ಬೆಂಗಳೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯಾಗಿ ಪರಿಗಣಿಸುವ ಸಂಬಂಧ ಈಗಾಗಲೇ ಎರಡನೇ ಭಾಷೆಯಾಗಿ ಘೋಷಿಸಿದ ರಾಜ್ಯಗಳಿಗೆ ಅಧಿಕಾರಿಗಳ ತಂಡವನ್ನು ಕಳುಹಿಸಲಾಗುವುದು. ಅಲ್ಲಿ ಸಮಗ್ರ ಮಾಹಿತಿ ಪಡೆದು ವರದಿ ಬಂದ ಬಳಿಕ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಕುರಿತಂತೆ ಡಾ.ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿ 2013ರಲ್ಲಿ ರಚಿಸಲಾಗಿದ್ದ ಸಮಿತಿಯು ಅಧ್ಯಯನ ನಡೆಸಿ ಕಳೆದ ವರ್ಷ ಸರ್ಕಾರಕ್ಕೆ ವರದಿ ನೀಡಿತ್ತು. ಸಮಿತಿ ವರದಿ ಆಧರಿಸಿ ಕಾನೂನು ಇಲಾಖೆಯು ವಿವಿಧ ರಾಜ್ಯಗಳಲ್ಲಿ ಎರಡನೇ ಭಾಷೆಯನ್ನು ಅಧಿಕೃತ ಭಾಷೆಯೆಂದು ಘೋಷಿಸಿರುವ ಬಗ್ಗೆ ಸಮಗ್ರ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಅಭಿಪ್ರಾಯ ನೀಡಿದೆ. ಹೀಗಾಗಿ ಸಮಗ್ರ ಮಾಹಿತಿ ಪಡೆಯಲು ದ್ವಿಭಾಷೆಗಳಾಗಿ ಘೋಷಿಸಿರುವ ಆಂಧ್ರಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳಕ್ಕೆ ಪತ್ರ ಬರೆಯಲಾಗಿತ್ತು. ಆಯಾ ರಾಜ್ಯಗಳಿಂದ ಉತ್ತರ ಬರದ ಕಾರಣ ಹೀಗಾಗಿ ಪ್ರತ್ಯೇಕ ಮೂರು ಅಧಿಕಾರಿಗಳ ತಂಡ ರಚಿಸಿ ಅಲ್ಲಿಗೆ ಹೋಗಿ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಲಾಗುವುದು. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಂಗಡಗಿ ಭರವಸೆ ನೀಡಿದರು.
ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಡಿ ಸೇರ್ಪಡೆಗೊಳಿಸುವ ಸಂಬಂಧ 2005ರಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಅಲ್ಲದೆ 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಳು ಜೊತೆಗೆ ಕೊಡವ ಭಾಷೆಯನ್ನು 8ನೇ ಪರಿಚ್ಛೇದದಲ್ಲಿ ಸೇರಿಸುವಂತೆ ಪತ್ರ ಬರೆದಿದ್ದರೂ ಕೇಂದ್ರದಿಂದ ಉತ್ತರ ಬಂದಿರಲಿಲ್ಲ. ಆದಾಗ್ಯೂ ಮತ್ತೆ ಪತ್ರ ಬರೆದರೆ ಕಾನೂನು ಇಲಾಖೆ ಅನುಮತಿ ಪಡೆಯುವಂತೆ ಕೇಂದ್ರ ಸರ್ಕಾರ ತಿಳಿಸಲಿದೆ. ಇದನ್ನು ಮನಗೊಂಡು ಮೊದಲು ತುಳುವನ್ನು ಕರ್ನಾಟಕದ ಎರಡನೇ ಭಾಷೆಯನ್ನಾಗಿ ಮಾಡಲು ಕಾನೂನು ಇಲಾಖೆಯ ಅಭಿಪ್ರಾಯದಂತೆ ಎರಡನೇ ಭಾಷೆಯಾಗಿ ಘೋಷಿರುವ ರಾಜ್ಯಗಳಿಗೆ ಮೂರು ಪ್ರತ್ಯೇಕ ತಂಡ ರಚಿಸಲಾಗುವುದು. ಅಧಿಕಾರಿಗಳಿಗೆ ಅಲ್ಲಿ ಎರಡನೇ ಭಾಷೆ ಯಾವ ರೀತಿ ಮಾಡಲಾಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸುವಂತೆ ಸೂಚಿಸಲಾಗುವುದು. ವರದಿ ಕೈ ಸೇರಿದ ಬಳಿಕ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಇದನ್ನೂ ಓದಿ: ರಷ್ಯಾ ಸೇನೆಯಲ್ಲಿ ಸಿಲುಕಿದ ಭಾರತೀಯರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ: ಚಿಕ್ಕೋಡಿಯಲ್ಲಿ ಎಸ್.ಜೈಶಂಕರ್