ಹೈದರಾಬಾದ್: ವಿದ್ಯೆ ಎಂಬುದು ಸಮುದಾಯಕ್ಕೆ ಬೆಳಕು ನೀಡುವ ಶಕ್ತಿ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ನ ಯುವಕ. ಯುವ ಇಂಜಿನಿಯರ್ ಆದ ದೀಪಕ್ ರೆಡ್ಡಿ, ಉತ್ತಮ ಸಂಬಳ ಬರುವ ಕೆಲಸವನ್ನು ತೊರೆದು ಕೃಷಿಯಲ್ಲಿ ಹೊಸ ಆವಿಷ್ಕಾರ ಮಾಡಿ ಎಲ್ಲರಿಗೆ ಸ್ಪೂರ್ತಿಯಾಗಿದ್ದಾರೆ. ಆತನ ದೃಢತೆ ಮತ್ತು ಜಾಣ್ಮೆಯ ಪ್ರತಿಫಲವಾಗಿ ಕೃಷಿ ಯೋಗ್ಯವಲ್ಲದ ಭೂಮಿ ಇಂದು ಉತ್ತಮ ಫಸಲು ಬರುವ ಭೂಮಿಯಾಗಿ ರೂಪುಗೊಂಡಿದೆ.
ಓದು ಕೇವಲ ತನ್ನ ಬದುಕಿಗೆ ಮಾತ್ರ ಅರ್ಥಪೂರ್ಣ ಪ್ರಯೋಜನ ನೀಡಿದರೆ ಸಾಲದು. ಅದು ತನ್ನ ಸಮುದಾಯಕ್ಕೂ ಹಾಗೂ ಸುತ್ತಮುತ್ತಲಿನ ಜನರಿಗೂ ನೆರವಾಗಬೇಕು ಎಂಬ ಮಹತ್ವಾಕಾಂಕ್ಷೆಯನ್ನು ದೀಪಕ್ ಹೊಂದಿದ್ದ. ಇದೇ ಕಾರಣಕ್ಕೆ ಆರಾಮದಾಯಕ ಸಾಫ್ಟ್ವೇರ್ ಉದ್ಯೋಗದ ಗುರಿಯನ್ನು ಅರ್ಧಕ್ಕೆ ಬಿಟ್ಟು, ಕೃಷಿಗೆ ಯೋಗ್ಯವಲದೇ ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ಭೂಮಿಯನ್ನು ಹುಲಸಾಗಿ ಮಾಡುವ ಯಂತ್ರವನ್ನು ಅವಿಷ್ಕಾರ ಮಾಡುವ ಹೊಸ ಕ್ರಾಂತಿಗೆ ಮುಂದಾದ.
ಸತತ ನಾಲ್ಕು ವರ್ಷದ ಪರಿಶ್ರಮ:ನಾಲ್ಕು ವರ್ಷಗಳ ಕಾಲ ನಡೆಸಿದ ಈ ಪ್ರಯೋಗದಲ್ಲಿ ದೀಪಕ್ ಹಲವು ಸೋಲುಗಳನ್ನು ಕಂಡರು. ಆದರೆ, ಅವರಲ್ಲಿದ್ದ ಪಟ್ಟುಬಿಡದ ಛಲ, ದೃಢ ಮನಸ್ಸು ಕಡೆಗೂ ಫಲ ನೀಡಿದೆ. ಬಂಜರು ಭೂಮಿಯನ್ನು ಹದ ಮಾಡಲು ಬೇಕಾದ ಸ್ಟೋನ್ ಕ್ರಷರ್ ಯಂತ್ರವನ್ನು ರೂಪಿಸುವ ಮೂಲಕ ಆತ ಕೃಷಿಯಲ್ಲಿ ಹೊಸ ಆವಿಷ್ಕಾರ ಮಾಡಿದ್ದಾನೆ.
ಈ ನಾವೀನ್ಯತೆ ಆವಿಷ್ಕಾರ ನಡೆಸಲು ದೀಪಕ್ ಏಕಾಂಗಿ ಪ್ರಯಾಣ ನಡೆಸಿದ್ದಾರೆ. ತಾವೇ ಆವಿಷ್ಕರಿಸಿದ ಯಂತ್ರದ ಸಹಾಯದಿಂದ ಬಂಜರು ಭೂಮಿಯನ್ನು ಕೃಷಿ ಭೂಮಿಯಾಗಿ ರೂಪಿಸಿದ್ದಾರೆ. ಈ ಹಿಂದೆ ಈ ರೀತಿಯ ಬಂಜರು ಭೂಮಿಯನ್ನು ಕೃಷಿ ಭೂಮಿಯಾಗಿ ಮಾಡಲು ಕನಿಷ್ಠ 10 ದಿನಗಳು ಬೇಕಾಗುತ್ತಿತ್ತು. ಆದರೆ, ಇದೀಗ ನಾಲ್ಕು ಗಂಟೆಗಳಲ್ಲಿ ಈ ಯುವಕ ತಯಾರಿಸಿದ ಯಂತ್ರದ ಸಹಾಯದಿಂದ ಭೂಮಿಯನ್ನು ಹದಗೊಳಿಸಬಹುದಾಗಿದೆ.