ಬೆಂಗಳೂರು: ಒಂಟಿ ವೃದ್ಧೆಯನ್ನು ಉಸಿರುಗಟ್ಟಿಸಿ ಕೈ, ಕಾಲು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿ ಶವವನ್ನು ಡ್ರಮ್ನಲ್ಲಿ ತುಂಬಿ ಪರಾರಿಯಾಗಿದ್ದ ಸ್ಥಳೀಯ ನಿವಾಸಿ ದಿನೇಶ್ ಎಂಬಾತನನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಿದಾಗ ಆತ, ತಾನು ಸಾಲ ತೀರಿಸಲು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹತ್ಯೆಗೊಳಗಾದ 70 ವರ್ಷದ ಸುಶೀಲಮ್ಮ ಚಿಕ್ಕಬಳ್ಳಾಪುರ ಮೂಲದವರಾಗಿದ್ದು ಬಸವನಪುರ ವಾರ್ಡ್ನ ನಿಸರ್ಗ ಬಡಾವಣೆಯ ಲೀಸ್ ಮನೆಯೊಂದರಲ್ಲಿ ಕಳೆದ 10 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆರೋಪಿ ದಿನೇಶ್ ಅದೇ ಪ್ರದೇಶದಲ್ಲಿ ಹೆಂಡತಿ, ಮಕ್ಕಳೊಂದಿಗೆ ಸ್ವಂತ ಮನೆಯಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದ. ಖಾಸಗಿ ಶಿಪ್ಪಿಂಗ್ ಕಂಪನಿಯೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಅನ್ಯ ಕಾರಣಕ್ಕಾಗಿ ಕೆಲವು ವರ್ಷಗಳ ಹಿಂದೆ ಕೆಲಸ ತೊರೆದಿದ್ದರಿಂದ ಆತನಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿತ್ತು.
ಅಲ್ಲದೆ, 30 ಲಕ್ಷ ರೂ.ವರೆಗೂ ಸಾಲ ಮಾಡಿಕೊಂಡಿದ್ದ. ಸಾಲಗಾರರು ಹಣಕ್ಕಾಗಿ ಮನೆ ಬಳಿ ಬರುತ್ತಿದ್ದರು. ಈ ಮಧ್ಯೆ ಪರಿಚಯಸ್ಥವಾಗಿದ್ದ ವೃದ್ಧೆ, ಆಸ್ತಿ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಹಣ ಬಂದಿರುವ ಬಗ್ಗೆ ತಿಳಿದುಕೊಂಡು ಸಾಲ ನೀಡುವಂತೆ ಕೇಳಿದ್ದ. ಇದಕ್ಕೆ ವೃದ್ಧೆ ನಿರಾಕರಿಸಿದ್ದರು. ಈ ಮಧ್ಯೆ ಆಕೆ ಧರಿಸಿದ್ದ ಆಭರಣಗಳ ಮೇಲೆ ಕಣ್ಣು ಹಾಕಿದ್ದಾನೆ. ಸೂಕ್ತ ಸಮಯ ನೋಡಿ ದೇವಸ್ಥಾನಕ್ಕೆ ಕರೆದೊಯ್ಯುವುದಾಗಿ ವೃದ್ಧೆಯನ್ನು ಮನೆಗೆ ಕರೆಯಿಸಿಕೊಂಡು ಕುತ್ತಿಗೆ ಹಿಸುಕಿ ಕೈ-ಕಾಲುಗಳನ್ನು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಬಳಿಕ ವೃದ್ಧೆಯ ಮೇಲಿದ್ದ ಚಿನ್ನಾಭರಣ ತೆಗೆದುಕೊಂಡು ಅಡವಿಡಲು ಹೋದಾಗ ಕಿವಿಯೋಲೆ ಹೊರತುಪಡಿಸಿ ಉಳಿದೆಲ್ಲ ಆಭರಣಗಳು ರೋಲ್ಡ್ ಗೋಲ್ಡ್ ಎಂದು ಗೊತ್ತಾಗಿದೆ. ಕಿವಿಯೋಲೆಯನ್ನು ಅಡವಿಟ್ಟು ಅದರಲ್ಲಿ ಡ್ರಮ್ ಖರೀದಿಸಿದ್ದಾನೆ. ಮನೆಯ ಬಳಿ ಓಣಿಯಲ್ಲಿ ಡ್ರಮ್ ಇಟ್ಟು ದೇಹದ ತುಂಡುಗಳನ್ನು ತುಂಬಿ ಪರಾರಿಯಾಗಿದ್ದ. ಶುಕ್ರವಾರ ಈ ಕೃತ್ಯವೆಸಗಿದ್ದು ಎರಡು ದಿನಗಳ ಬಳಿಕ ಅಂದರೆ ನಿನ್ನೆ ಸಂಜೆ ಸ್ಥಳೀಯರಿಗೆ ಅನುಮಾನ ಬಂದು ನೋಡಿದಾಗ ಶವ ಪತ್ತೆಯಾಗಿರುವುದು ಕಂಡುಬಂದಿತ್ತು.
ಎಫ್ಎಸ್ಎಲ್, ಬೆರಳಚ್ಚು ತಂಡಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದವು. ಪೊಲೀಸರು ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ದಿನೇಶ್, ಅನುಮಾನಸ್ಪಾದವಾಗಿ ಓಡಾಡಿರುವುದು ಸೆರೆಯಾಗಿತ್ತು. ಇದೇ ಆಧಾರದ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬರ್ಬರ ಹತ್ಯೆವೆಸಗಿರುವ ಕೃತ್ಯ ಬಾಯ್ಬಿಟ್ಟಿದ್ದಾನೆ. ಪಕ್ಷವೊಂದರ ಕಾರ್ಯಕರ್ತನಾಗಿಯೂ ಆರೋಪಿ ಗುರುತಿಸಿಕೊಂಡಿದ್ದ. ಹೆಚ್ಚಿನ ವಿಚಾರಣೆಗೊಳಪಡಿಸಲು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಡ್ರಮ್ನಲ್ಲಿ ವೃದ್ಧೆ ಶವ ಪತ್ತೆ; ಕೈ - ಕಾಲು ಕತ್ತರಿಸಿ ಬರ್ಬರ ಹತ್ಯೆ