ಸುಬ್ರಹ್ಮಣ್ಯ/ದಕ್ಷಿಣ ಕನ್ನಡ: ಶಿವರಾತ್ರಿ ಆಗಮಿಸುತ್ತಿದ್ದಂತೆ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದ ಈ ಭಾಗದಲ್ಲಿ ಪಾದಯಾತ್ರಿಕರ ಆಗಮನ ಹೆಚ್ಚಾಗಿದ್ದು, ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಅರಣ್ಯ ಇಲಾಖೆ ವಿನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.
ದಾರಿಯುದ್ದಕ್ಕೂ ಪ್ರವಾಸಿಗರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಪ್ಲಾಸ್ಟಿಕ್ ಸಂಗ್ರಹಣಾ ಕೌಂಟರ್ ಟೆಂಟ್ಗಳನ್ನು ತೆರೆಯಲಾಗಿದೆ. ಹಾಗೆಯೇ, ಪ್ಲಾಸ್ಟಿಕ್ನಿಂದ ಕಾಡುಪ್ರಾಣಿಗಳು, ನದಿಮೂಲಗಳಿಗೆ ಉಂಟಾಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡುವ ಸಿಬ್ಬಂದಿಯನ್ನೂ ನೇಮಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಅರಣ್ಯ ಇಲಾಖೆಯ ವಲಯದ ನಾಲ್ಕು ಕಡೆಗಳಲ್ಲಿ, ಬಿಸಲೆ ಎಂಬಲ್ಲಿ ಒಂದು, ಬಿಳಿನೆಲೆಯ ಕೋಟೆಹೊಳೆ ಎಂಬಲ್ಲಿ ಒಂದು, ನೆಟ್ಟಣದಲ್ಲಿ ಒಂದೆಡೆ ಕೌಂಟರ್ ತೆರೆಯಲಾಗಿದೆ. ಅದೇ ರೀತಿ ಪಂಜ ಅರಣ್ಯ ಇಲಾಖೆಯ ಪೆರಿಯಶಾಂತಿ ಎಂಬಲ್ಲಿ ಎರಡು ಕೌಂಟರ್ ಆರಂಭಿಸಲಾಗಿದೆ. ಇದಲ್ಲದೇ, ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸ ಸಂಗ್ರಹಣಾ ತೊಟ್ಟಿಗಳನ್ನು ಇಡಲಾಗಿದೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಸುಳ್ಯ ವಲಯ ಅರಣ್ಯ ಅಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, "ಶಿವರಾತ್ರಿ ನಿಮಿತ್ತ ಇಲಾಖೆಯ ವತಿಯಿಂದ ದೇಗುಲಗಳಿಗೆ ಬರುವ ಪಾದಯಾತ್ರಿಕರು ಎಸೆಯುವ ಕಸದ ಸಂಗ್ರಹಣೆಗಾಗಿ ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಟ್ಟಿದ್ದೆವು. ಅದರಲ್ಲಿ ರಾಶಿರಾಶಿಯಾಗಿ ಪ್ಲಾಸ್ಟಿಕ್ ನೀರಿನ ಬಾಟಲ್ ಮತ್ತು ತ್ಯಾಜ್ಯಗಳು ಸಂಗ್ರಹವಾಗಿದೆ. ನಾವು ಇದನ್ನು ಇಡದೇ ಇರುತ್ತಿದ್ದರೆ ಇವೆಲ್ಲಾ ನದಿಮೂಲಗಳಿಗೆ ಸೇರುತ್ತಿದ್ದವು ಅಥವಾ ಕಾಡುಪ್ರಾಣಿಗಳು ತಿನ್ನುವ ಮೂಲಕ ಅವುಗಳ ಜೀವಕ್ಕೂ ಮಾರಕವಾಗುತ್ತಿತ್ತು. ಇದೀಗ ಅದರ ಮುಂದುವರೆದ ಭಾಗವಾಗಿ ಭಕ್ತರಿಗೆ, ಪಾದಚಾರಿಗಳಿಗೆ ತ್ಯಾಜ್ಯ ಸಂಗ್ರಹಣೆ ಮತ್ತು ಕುಡಿಯುವ ನೀರು ನೀಡುವ ಸಲುವಾಗಿ ಸಿಬ್ಬಂದಿ ನೇಮಕದೊಂದಿಗೆ ಕೌಂಟರ್ಗಳನ್ನು ಆರಂಭಿಸಿದ್ದೇವೆ" ಎಂದು ಹೇಳಿದರು.
"ಪಾದಚಾರಿಗಳು ನಮ್ಮ ಇಲಾಖೆಯ ಈ ಕೌಂಟರ್ಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳನ್ನು ಹಾಕದೇ ಇಲಾಖೆಯೊಂದಿಗೆ ಸಹಕರಿಸಬೇಕು. ಕಾಡುಪ್ರಾಣಿಗಳ ಮತ್ತು ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ" ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಕನಕಗಿರಿಯ ತೋಳ ಧಾಮಕ್ಕೆ ಡಿಸಿ ಭೇಟಿ : ಹುಲ್ಲುಗಾವಲು ಹೆಚ್ಚಿಸಲು ಕ್ರಮ - DC VISITS KANAKAGIRI WOLF SANCTUARY