ದಾವಣಗೆರೆ: ನಗರದಲ್ಲಿ ಬುಧವಾರ ತಡರಾತ್ರಿಯಿಂದಲೂ ಧಾರಾಕಾರ ಮಳೆ ಸುರಿದಿದ್ದು, ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮ ನಿರಂತರ ವರುಣನ ಆರ್ಭಟ ಜೋರಾಗಿದೆ. ಜನರು ಮನೆಯಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರಿ ಮಳೆಯಿಂದಾಗಿ ನಗರದ ಪಿಸಾಳೆ ಬಡಾವಣೆ, ಪಿಜೆ ಬಡಾವಣೆಯಲ್ಲಿ ಮನೆಗಳು ಜಲಾವೃತವಾಗಿವೆ. ಪಿಸಾಳೆ ಬಡಾವಣೆಯಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ನಿದ್ರೆ ಮಾಡಲಾಗದೆ, ರಾತ್ರಿಯಿಡೀ ನೀರನ್ನು ಹೊರಹಾಕುವುದರಲ್ಲೇ ತೊಡಗಿದ್ದರು. ಮನೆ ಮುಂದೆ ಕೂಡ ಮಳೆ ನೀರು ಸಂಚಾರಕ್ಕೆ ಪರದಾಡುವಂತಾಗಿದೆ. ಮನೆ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ.
ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ, ನೀರು ತೆರವುಗೊಳಿಸಿದ್ದಾರೆ. ಚರಂಡಿಗಳು ತುಂಬಿ ಹರಿದು ತಗ್ಗು ಪ್ರದೇಶಕ್ಕೆ ನೀರು ನುಗ್ಗಿತ್ತು. ಈರುಳ್ಳಿ ಮಾರುಕಟ್ಟೆ, ಭಾರತ್ ಕಾಲೋನಿ ಸೇರಿ ಹಲವೆಡೆ ಜನರಿಗೆ ತೊಂದರೆ ಉಂಟಾಗಿದೆ. ಇದಲ್ಲದೆ, ನಗರದ ಬೇತೂರು ರಸ್ತೆ, ಹಳೇ ದಾವಣಗೆರೆ ಭಾಗದ ವಿವಿಧ ಬಡಾವಣೆಗಳಲ್ಲಿ ಚರಂಡಿ ನೀರು ಹರಿಯುವಿಕೆಗೆ ಅಡಚಣೆಯಾಗಿ, ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.
ಕಾಳಜಿ ಕೇಂದ್ರಕ್ಕೆ ಜನರ ಸ್ಥಳಾಂತರ: ಜಿಲ್ಲೆಯ ಜಗಳೂರು ತಾಲೂಕಿನ ಜಿನಗಿ ಹಳ್ಳ ತುಂಬಿ ಹರಿಯುತ್ತಿದೆ. ಕೆರೆ ಕೋಡಿ ಹರಿದು ಹಿರೇಮಲ್ಲನಹೊಳೆ ಗ್ರಾಮವು ಜಲಾವೃತವಾಗಿದ್ದು, ಜನರಿಗೆ ಸಾಕಷ್ಟು ಸಮಸ್ಯೆ ತಲೆದೋರಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಸ್ಥರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಕಾಳಜಿ ಕೇಂದ್ರದಲ್ಲಿ 40 ಕುಟುಂಬಗಳು ಆಶ್ರಯ ಪಡೆದಿವೆ.
ಇದನ್ನೂ ಓದಿ: ಹಾವೇರಿ: ಭಾರಿ ಮಳೆಗೆ ನೀರಿನಲ್ಲಿ ಕೊಚ್ಚಿಹೋಗಿ 12 ವರ್ಷದ ಬಾಲಕ ಸಾವು