯಮದ ಮೇಲೆ ದುಪ್ಟಟ್ಟು ಧನಾತ್ಮಕ ಪರಿಣಾಮ ಉಂಟುಮಾಡುತ್ತದೆ. ಅಯೋಧ್ಯೆ ದೇಶದ ಪ್ರವಾಸೋದ್ಯಮ ಉತ್ತೇಜನಕ್ಕೆ ಒಂದು ದೊಡ್ಡ ಕೊಡುಗೆ ನೀಡಲಿದೆ. ಪ್ರಾಚೀನ ನಗರವನ್ನು ಜಾಗತಿಕ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರವಾಸಿ ತಾಣವಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದೆ.

ಹೊಸ ರಾಮ ಮಂದಿರವನ್ನು $225 ಮಿಲಿಯನ್ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು ಅಯೋಧ್ಯೆಗೆ ಪ್ರವಾಸೋದ್ಯಮ ಮತ್ತು ಆರ್ಥಿಕ ಮತ್ತು ಧಾರ್ಮಿಕ ವಲಸೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಹೋಟೆಲ್‌ಗಳು, ಏರ್‌ಲೈನ್ಸ್, ಹಾಸ್ಪಿಟಾಲಿಟಿ, ಎಫ್‌ಎಂಸಿಜಿ, ಟ್ರಾವೆಲ್, ಸಿಮೆಂಟ್ ಸೇರಿದಂತೆ ಹಲವು ವಲಯಗಳು ಪ್ರಯೋಜನ ಪಡೆಯಲಿವೆ ಎಂದು ವರದಿ ವಿವರಿಸಿದೆ.

ಅಯೋಧ್ಯೆಯಲ್ಲಿ ಹೊಸ ವಿಮಾನ ನಿಲ್ದಾಣದ ಹಂತ 1ರ ಜೊತೆಗೆ ಪ್ರವಾಸೋದ್ಯಮವನ್ನು ಸುಗಮಗೊಳಿಸಲು ಮೂಲಸೌಕರ್ಯಗಳ ಉನ್ನತೀಕರಣದ ಕೆಲಸ $175 ಮಿಲಿಯನ್ ವೆಚ್ಚದಲ್ಲಿ ಪ್ರಾರಂಭವಾಗಿದೆ. ವಿಮಾನ ನಿಲ್ದಾಣವು 10 ಲಕ್ಷ ಪ್ರಯಾಣಿಕರನ್ನು ನಿಭಾಯಿಸಬಲ್ಲುದು. 2025ರ ವೇಳೆಗೆ 60 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯದ ಮತ್ತೊಂದು ಅಂತಾರಾಷ್ಟ್ರೀಯ ಟರ್ಮಿನಲ್ ಅನ್ನು ಇಲ್ಲಿ ನಿರ್ಮಿಸುವ ನಿರೀಕ್ಷೆಯಿದೆ. ರೈಲ್ವೆ ನಿಲ್ದಾಣವನ್ನು ದಿನಕ್ಕೆ 60 ಸಾವಿರ ಪ್ರಯಾಣಿಕರು ಆಗಮಿಸುವಂತೆ ನವೀಕರಿಸಲಾಗಿದೆ.

1,200 ಎಕರೆ ಗ್ರೀನ್‌ಫೀಲ್ಡ್ ಟೌನ್‌ಶಿಪ್ ಯೋಜಿಸಲಾಗುತ್ತಿದೆ. ರಸ್ತೆ ಸಂಪರ್ಕವನ್ನೂ ಸಹ ಹೆಚ್ಚಿಸಲಾಗುತ್ತಿದೆ. ಈ ಮೂಲಕ ಭಾರತದಲ್ಲಿ ಪ್ರವಾಸೋದ್ಯಮಕ್ಕೆ ದೊಡ್ಡ ಸಾಮರ್ಥ್ಯವಿದೆ ಎಂದು ವರದಿ ಹೇಳುತ್ತದೆ. ದೇಶದಲ್ಲಿ ಧಾರ್ಮಿಕ ಪ್ರವಾಸೋದ್ಯಮ ದೊಡ್ಡದಾಗಿದೆ. ಅಸ್ತಿತ್ವದಲ್ಲಿರುವ ಮೂಲಸೌಕರ್ಯ ನಿರ್ಬಂಧಗಳ ಹೊರತಾಗಿಯೂ ಅನೇಕ ಜನಪ್ರಿಯ ಧಾರ್ಮಿಕ ಕೇಂದ್ರಗಳು ವಾರ್ಷಿಕವಾಗಿ 1 ರಿಂದ 30 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಉತ್ತಮ ಸಂಪರ್ಕ ಮತ್ತು ಮೂಲಸೌಕರ್ಯದೊಂದಿಗೆ ಹೊಸ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರ (ಅಯೋಧ್ಯೆ) ರಚನೆಯು ಅರ್ಥಪೂರ್ಣ ಆರ್ಥಿಕ ಪರಿಣಾಮವನ್ನು ಉಂಟುಮಾಡಬಹುದು ಎಂದು ವರದಿ ಹೇಳಿದೆ. (ಐಎಎನ್​ಎಸ್​)

ಇದನ್ನೂ ಓದಿ:ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ: ಹೀಗಿದೆ ಕಾರ್ಯಕ್ರಮದ ಸಂಪೂರ್ಣ ವಿವರ

ABOUT THE AUTHOR

...view details