ಕಲಬುರಗಿ: ಆಳಂದ ತಾಲೂಕಿನ ಸರಸಂಭಾ ಹಾಗೂ ಅಫಜಲಪುರ ತಾಲೂಕಿನ ಸಾಗನೂರ ಜಮೀನಿನಲ್ಲಿ ಇತ್ತೀಚಿಗೆ ನಡೆದ ಎರಡು ಪ್ರತ್ಯೇಕ ಬಿಜೆಪಿ ಮುಖಂಡರ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರಸಂಭಾ ಗ್ರಾಮದಲ್ಲಿ ನಡೆದ ಬಿಜೆಪಿ ಮುಖಂಡ ಮಹಾಂತಪ್ಪ ಆಲೂರೆ ಕೊಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಸರಸಂಭಾ ಗ್ರಾಮದ ಅಜಿತ್ ಕುಮಾರ ಕ್ಷೇತ್ರಿ (29) ಎಂಬಾತನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತನ ಸಹಚರರಾದ ಆಕಾಶ ಕಮಠಿ (29) ಹಾಗೂ ಮಯೂರ್ ಕ್ಷೇತ್ರಿ (25) ಎಂಬಿಬ್ಬರನ್ನು ಮಹಾರಾಷ್ಟ್ರದ ಪೂನಾದಲ್ಲಿ ವಿಶೇಷ ಪೊಲೀಸ್ ತಂಡ ಬಂಧಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ ತಿಳಿಸಿದ್ದಾರೆ.

ಫೆ.29ರಂದು ಮಹಾಂತಪ್ಪ ಜಮೀನಿಗೆ ಹೋಗಿ ಹಾಲು ತೆಗೆದುಕೊಂಡು ಬೈಕ್ನಲ್ಲಿ ಬರುತ್ತಿದ್ದಾಗ ಕಾರ್ನಲ್ಲಿ ಬಂದಿದ್ದ ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದರು. ಮಾದನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಬಂಧನಕ್ಕೆ ಪೊಲೀಸ್ ವಿಶೇಷ ತಂಡ ರಚಿಸಲಾಗಿತ್ತು.
ಸಂಸದ ಉಮೇಶ ಜಾಧವ ಅವರ ಬೆಂಬಲಿಗ, ಬಿಎಸ್ಎನ್ಎಲ್ ಸಲಹಾ ಸಮಿತಿ ಸದಸ್ಯ ಗಿರೀಶ್ಬಾಬು ಚಕ್ರ (31) ಕೊಲೆ ಪ್ರಕರಣದಲ್ಲಿ ಓರ್ವ ಅಪ್ರಾಪ್ತ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಫಜಲಪುರರ ತಾಲೂಕಿನ ಮಾಶಾಳ ಗ್ರಾಮದ ಹಾಗೂ ಸದ್ಯ ಸಾಗನೂರ ಗ್ರಾಮದಲ್ಲಿ ವಾಸವಿರುವ ಸಚೀನ್ ಕಿರಸಾವಳಗಿ (21), ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದ ವಿಶ್ವನಾಥ ಅಲಿಯಾಸ್ ಕುಮ್ಯಾ ಮಂಜಾಳಕರ್ (22), ಪ್ರಜ್ವಲ್ ಅಲಿಯಾಸ್ ಪುಟ್ಯಾ ಭಜಂತ್ರಿ (19) ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಬಂಧಿತರು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಫೆಬ್ರವರಿ 14ರಂದು ಗಿರೀಶ್ಬಾಬು ಚಕ್ರ ಅವರು ಬಿಎಸ್ಎನ್ಎಲ್ ಕಲಬುರಗಿ ವಿಭಾಗದ ಟೆಲಿಫೋನ್ ಅಡ್ವೈಸರಿ ಕಮಿಟಿ ಸದಸ್ಯರಾಗಿ ಸಂಸದ ಉಮೇಶ್ ಜಾದವ್ ಶಿಫಾರಸಿನಂತೆ ನೇಮಕವಾಗಿದ್ದರು. ಈ ಹಿನ್ನೆಲೆಯಲ್ಲಿ ಸನ್ಮಾನ ಹಾಗೂ ಸಂತೋಷ ಕೂಟದ ಹೆಸರಿನಲ್ಲಿ ಗಿರೀಶ್ಬಾಬು ಚಕ್ರ ಅವರನ್ನು ಸಾಗನೂರು ಗ್ರಾಮದ ಜಮೀನಿಗೆ ಕರೆಸಿಕೊಂಡು ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದರು.

ಆರ್.ಅಶೋಕ್ ಸಾಂತ್ವನ: ಕೊಲೆಯಾದ ಇಬ್ಬರು ಬಿಜೆಪಿ ಮುಖಂಡ ಮನೆಗಳಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಸಾಗನೂರ ಹಾಗೂ ಸರಸಂಭಾ ಗ್ರಾಮಕ್ಕೆ ತೆರಳಿ ಮೃತರ ಕುಟುಂಬವನ್ನು ಭೇಟಿಯಾದ ಅಶೋಕ್, "ಎರಡು ಕೊಲೆಯಲ್ಲಿ ಒಂದು ವೈಯಕ್ತಿಕವಾಗಿದ್ದರೆ ಇನ್ನೊಂದು ರಾಜಕೀಯ ಕೊಲೆ ಅನ್ನೋದು ಸ್ಪಷ್ಟವಾಗಿದೆ. ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 26 ಬಿಜೆಪಿ ಕಾರ್ಯಕರ್ತರ ಕೊಲೆ ನಡೆದಿತ್ತು. ಈಗ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಮತ್ತೆ ಅದೇ ಚಾಳಿ ಮುಂದುವರೆಸಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೋರ್ವ ಬಿಜೆಪಿ ಮುಖಂಡನ ಬರ್ಬರ ಕೊಲೆ