ದಾವಣಗೆರೆ : ಇಂದು ಮಹಾನಗರ ಪಾಲಿಕೆಯ ಮೇಯರ್ ಚಮನ್ ಸಾಬ್ ಪಾಲಿಕೆಯ ಆಯವ್ಯಯ ಮಂಡನೆ ಮಾಡಿದ್ರು. ಆದರೆ ಮಂಡನೆ ಮಾಡಿದ ಆಯವ್ಯಯ ಕೈಪಿಡಿಯಲ್ಲಿ ಬಾಂಗ್ಲಾ ದೇಶದ ವೆಬ್ಸೈಟ್ ಲಿಂಕ್ ಮುದ್ರಣ ಮಾಡಿ ಪಾಲಿಕೆ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ.
ಬಜೆಟ್ ಮಂಡನೆ ಆಗುತ್ತಿದ್ದಂತೆ ಬಿಜೆಪಿ ಪಾಲಿಕೆ ಸದಸ್ಯರು ಬಜೆಟ್ನಲ್ಲಿ ಏನೂ ಇಲ್ಲ ಎಂದು ಗದ್ದಲ, ಕೋಲಾಹಲ ಎಬ್ಬಿಸಿದರು. ಬಳಿಕ ಪಾಲಿಕೆ ಸದಸ್ಯ ಶಿವಾನಂದ್ ಅವರು ಆಯವ್ಯಯ ಕೈಪಿಡಿಯಲ್ಲಿ ಬಾಂಗ್ಲಾ ದೇಶದ ವೆಬ್ಸೈಟ್ ಲಿಂಕ್ ಮುದ್ರಣ ಮಾಡಿ ಎಡವಟ್ಟು ಮಾಡಿದ್ದಾರೆ ಎಂದು ಧ್ವನಿ ಎತ್ತಿದರು. ಇದಕ್ಕೆ ಧ್ವನಿಗೂಡಿಸಿದ ಪಾಲಿಕೆ ಮಾಜಿ ಮೇಯರ್ ಎಸ್. ಟಿ ವೀರೇಶ್ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಬಳಿಕ ಕ್ಷಮೆ ಯಾಚಿಸುವಂತೆ ಧಿಕ್ಕಾರ ಹಾಕಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಮೇಯರ್ ಚಮನ್ಸಾಬ್ ಅವರು ಅಧಿಕಾರಿಗಳ ಕಣ್ತಪ್ಪಿನಿಂದ ಆಗಿರಬಹುದು ಎಂದು ಅಧಿಕಾರಿ ಕಡೆಯಿಂದ ಕ್ಷಮೆ ಕೇಳಿಸಿದರು. ಆಗ ಪಾಲಿಕೆ ಸದಸ್ಯರು ಮುಂದಿನ ಚರ್ಚೆಗೆ ಅನುವು ಮಾಡಿಕೊಟ್ಟರು. ಬಳಿಕ ಮೇಯರ್ ಚಮನ್ ಸಾಬ್ ಅವರು ಇದೇ ವಿಚಾರವಾಗಿ ಸಮಜಾಯಿಷಿ ನೀಡಿದರು.
ಮಹಾನಗರ ಪಾಲಿಕೆ ಬಜೆಟ್ ಮಂಡನೆ : ದಾವಣಗೆರೆ ಮಹಾನಗರ ಪಾಲಿಕೆಯ 2025-26ನೇ ಸಾಲಿನ 516.35 ಲಕ್ಷ ರೂಪಾಯಿ ಉಳಿತಾಯ ಬಜೆಟ್ನ್ನು ಮೇಯರ್ ಕೆ. ಚಮನ್ ಸಾಬ್ ಮಂಡಿಸಿದರು. ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಉರ್ ಬಾನು ಪರವಾಗಿ ಅಂತಿಮ ಬಜೆಟ್ ಮಂಡನೆ ಮಾಡಿದರು.
ಮಹಾನಗರ ಪಾಲಿಕೆಯಲ್ಲಿ 3433.11 ಲಕ್ಷ ರೂಪಾಯಿ ಆರಂಭಿಕ ಶಿಲ್ಕು ಇದ್ದು, ವಾಣಿಜ್ಯ ಮಳಿಗೆಗಳ ಬಾಡಿಗೆ, ಕಟ್ಟಡ ಪರವಾನಗಿ, ಅಭಿವೃದ್ಧಿ ಶಿಲ್ಕು, ಉದ್ದಿಮೆ ಪರವಾನಗಿ, ರಸ್ತೆ ಕಡಿತ ಇತರೆ ಮೂಲಗಳಿಂದ 21056. 45 ಲಕ್ಷ ಒಟ್ಟು ರಾಜಸ್ವ ಜಮೆ, ಮಾನವ ಸಂಪನ್ಮೂಲ, ಹೊರ ಗುತ್ತಿಗೆ, ಇಂಧನ ಮತ್ತು ವಿದ್ಯುತ್ ವೆಚ್ಚ, ಜಮೀನು ಖರೀದಿ, ಕಚೇರಿ ಕಟ್ಟಡಗಳು ಸೇರಿದಂತೆ ಒಟ್ಟು 20291.59 ಲಕ್ಷ ಬಂಡವಾಳ ಪಾವತಿ ಮಾಡಬೇಕಿದೆ. 22782.11 ಅಸಾಮಾನ್ಯ ಪಾವತಿ ನಿರೀಕ್ಷೆ ಇದೆ. ಮಹಾನಗರ ಪಾಲಿಕೆ ಆದಾಯ, ನಿರೀಕ್ಷಿತ ಅನುದಾನದಲ್ಲಿ ಖರ್ಚು ತೆಗೆದರೆ 516.35 ಲಕ್ಷ ರೂಪಾಯಿ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ಅತೀ ಪ್ರಮುಖ ಆದಾಯದ ಮೂಲವಾಗಿದೆ. ರಾಜ್ಯ ಸರ್ಕಾರ ಅನಧಿಕೃತ ಆಸ್ತಿಗಳಿಗೆ ಬಿ ಖಾತೆ ನೀಡುವ ಯೋಜನೆ ತರುತ್ತಿರುವಂತೆ 14 ಸಾವಿರ ಆಸ್ತಿಗಳನ್ನು ಆಸ್ತಿ ತೆರಿಗೆ ಜಾಲಕ್ಕೆ ಒಳಪಡಿಸಲಾಗುವುದು ಎಂದು ಹೇಳಿದರು.
ಪಾಲಿಕೆಯ ಆಯವ್ಯಯದ ಅಂಶಗಳು ಹೀಗಿವೆ : 60.000.00 ಲಕ್ಷ ಆಸ್ತಿ ತೆರಿಗೆ ಸಂಗ್ರಹಣೆಯ ಗುರಿ. 600.00 ಲಕ್ಷಗಳ ಕಂದಾಯ ವಸೂಲಾತಿ ಗುರಿ. ಜಾಹೀರಾತು ಶುಲ್ಕ ವಿಧಿಸಿ, ಅಂದಾಜು 400.00 ಲಕ್ಷ ಆದಾಯ ಸಂಗ್ರಹಣೆಯ ಗುರಿ. ಪ್ರಮುಖ ಸ್ಥಳ. ರಸ್ತೆ, ಸರ್ಕಲ್ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿ 25.00 ಲಕ್ಷಗಳ ಆದಾಯದ ಗುರಿ, ಉದ್ಯಾನವನಗಳಿಗೆ ಪ್ರವೇಶ ಶುಲ್ಕ ವಿಧಿಸಿ ಆರಂಭದಲ್ಲಿ 5 ಲಕ್ಷಗಳ ತನಕ ಆದಾಯ ಸಂಗ್ರಹ ಗುರಿ ಇಟ್ಟುಕೊಂಡಿದೆ.
ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ 100.00 ಲಕ್ಷಗಳ ವೆಚ್ಚದಲ್ಲಿ ಟೆಂಡರ್. ಬೀದಿ ದೀಪಗಳ ಅಭಿವೃದ್ಧಿಗೆ 375 ಲಕ್ಷ ಮೀಸಲು. ಸುಸಜ್ಜಿತವಾದ ಕಸಾಯಿಖಾನೆ ನಿರ್ಮಾಣಕ್ಕೆ 2500.00 ಲಕ್ಷ ಜಾರಿ. ತ್ಯಾಜ್ಯ ವಿಂಗಡಿಸಲು ಬುಟ್ಟಿಗಳ ವಿತರಿಸಲು 25 ಲಕ್ಷ ಕಾಯ್ದಿರಿಸಲಾಗಿದೆ. ಜರ್ಮನ್ ಮಾದರಿಯ ವೃತ್ತ ನಿರ್ಮಿಸಲು 20 ಲಕ್ಷ. ಡಿಜಿಟಲ್ ಗ್ರಂಥಾಲಯ ಹಾಗೂ ವಾಚನಾಲಯ ಸ್ಥಾಪನೆಗೆ 50 ಲಕ್ಷ ಒದಗಿಸಲು ಗ್ರೀನ್ ಸಿಗ್ನಲ್. ಉದ್ಯಾನವನ ಅಭಿವೃದ್ಧಿಗೆ 336.50 ಲಕ್ಷಗಳ ಅನುದಾನ ಕಾಯ್ದಿರಿಸಲಾಗಿದೆ. ಜಲಸಾಹಸ ಕ್ರೀಡೆ ಹಾಗೂ ದೋಣಿವಿಹಾರ ಕೇಂದ್ರ ಸ್ಥಾಪನೆಗಾಗಿ 100.00 ಲಕ್ಷ ಅನುದಾನ. ಗರಡಿ ಮನೆಗಳ ನಿರ್ಮಾಣ, ನವೀಕರಣಕ್ಕೆ 50 ಲಕ್ಷ ಮೀಸಲು.
ಬಿಜೆಪಿ ಸದಸ್ಯರಿಂದ ಪಾಲಿಕೆ ಸಭಾಂಗಣದಲ್ಲಿ ಚೆಂಬು ಪ್ರದರ್ಶನ : ಬಿಜೆಪಿ ಸದಸ್ಯರಿಂದ ಪಾಲಿಕೆ ಸಭಾಂಗಣದಲ್ಲಿ ಚೆಂಬು ಪ್ರದರ್ಶನ ಮಾಡಿದರು. ಈ ಬಾರಿ ಬಜೆಟ್ ದಾವಣಗೆರೆ ಜನರಿಗೆ ಚೆಂಬು ಎಂದು ವ್ಯಂಗ್ಯ ಮಾಡಿದರು. ಆಶ್ರಮ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ಆಗಿದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರು.
ಪ್ರತಿ ಸೈಟ್ಗೆ ಎರಡು ಲಕ್ಷದಂತೆ ನಾಲ್ಕು ನೂರು ಸೈಟ್ಗಳಿಗೆ ಹಣ ಪಡೆಯಲಾಗಿದೆ ಎಂಬ ಆಡಿಯೋ ಮಹಾನಗರ ಪಾಲಿಕೆ ಬಜೆಟ್ ಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು. ಇದೇ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ಪರಸ್ಪರ ವಾಗ್ದಾಳಿ ಕೂಡ ನಡೆಯಿತು. ಬಿಜೆಪಿಯವರು ಹಣ ಪಡೆದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯ ಎ. ನಾಗರಾಜ್ ಹಣ ಕೊಟ್ಟವರ ಆಡಿಯೋ ಕೇಳಿಸಿದ್ದೇ ತಡ ಗದ್ದಲಕ್ಕೆ ಕಾರಣವಾಯಿತು. ಮನೆ ಹೆಸರಿನಲ್ಲಿ ಪ್ರತಿಯೊಬ್ಬರಿಂದ ಬಿಜೆಪಿಯವರು ಹಣ ವಸೂಲಿ ಮಾಡಿದ್ದಾರೆ, ಇದೇ ಕಾರಣಕ್ಕೆ ಹಕ್ಕು ಪತ್ರ ನೀಡಲಾಗುತ್ತಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಧ್ವನಿ ಎತ್ತಿದರು.