ಮೈಸೂರು: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 6 ಸುಲಿಗೆ, 6 ಸರಗಳ್ಳತನ, 25 ಮನೆ ಕಳ್ಳತನ, 6 ಮನೆ ಕೆಲಸದವರೇ ಕಳವು, 67 ವಾಹನ ಕಳ್ಳತನ, 15 ಸಾಮಾನ್ಯ ಕಳ್ಳತನ, 5 ಜಾನುವಾರು ಕಳ್ಳತನ ಮತ್ತು 4 ವಂಚನೆ ಪ್ರಕರಣಗಳನ್ನು ಪತ್ತೆ ಮಾಡಿ ಒಟ್ಟು ರೂ. 2,06,85,504 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ವಶಕ್ಕೆ ಪಡೆದ ವಸ್ತುಗಳ ವಿವರ : ಒಟ್ಟು 35 ಪ್ರಕರಣಗಳಲ್ಲಿ 1,01,55,219 ರೂ.ಗಳ 2.439 ಕೆ.ಜಿ ಚಿನ್ನ ಮತ್ತು 4.360 ಕೆ.ಜಿ. ಬೆಳ್ಳಿ, ಒಟ್ಟು 18 ಪ್ರಕರಣಗಳಲ್ಲಿ 42,36,585 ರೂ. ನಗದು ವಶಪಡಿಸಿಕೊಂಡಿದ್ದಾರೆ. ಒಟ್ಟು 67 ಪ್ರಕರಣಗಳಲ್ಲಿ ಒಟ್ಟು 52,12,620 ರೂ. ಮೌಲ್ಯದ 5 ಕಾರು, 3 ಆಟೋ, 2 ಟ್ರ್ಯಾಕ್ಟರ್, 3 ಟಿಪ್ಪರ್, 3 ರೋಡ್ ರೋಲರ್ ಮತ್ತು 62 ಮೊಟಾರ್ ಬೈಕ್ 62 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
![Mysore Police's massive operation: Property worth Rs 2 crore returned to heirs](https://etvbharatimages.akamaized.net/etvbharat/prod-images/06-02-2025/23488613_thumbnaieeg.jpg)
8 ಪ್ರಕರಣಗಳಲ್ಲಿ 3,54,000 ರೂ. ಮೌಲ್ಯದ ಮೋಟಾರ್ ಪಂಪ್, ಬ್ಯಾಟರಿ, ಲ್ಯಾಪ್ಟಾಪ್, ಟ್ಯಾಬ್, ಹಾರ್ಡ್ ಡಿಸ್ಕ್, ಮೊಬೈಲ್ ಹಾಗೂ ಇತರೇ ವಸ್ತುಗಳು, ಮತ್ತು 4 ಪ್ರಕರಣಗಳಲ್ಲಿ ಅಂದಾಜು 2,95,000 ರೂ. ಮೌಲ್ಯದ 6 ಹಸುಗಳು ಮತ್ತು 3 ಕುರಿಗಳನ್ನು, 9 ಪ್ರಕರಣಗಳಲ್ಲಿ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ನ್ಯಾಯಾಲಯದ ಆದೇಶದ ಮೇರೆಗೆ ವಾರಸುದಾರರಿಗೆ ನೀಡಿದ್ದಾರೆ. 13,50,000 ರೂ. ಮೌಲ್ಯದ ಒಟ್ಟು 90 ಮೊಬೈಲ್ ಕಳವು ಪ್ರಕರಣವನ್ನು ಭೇದಿಸಿ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.
ಎರಡು ವರ್ಷದಲ್ಲಿ 398 ಮನೆ ಕಳವು : ಮೈಸೂರು ಜಿಲ್ಲೆಯಲ್ಲಿ ಅಂದಾಜು ಕಳೆದೆರಡು ವರ್ಷದಲ್ಲಿ 2023ರ ಜುಲೈನಿಂದ 2025ರ ಜನವರಿವರೆಗೆ ಒಟ್ಟು 1,279 ಪ್ರಕರಣಗಳು ದಾಖಲಾಗಿ 28,72,22,001 ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದವು. ಈ ಪೈಕಿ 398 ಮನೆಕಳವು ಪ್ರಕರಣಗಳೇ ಹೆಚ್ಚಾಗಿ ನಡೆದಿದ್ದು, ಕೇವಲ 63 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಉಳಿದವು ಇನ್ನೂ ತನಿಖಾ ಹಂತದಲ್ಲಿವೆ. ಈ ಪೈಕಿ ಒಟ್ಟು 255 ಪ್ರಕರಣಗಳ ಮಾಲುಗಳನ್ನು ವಶಕ್ಕೆ ಪಡೆದು 3,96,17,238 ರೂ. ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ 134 ಪ್ರಕರಣಗಳ 2,06,85,504 ರೂ. ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.
![Mysore Police's massive operation: Property worth Rs 2 crore returned to heirs](https://etvbharatimages.akamaized.net/etvbharat/prod-images/06-02-2025/23488613_thumbnaieg.jpg)
ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಎನ್. ವಿಷ್ಣುವರ್ಧನ, "2023ರ ಜುಲೈನಿಂದ ಈವರೆಗೆ ನಡೆದ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಇಂದು ಮಾಲೀಕರಿಗೆ ಆಯಾ ವಸ್ತುಗಳನ್ನು ಹಿಂದಿರುಗಿಸಲಾಗಿದೆ. ಉಳಿದವು ಕೆಲವು ತನಿಖೆ ಹಂತದಲ್ಲಿದ್ದರೆ, ಮತ್ತೆ ಕೆಲವು ನ್ಯಾಯಾಲಯದ ಹಂತದಲ್ಲಿವೆ. ಪೊಲೀಸರಿಂದಲೂ ಅನೇಕ ಪ್ರಕರಣಗಳ ಪತ್ತೆ ಕಾರ್ಯ ನಡೆಯುತ್ತಿದೆ" ಎಂದು ಹೇಳಿದರು.
![Mysore Police's massive operation: Property worth Rs 2 crore returned to heirs](https://etvbharatimages.akamaized.net/etvbharat/prod-images/06-02-2025/23488613_thumbnaimeeg.jpg)
ತನಿಖೆ ಬಳಿಕ ಮಾಹಿತಿ : "ಇನ್ನೂ ನಂಜನಗೂಡಿನಲ್ಲಿ 2024ರಲ್ಲಿ ರಸ್ತೆ ದರೋಡೆ ಪ್ರಕರಣ ನಡೆದಿತ್ತು. ಅದಾದ ಬಳಿಕ ಕಳೆದ ವರ್ಷ ಏನೂ ನಡೆದಿರಲಿಲ್ಲ. ಈಗ ಕೆಲದಿನಗಳ ಹಿಂದೆ ಜಯಪುರದಲ್ಲಿ ಪ್ರಕರಣ ನಡೆದು ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಎರಡು ಪ್ರಕರಣಗಳಿಗೂ ಸಾಮಿಪ್ಯವಿದೆಯೇ ಅಥವಾ ಅಂತಾರಾಜ್ಯ ಕಳ್ಳರ ಕೈಚಳಕವಿದೆಯೇ ಎಂಬುದು ತನಿಖೆಯಿಂದ ತಿಳಿದು ಬರಬೇಕು. ತನಿಖೆ ಪೂರ್ಣಗೊಂಡ ಬಳಿಕ ಪೂರ್ಣ ಮಾಹಿತಿ ನೀಡುವುದಾಗಿ" ಹೇಳಿದರು.
![Mysore Police's massive operation: Property worth Rs 2 crore returned to heirs](https://etvbharatimages.akamaized.net/etvbharat/prod-images/06-02-2025/23488613_thumbneeg.jpg)
"ಜಿಲ್ಲೆಯಲ್ಲಿ ಸ್ಥಳೀಯರ ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಅಡಿಯಲ್ಲಿ 2,800ಕ್ಕೂ ಹೆಚ್ಚು ಸಿಸಿಟಿವಿಗಳಿವೆ. ಇಲಾಖೆಯಿಂದ 1,006 ಸಿಸಿಟಿವಿಗಳನ್ನು ಕಣ್ಗಾವಲಿಗೆ ಇರಿಸಲಾಗಿದ್ದು, ಅವುಗಳಿಂದ ಕಳವು ಪ್ರಕರಣ ಬೇಧಿಸಲು ಸಹಕಾರಿಯಾಗಿದೆ" ಎಂದು ತಿಳಿಸಿದರು.
![Mysore Police's massive operation: Property worth Rs 2 crore returned to heirs](https://etvbharatimages.akamaized.net/etvbharat/prod-images/06-02-2025/23488613_thumbnailmeeg.jpg)
ಸದರಿ ಪ್ರಕರಣದ ತನಿಖೆ ಹಾಗೂ ಹಿಂದಿರುಗಿಸುವ ಪ್ರಕರಣದಲ್ಲಿ ಕಾರ್ಯನಿರ್ವಹಿಸಿದ ಅಪರ ಪೊಲೀಸ್ ಅಧೀಕ್ಷಕ ಸಿ.ಮಲ್ಲಿಕ್, ಕೆ.ಎಸ್.ಪಿ.ಎಸ್ನ ಎಲ್. ನಾಗೇಶ್, ಕೆ.ಎಸ್.ಪಿ.ಎಸ್. ಹಾಗೂ ಮೈಸೂರು ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕರೀಂ ರಾವತರ್, ನಂಜನಗೂಡು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಜಿ.ಎಸ್.ರಘು, ಹುಣಸೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ, ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಎನ್.ರಘು ಮೊದಲಾದವರ ತಂಡ ಉಪಸ್ಥಿತರಿದ್ದರು.
ಇದನ್ನೂ ಓದಿ: ಅಕ್ರಮ ಬಡ್ಡಿದಂಧೆ ವಿರುದ್ಧ ಪೊಲೀಸ್ ಕಾರ್ಯಾಚರಣೆ ; ತಡರಾತ್ರಿಯೂ ಆರೋಪಿಗಳ ಮನೆ ಸರ್ಚ್