ಮೈಸೂರು: ಒಂದು ತಿಂಗಳಲ್ಲಿ ಒಂದೇ ಜಮೀನಿನಲ್ಲಿ ನಾಲ್ಕನೇ ಚಿರತೆ ಸೆರೆ!
Published : 2 hours ago
ಮೈಸೂರು : ಒಂದೇ ತಿಂಗಳಲ್ಲಿ ಒಂದೇ ಜಮೀನಿನಲ್ಲಿ ನಾಲ್ಕನೇ ಚಿರತೆ ಸೆರೆಯಾಗಿದೆ. ಇದು ಗ್ರಾಮಸ್ಥರಿಗೆ ಹಾಗೂ ಅರಣ್ಯ ಇಲಾಖೆಗೆ ಅಚ್ಚರಿ ತರಿಸಿದೆ. ಹೆಚ್.ಡಿ.ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆ ಸಮೀಪದ ಗುರುಮಲ್ಲು ಅವರ ಜಮೀನಿನಲ್ಲಿ ನಾಲ್ಕನೇ ಚಿರತೆ ಸೆರೆಯಾಗಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ ಚಿರತೆಯೊಂದು ಸೆರೆಯಾಗಿತ್ತು. ಅದೇ ಜಾಗದಲ್ಲಿ ಇದೀಗ ಮತ್ತೊಂದು ಚಿರತೆ ಸೆರೆಯಾಗಿದೆ. 6 ವರ್ಷದ ಗಂಡು ಚಿರತೆ ಇದಾಗಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿತ್ತು. ಇದರಿಂದ ಬೇಸತ್ತ ಸ್ಥಳೀಯ ರೈತರು ಬೋನು ಇಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಅವರ ಮನವಿ ಮೇರೆಗೆ ಅಧಿಕಾರಿಗಳು ಬೋನು ಇಟ್ಟಿದ್ದರು. ಆದರೆ, ನಾಯಿ ಭಕ್ಷಿಸಲು ತಡರಾತ್ರಿ ಬಂದು ಚಿರತೆ ಸೆರೆಯಾಗಿದೆ. ಸೆರೆಯಾದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅರಣ್ಯಕ್ಕೆ ಸ್ಥಳಾಂತರ ಮಾಡಿದ್ದಾರೆ. ಸೆರೆ ಸಿಕ್ಕ ಚಿರತೆ ನೋಡಲು ಜನ ಜಮಾಯಿಸಿದ್ದರು. ಅದೇ ಜಮೀನಿನಲ್ಲಿ ಇನ್ನೂ ಹಲವು ಚಿರತೆಗಳಿದ್ದು, ಸೆರೆ ಹಿಡಿಯುವಂತೆ ರೈತರು ಇದೇ ವೇಳೆ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಬನ್ನೇರುಘಟ್ಟದಲ್ಲಿ ಸಫಾರಿ ಬಸ್ ಹತ್ತಿ ಕಿಟಕಿಯೊಳಗೆ ಇಣುಕಿ ನೋಡಿದ ಚಿರತೆ: ವಿಡಿಯೋ