ಬೆಂಗಳೂರು: ಮನೆಯವರಿಗೆ ಕೊಟ್ನೋ, ಹೆಂಡತಿಗೆ ಕೊಟ್ನೋ, ಮಕ್ಕಳಿಗೆ ಕೊಟ್ನೋ. ಆದರೂ, 6 ಜನ ಹೆಣ್ಣು ಮಕ್ಕಳಿಗೆ ಎಂಪಿ ಟಿಕೆಟ್ ಕೊಟ್ಟಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟಿಕೆಟ್ ಹಂಚಿಕೆಯನ್ನು ಸಮರ್ಥನೆ ಮಾಡಿಕೊಂಡರು. ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾತನಾಡಿದ ಅವರು, ಎರಡು ಹೆಣ್ಣು ಮಕ್ಕಳು, ಎರಡು ಜಡೆ ಸೇರಿದ್ರೆ ಜಗಳ ಖಚಿತ ಅಂತಾರೆ. ಅದನ್ನೆಲ್ಲ ಬಿಟ್ಟು ಕೆಲಸ ಮಾಡಿ. ಒಬ್ಬರ ಬಗ್ಗೆ ಇನ್ನೊಬ್ಬರು ಚಾಡಿ ಹೇಳುವುದು. ಇನ್ನೊಬ್ಬರ ಬಗ್ಗೆ ಚಾರಿತ್ರೆ ವಧೆ ಮಾಡುವ ಕೆಲಸ ಮಾಡಬಾರದು ಎಂದು ತಿಳಿಸಿದರು.
ಸಿ.ಎಂ.ಇಬ್ರಾಹಿಂ ಪುತ್ರ ಕಾಂಗ್ರೆಸ್ ಸೇರ್ಪಡೆ: ಸಿ.ಎಂ.ಇಬ್ರಾಹಿಂ ಪುತ್ರ ಸಿ.ಎಂ.ಫಯಾಜ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಫಯಾಜ್ ಬೀದರ್ನ ಹುಮ್ನಾಬಾದ್ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದರು. ಇದೀಗ ತಂದೆ ಜೆಡಿಎಸ್ನಿಂದ ವಜಾಗೊಂಡಿರುವ ಕಾರಣ ಅವರ ಪುತ್ರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಮಾಜಿ ಸಚಿವ ಆರ್.ಶಂಕರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇನ್ನು ತುಮಕೂರಿನ ಜೆಡಿಎಸ್ ಪಕ್ಷದಿಂದ ಗೋವಿಂದರಾಜು, ಪ್ರೇಮಾ ಮಹಲಿಂಗಪ್ಪ, ತುಮಕೂರು ತಾಲೂಕು ಪಂಚಾಯಿತಿ ಸದಸ್ಯರಾಗಿದ್ದ ಬೋರೇಗೌಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ನೂತನ ಪದಾಧಿಕಾರಿಗಳಿಂದ ಅಧಿಕಾರ ಸ್ವೀಕಾರ: ಕೆಪಿಸಿಸಿ ಪ್ರಚಾರ ಸಮಿತಿ ನೂತನ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್, ಜಿ.ಸಿ ಚಂದ್ರಶೇಖರ್, ವಿನಯ್ ಕುಲಕರ್ಣಿ, ಮಂಜುನಾಥ ಭಂಡಾರಿ, ವಸಂತ ಕುಮಾರ್ ಅವರ ಪದಗ್ರಹಣ ಮಾಡಿದರು.
ಇದೇ ವೇಳೆ ಮಾತನಾಡಿದ ಡಿಸಿಎಂ, ಕಳೆದ ನಾಲ್ಕು ವರ್ಷಗಳಿಂದ ಪಕ್ಷದ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಚಂದ್ರಪ್ಪ ಹಾಗೂ ನಮ್ಮೊಂದಿಗೆ ಇಲ್ಲದ ಧೃವನಾರಾಯಣ ಅವರ ಸಂಘಟನೆಯನ್ನು ನಾವು ಸ್ಮರಿಸಬೇಕು. ಕೋವಿಡ್ ಸಂದರ್ಭದಲ್ಲಿ ಹಾಗೂ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಧೃವನಾರಾಯಣ ಅವರ ತಾಳ್ಮೆ ಹಾಗೂ ಶ್ರಮ ಪ್ರಶಂಸನೀಯ. ಸಲೀಂ ಅಹ್ಮದ್ ಅವರು ಶಿಸ್ತಿನ ಸಿಪಾಯಿಯಂತೆ ಕಾಂಗ್ರೆಸ್ ಪಕ್ಷದ ಸೇವೆ ಮಾಡಿದ್ದಾರೆ. ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಅವರು ಸಮರ್ಥವಾಗಿ ತಮ್ಮ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಇವರು ಈಗ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಸಚಿವ ಎಂ.ಬಿ ಪಾಟೀಲ್ ಅವರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಾನು, ಸಿಎಂ ಸೇರಿದಂತೆ ಅನೇಕರು ಪ್ರಚಾರ ಸಮಿತಿಯಲ್ಲಿ ಕೆಲಸ ಮಾಡಿದ್ದೇವೆ. ನಾವೆಲ್ಲರೂ ವಿದ್ಯಾರ್ಥಿ ನಾಯಕರಾಗಿದ್ದಾಗಲೇ ರಾಜೀವ್ ಗಾಂಧಿ ಅವರು ನಮ್ಮನ್ನು ಗುರುತಿಸಿ ನಮಗೆ ಪಕ್ಷದ ಟಿಕೆಟ್ ನೀಡಿದ್ದರು. ನಾವು ವಿದ್ಯಾರ್ಥಿ ನಾಯಕರಾಗಿದ್ದಾಗ ಎನ್ಎಸ್ಯುಐ ಟಿಕೆಟ್ ನೀಡದಿದ್ದರೂ ಹೇಗೋ ಚುನಾವಣೆ ಮಾಡಿ ಗೆದ್ದುಕೊಂಡು ಬಂದಿದ್ದೇವೆ. ನಿಮ್ಮೆಲ್ಲರ ಸಹಕಾರದಿಂದ ಈ ಮಟ್ಟದವರೆಗೆ ಬಂದಿದ್ದೇವೆ ಎಂದರು.
ಯಾರು ಶ್ರಮಪಡುತ್ತಾರೋ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಯಾರು ಎನ್ಎಸ್ಯುಐ ಹಾಗೂ ಯುವ ಕಾಂಗ್ರೆಸ್ನಲ್ಲಿ ಸದಸ್ಯತ್ವ ಪಡೆಯುತ್ತಾರೋ ಅವರು ಅಷ್ಟು ಸುಲಭವಾಗಿ ಪಕ್ಷವನ್ನು ತೊರೆಯುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಳ್ಳಿ. ಹೀಗಾಗಿ ಈ ಸಂಘಟನೆಗಳ ಸದಸ್ಯತ್ವ ಪಡೆಯುವವರಿಗೆ ದೊಡ್ಡ ಅಡಿಪಾಯ ಸಿಗುತ್ತದೆ. 73, 74ನೇ ತಿದ್ದುಪಡಿ ವೇಳೆ ನಾನು ರಾಜೀವ್ ಗಾಂಧಿ ಅವರನ್ನು ಕೇಳಿದಾಗ, ಇದು ಸ್ಥಳೀಯ ಮಟ್ಟದಲ್ಲಿ ಯುವ ನಾಯಕರನ್ನು ಹುಟ್ಟುಹಾಕಲಿದೆ ಎಂದು ಹೇಳಿದ್ದರು. ನಾಯಕರನ್ನು ಹುಟ್ಟುಹಾಕುವವರೇ ನಿಜವಾದ ನಾಯಕ. ನಿಮ್ಮ ನಮ್ಮ ಮೇಲೆ ಜವಾಬ್ದಾರಿ ಹೆಚ್ಚಾಗಿದೆ ಎಂದರು.
ಕೆಲಸ ಮಾಡದೇ ಇದ್ದರೆ ಬದಲಾವಣೆ: ಪಕ್ಷದ ನೂತನ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು ನಿಷ್ಠೆ, ಪ್ರಾಮಾಣಿಕತೆ ಹಾಗೂ ಜವಾಬ್ದಾರಿ ಪ್ರದರ್ಶಿಸಬೇಕು. ನಿಮಗೆ ಕೊಟ್ಟ ಕೆಲಸವನ್ನು ಸಮರ್ಥವಾಗಿ ನಿಭಾಯಿಸದಿದ್ದರೆ ಚುನಾವಣೆ ನಂತರ ನೀವು ಮಾಜಿಯಾಗುತ್ತೀರಿ ಎಂಬುದು ನಿಮ್ಮ ತಲೆಯಲ್ಲಿ ಇರಲಿ. ನೀವು ಶ್ರಮ ಪಟ್ಟರೆ ಮಾತ್ರ ನಿಮ್ಮ ಜವಾಬ್ದಾರಿ ಮುಂದುವರಿಯುತ್ತದೆ. ಇಲ್ಲದಿದ್ದರೆ ಚುನಾವಣೆ ನಂತರ ಈ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಮಾಡಲಾಗುವುದು. ನೀವು ಅಲ್ಲಿ ಸಹಕಾರ ನೀಡಿ ಕೆಲಸ ಮಾಡಬೇಕೇ ಹೊರತು ಅಲ್ಲಿ ಲೀಡರ್ ಗಿರಿ ತೋರಿಸಬಾರದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಅಧಿಕೃತವಾಗಿ ಬಿಜೆಪಿ ಸೇರಿದ ಸಂಸದೆ ಸುಮಲತಾ ಅಂಬರೀಶ್ - MP Sumalata joined BJP