Published : Feb 5, 2024, 11:09 AM IST
|Updated : Feb 5, 2024, 12:38 PM IST
ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯ ಆರೋಪ: ಸಿಎಂ, ಡಿಸಿಎಂ ಜಂಟಿ ಸುದ್ದಿಗೋಷ್ಠಿ - LIVE
ಬೆಂಗಳೂರು: ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಅನುದಾನ ತಾರತಮ್ಯ ಆರೋಪ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಫೆ.7 ರಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಮಾಹಿತಿ ನೀಡಲು ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ಕರೆದಿದ್ದಾರೆ.
ರಾಜ್ಯಕ್ಕೆ ಆಗುತ್ತಿರುವ ಅನುದಾನ ತಾರತಮ್ಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾರೆ. 'ದೇಶದಲ್ಲಿ ಎರಡನೇ ತೆರಿಗೆ ಪಾವತಿಸುವ ರಾಜ್ಯ ಕರ್ನಾಟಕ. ಸುಮಾರು 4 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಹಣ ಕೇಂದ್ರಕ್ಕೆ ಹೋಗುತ್ತಿದೆ. ಇದರಲ್ಲಿ ಕೇವಲ 60 ಸಾವಿರ ಕೋಟಿ ರೂ. ನಮಗೆ ವಾಪಸು ಬರುತ್ತಿದೆ. ಐಟಿ ರಪ್ತು ಕ್ಷೇತ್ರದಲ್ಲಿ 3.50 ಲಕ್ಷ ಕೋಟಿ ರೂ. ರಾಜ್ಯದಿಂದ ರಪ್ತಾಗುತ್ತಿದೆ. ಅದಕ್ಕೆ ಪ್ರತಿಯಾಗಿ ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ' ಎಂದು ಸಿಎಂ ಆರೋಪಿಸಿದ್ದರು.
14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಬರುವ ತೆರಿಗೆ 4.71% ಪಾಲು ಇತ್ತು. 15ನೇ ಹಣಕಾಸು ಆಯೋಗದ ವೇಳೆ ಅದು 3.64% ಕ್ಕೆ ಇಳಿಕೆಯಾಗಿದೆ. ತೆರಿಗೆ ಪಾಲಿನಲ್ಲಿ 25% ಕಡಿಮೆಯಾಗಿದೆ. ಆ ಮೂಲಕ ವರ್ಷಕ್ಕೆ 14 ಸಾವಿರ ಕೋಟಿ ರೂ. ರಾಜ್ಯಕ್ಕೆ ನಷ್ಟವಾಗುತ್ತಿದೆ. 2020-2025ವರೆಗೆ ಐದು ವರ್ಷದಲ್ಲಿ 62,000 ಕೋಟಿ ರೂ. ನಷ್ಟವಾಗಿದೆ. ಜಿಎಸ್ಟಿ ಬಂದ ಬಳಿಕ ನಮಗೆ ಈ ಹಿಂದಿನ ತೆರಿಗೆ ಸಂಗ್ರಹದ ವೃದ್ಧಿಗೆ ಹೋಲಿಸಿದರೆ ಪ್ರತಿವರ್ಷ 25,000-30,000 ಕೋಟಿ ರೂ. ಕಡಿಮೆಯಾಗುತ್ತಿದೆ. ಈ ಕೊರತೆಗಳ ಹಿನ್ನೆಲೆ ಹಣಕಾಸು ಆಯೋಗ ನಮಗೆ ಮೂರು ವಿಶೇಷ ಅನುದಾನದ ಶಿಫಾರಸು ಮಾಡಿದೆ. ಸುಮಾರು 11,495 ಕೋಟಿ ರೂ. ಶಿಫಾರಸು ಮಾಡಿದೆ. ಅದನ್ನೂ ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.