ETV Bharat / state

ಆನೇಕಲ್ ಗುಮ್ಮಳಾಪುರ ಜಾತ್ರೆ:​ ವರ್ಷಕ್ಕೊಮ್ಮೆ ತೆರೆಯುವ ಗುಂಡು ಗೌರಮ್ಮ ಗುಡಿಯಲ್ಲಿ ಗೌರಿ - ಗಣೇಶನಿಗೆ ಜಲಾಧಿವಾಸ

ತಮಿಳುನಾಡು - ಕರ್ನಾಟಕದ ಗಡಿ ಭಾಗ ಗುಮ್ಮಳಾಪುರದಲ್ಲಿ ಪೌರಾಣಿಕ ಕಥೆಯುಳ್ಳ ಗುಂಡು ಗೌರಮ್ಮ ಗುಡಿಯಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯಿತು.

author img

By ETV Bharat Karnataka Team

Published : 4 hours ago

ಆನೇಕಲ್ ಗುಮ್ಮಳಾಪುರ ಜಾತ್ರೆ: ಗೌರಿ-ಗಣೇಶನನ್ನು ಶಿವನ ಕೈಲಾಸಕ್ಕೆ ಕಳುಹಿಸಿ ಕೊಟ್ಟ ಭಕ್ತರು.
ಆನೇಕಲ್ ಗುಮ್ಮಳಾಪುರ ಜಾತ್ರೆ: ಗೌರಿ-ಗಣೇಶನನ್ನು ಶಿವನ ಕೈಲಾಸಕ್ಕೆ ಕಳುಹಿಸಿ ಕೊಟ್ಟ ಭಕ್ತರು. (Etv Bharat)

ಆನೇಕಲ್​: ಬೆಂಗಳೂರಿನ ಹೊರವಲಯಕ್ಕೆ ಅಂಟಿಕೊಂಡಿರುವ ತಮಿಳುನಾಡಿನ ಗುಮ್ಮಳಾಪುರವು ಶಿವನ ಪತ್ನಿ ಗೌರಿಯ ತವರೂರೆಂದೇ ಪ್ರಖ್ಯಾತಿ. ಶುಕ್ರವಾರ ಗೌರಿ-ಗಣೇಶನನ್ನು ಶೆಟ್ಟರ ಕೆರೆಯಲ್ಲಿ ಜಲಾಧಿವಾಸ ಮಾಡುವ ಮೂಲಕ ಶಿವನ ಕೈಲಾಸಕ್ಕೆ ಕಳಿಸಿಕೊಡುವ ಗುಮ್ಮಳಾಪುರ ಜಾತ್ರೆ ನಡೆಯಿತು.

ಎತ್ತರದ ಬಿದುರಿನ ಎರಡು ತೇರುಗಳಲ್ಲಿ ಒಂದರಲ್ಲಿ ಗಣೇಶ ಮತ್ತೊಂದರಲ್ಲಿ ಗೌರಿಯನ್ನು ಕುಳ್ಳಿರಿಸಿ ಹತ್ತಾರು ಯುವಕರು ಹುರುಪಿನಿಂದ ಗೌರಿ ಗುಡಿ‌ಯಿಂದ ಶೆಟ್ಟರ ಕೆರೆಗೆ ಹೊತ್ತೊಯ್ಯುವುದನ್ನು ನೋಡುವುದೇ ಕಣ್ಣಿಗೆ ಆನಂದ. ವರ್ಷಕ್ಕೊಮ್ಮೆ ತೆರೆಯುವ ಈ ಗುಡಿಯು ಒಂದು ತಿಂಗಳವರೆಗೆ ತೆರೆದಿರುತ್ತದೆ. ಆ ಒಂದು ತಿಂಗಳಲ್ಲಿ ಗೌರಿಗೆ ಮರುಳು ತುಂಬಿ ತಮ್ಮ ಹರಕೆಗಳನ್ನು ತೀರಿಸಿಕೊಳ್ಳುವ ಮುತ್ತೈದೆಯರು ತಿಂಗಳ ಕೊನೆವರೆಗೆ ತವರಲ್ಲೆ ಉಳಿಯುವ ಪರಿಪಾಠ ಸುತ್ತಲ ಗ್ರಾಮಸ್ಥರಲ್ಲಿದೆ.

ತಮಿಳುನಾಡು - ಕರ್ನಾಟಕದ ಗಡಿ ಭಾಗವನ್ನು ಹಂಚಿಕೊಂಡಿರುವ ಗುಮ್ಮಳಾಪುರದಲ್ಲಿ ಕನ್ನಡವೇ ಆಧ್ಯ ಭಾಷೆಯಾಗಿ ಮಾತನಾಡುವ ಕನ್ನಡಿಗರಿದ್ದಾರೆ. ಒಂದು ಕಾಲದಲ್ಲಿ ಗುಮ್ಮಳಾಪುರವೂ ಕನ್ನಡ ನೆಲವಾಗಿತ್ತು ಎನ್ನುವುದನ್ನು ಇದರಿಂದ ಅರಿಯಬಹುದು.

ಜಾತ್ರೆಯ ಪೌರಾಣಿಕ ಹಿನ್ನಲೆ: ಕಲಿಯುಗ ಆರಂಭಕ್ಕೂ ಮುನ್ನ ಇದೇ ಗುಮ್ಮಳಾಪುರದ ಕುರಿಗಾಹಿ ಹುಡುಗನೊಬ್ಬ ತನಗೆ ಅಕ್ಕ ಇಲ್ಲವೆಂದು ನೊಂದು ಕಾಡಿಗೆ ಹೊರಟು ಇಲ್ಲದ ಅಕ್ಕನನ್ನು ಹುಡುಕ ಹೊರಡುತ್ತಾನಂತೆ. ಎಷ್ಟೂ ಹುಡುಕಿದರೂ ಸಿಗದೆ ನಿರಾಸೆಯಾಗಿ ಒಂದು ಬಂಡೆಯ ಮೇಲೆ ಹತ್ತಿ ಕೆಳಗೆ ಹಾರಿ ಆತ್ಮಹತ್ಯೆಯ ತಯಾರಿಯಲ್ಲಿರುತ್ತಾನೆ. ಅತ್ತ ಶಿವ ಪಾರ್ವತಿ ಲೋಕಸಂಚಾರ ಹೊರಡುವ ಸಮಯದಲ್ಲಿ ಅಕ್ಕ-ಅಕ್ಕ ಎಂಬ ಆರ್ತನಾದ ಕೇಳಿದರಂತೆ.

ಬಂಡೆಯಿಂದ ಆ ಹುಡುಗ ದುಮುಕುತ್ತಾನೆ. ಇನ್ನೇನು ಕೆಳಗೆ ಬೀಳುವಷ್ಟರಲ್ಲಿ ಪಾರ್ವತಿ ದೇವಿ ಸೆರಗಿನಿಂದ ಹುಡುಗನನ್ನು ರಕ್ಷಿಸಿದರಂತೆ. ಆಗಲೇ ಕಣ್ಣು ಬಿಟ್ಟು ಪಾರ್ವತಿಯನ್ನು ನೋಡಿದ ಹುಡುಗ 'ನಮ್ಮ ಊರಿಗೆ ನನ್ನ ಅಕ್ಕನಾಗಿ ಬರುವಂತೆ' ಕೋರುತ್ತಾನೆ. ಈ ಬೆನ್ನಲ್ಲೇ ಪಾರ್ವತಿ ಗುಮ್ಮಳಾಪುರದ ಮಠಕ್ಕೆ ಆಗಮಿಸುತ್ತಾಳೆ. ಆಗಮಿಸಿದ ದಿನವೇ ಗುಮ್ಮಳಾಪುರ ಗುಂಡು ಗೌರಮ್ಮ ಜಾತ್ರೆಗೆ ಬುನಾದಿಯಾಗಿದೆ ಎಂಬ ನಂಬಿಕೆ ಜನರಲ್ಲಿ ಗಾಢವಾಗಿದೆ.

ಇನ್ನು ಐತಿಹಾಸಿಕವಾಗಿ ಗುಮ್ಮಳಾಪುರದ ಬಗ್ಗೆ ಇರುವ ಕುರುಹುಗಳಲ್ಲಿ ಶೂನ್ಯ ಸಂಪಾದನೆ ರಚನೆಯಾದ ಸ್ಥಳವಿದೆ ಎಂದು ನಂಬಲಾಗಿದೆ. ಹೀಗಾಗಿ ಶೈವ ಶರಣ ಪರಂಪರೆ ಅವಸಾನ ಕಂಡ ಅವಧಿಯಲ್ಲಿ ಇಲ್ಲೇ ಅಂತಿಮವಾಗಿ ನೆಲೆಯೂರಿದ್ದು ಎಂದು ಪ್ರತೀತಿಯಿದೆ.

ಈ ವರ್ಷದ ಗುಂಡು ಗೌರಮ್ಮನ ಜಾತ್ರೆ ಶೆಟ್ಟರ ಕೆರೆಯಲ್ಲಿ ಬೇಗನೆ ಮಾಡುವ ಮುಖಾಂತರ ಗೌರಿ ಗುಡಿಗೆ ಬೀಗ ಬಿದ್ದಿದೆ. ಮತ್ತೊಮ್ಮೆ ಗೌರಿ ಜಾತ್ರೆಗಾಗಿ ಮುಂದಿನ ವರ್ಷಕ್ಕಾಗಿ ಕಾಯಬೇಕಿದೆ.

ಇದನ್ನೂ ಓದಿ: ಬಾಗಲಕೋಟೆಯ ಜಗದಾಂಬ ದೇವಿಗೆ 'ಛಪ್ಪನ್ ಭೋಗ' ನೈವೇದ್ಯ: ಏನಿದರ ವಿಶೇಷ?

ಆನೇಕಲ್​: ಬೆಂಗಳೂರಿನ ಹೊರವಲಯಕ್ಕೆ ಅಂಟಿಕೊಂಡಿರುವ ತಮಿಳುನಾಡಿನ ಗುಮ್ಮಳಾಪುರವು ಶಿವನ ಪತ್ನಿ ಗೌರಿಯ ತವರೂರೆಂದೇ ಪ್ರಖ್ಯಾತಿ. ಶುಕ್ರವಾರ ಗೌರಿ-ಗಣೇಶನನ್ನು ಶೆಟ್ಟರ ಕೆರೆಯಲ್ಲಿ ಜಲಾಧಿವಾಸ ಮಾಡುವ ಮೂಲಕ ಶಿವನ ಕೈಲಾಸಕ್ಕೆ ಕಳಿಸಿಕೊಡುವ ಗುಮ್ಮಳಾಪುರ ಜಾತ್ರೆ ನಡೆಯಿತು.

ಎತ್ತರದ ಬಿದುರಿನ ಎರಡು ತೇರುಗಳಲ್ಲಿ ಒಂದರಲ್ಲಿ ಗಣೇಶ ಮತ್ತೊಂದರಲ್ಲಿ ಗೌರಿಯನ್ನು ಕುಳ್ಳಿರಿಸಿ ಹತ್ತಾರು ಯುವಕರು ಹುರುಪಿನಿಂದ ಗೌರಿ ಗುಡಿ‌ಯಿಂದ ಶೆಟ್ಟರ ಕೆರೆಗೆ ಹೊತ್ತೊಯ್ಯುವುದನ್ನು ನೋಡುವುದೇ ಕಣ್ಣಿಗೆ ಆನಂದ. ವರ್ಷಕ್ಕೊಮ್ಮೆ ತೆರೆಯುವ ಈ ಗುಡಿಯು ಒಂದು ತಿಂಗಳವರೆಗೆ ತೆರೆದಿರುತ್ತದೆ. ಆ ಒಂದು ತಿಂಗಳಲ್ಲಿ ಗೌರಿಗೆ ಮರುಳು ತುಂಬಿ ತಮ್ಮ ಹರಕೆಗಳನ್ನು ತೀರಿಸಿಕೊಳ್ಳುವ ಮುತ್ತೈದೆಯರು ತಿಂಗಳ ಕೊನೆವರೆಗೆ ತವರಲ್ಲೆ ಉಳಿಯುವ ಪರಿಪಾಠ ಸುತ್ತಲ ಗ್ರಾಮಸ್ಥರಲ್ಲಿದೆ.

ತಮಿಳುನಾಡು - ಕರ್ನಾಟಕದ ಗಡಿ ಭಾಗವನ್ನು ಹಂಚಿಕೊಂಡಿರುವ ಗುಮ್ಮಳಾಪುರದಲ್ಲಿ ಕನ್ನಡವೇ ಆಧ್ಯ ಭಾಷೆಯಾಗಿ ಮಾತನಾಡುವ ಕನ್ನಡಿಗರಿದ್ದಾರೆ. ಒಂದು ಕಾಲದಲ್ಲಿ ಗುಮ್ಮಳಾಪುರವೂ ಕನ್ನಡ ನೆಲವಾಗಿತ್ತು ಎನ್ನುವುದನ್ನು ಇದರಿಂದ ಅರಿಯಬಹುದು.

ಜಾತ್ರೆಯ ಪೌರಾಣಿಕ ಹಿನ್ನಲೆ: ಕಲಿಯುಗ ಆರಂಭಕ್ಕೂ ಮುನ್ನ ಇದೇ ಗುಮ್ಮಳಾಪುರದ ಕುರಿಗಾಹಿ ಹುಡುಗನೊಬ್ಬ ತನಗೆ ಅಕ್ಕ ಇಲ್ಲವೆಂದು ನೊಂದು ಕಾಡಿಗೆ ಹೊರಟು ಇಲ್ಲದ ಅಕ್ಕನನ್ನು ಹುಡುಕ ಹೊರಡುತ್ತಾನಂತೆ. ಎಷ್ಟೂ ಹುಡುಕಿದರೂ ಸಿಗದೆ ನಿರಾಸೆಯಾಗಿ ಒಂದು ಬಂಡೆಯ ಮೇಲೆ ಹತ್ತಿ ಕೆಳಗೆ ಹಾರಿ ಆತ್ಮಹತ್ಯೆಯ ತಯಾರಿಯಲ್ಲಿರುತ್ತಾನೆ. ಅತ್ತ ಶಿವ ಪಾರ್ವತಿ ಲೋಕಸಂಚಾರ ಹೊರಡುವ ಸಮಯದಲ್ಲಿ ಅಕ್ಕ-ಅಕ್ಕ ಎಂಬ ಆರ್ತನಾದ ಕೇಳಿದರಂತೆ.

ಬಂಡೆಯಿಂದ ಆ ಹುಡುಗ ದುಮುಕುತ್ತಾನೆ. ಇನ್ನೇನು ಕೆಳಗೆ ಬೀಳುವಷ್ಟರಲ್ಲಿ ಪಾರ್ವತಿ ದೇವಿ ಸೆರಗಿನಿಂದ ಹುಡುಗನನ್ನು ರಕ್ಷಿಸಿದರಂತೆ. ಆಗಲೇ ಕಣ್ಣು ಬಿಟ್ಟು ಪಾರ್ವತಿಯನ್ನು ನೋಡಿದ ಹುಡುಗ 'ನಮ್ಮ ಊರಿಗೆ ನನ್ನ ಅಕ್ಕನಾಗಿ ಬರುವಂತೆ' ಕೋರುತ್ತಾನೆ. ಈ ಬೆನ್ನಲ್ಲೇ ಪಾರ್ವತಿ ಗುಮ್ಮಳಾಪುರದ ಮಠಕ್ಕೆ ಆಗಮಿಸುತ್ತಾಳೆ. ಆಗಮಿಸಿದ ದಿನವೇ ಗುಮ್ಮಳಾಪುರ ಗುಂಡು ಗೌರಮ್ಮ ಜಾತ್ರೆಗೆ ಬುನಾದಿಯಾಗಿದೆ ಎಂಬ ನಂಬಿಕೆ ಜನರಲ್ಲಿ ಗಾಢವಾಗಿದೆ.

ಇನ್ನು ಐತಿಹಾಸಿಕವಾಗಿ ಗುಮ್ಮಳಾಪುರದ ಬಗ್ಗೆ ಇರುವ ಕುರುಹುಗಳಲ್ಲಿ ಶೂನ್ಯ ಸಂಪಾದನೆ ರಚನೆಯಾದ ಸ್ಥಳವಿದೆ ಎಂದು ನಂಬಲಾಗಿದೆ. ಹೀಗಾಗಿ ಶೈವ ಶರಣ ಪರಂಪರೆ ಅವಸಾನ ಕಂಡ ಅವಧಿಯಲ್ಲಿ ಇಲ್ಲೇ ಅಂತಿಮವಾಗಿ ನೆಲೆಯೂರಿದ್ದು ಎಂದು ಪ್ರತೀತಿಯಿದೆ.

ಈ ವರ್ಷದ ಗುಂಡು ಗೌರಮ್ಮನ ಜಾತ್ರೆ ಶೆಟ್ಟರ ಕೆರೆಯಲ್ಲಿ ಬೇಗನೆ ಮಾಡುವ ಮುಖಾಂತರ ಗೌರಿ ಗುಡಿಗೆ ಬೀಗ ಬಿದ್ದಿದೆ. ಮತ್ತೊಮ್ಮೆ ಗೌರಿ ಜಾತ್ರೆಗಾಗಿ ಮುಂದಿನ ವರ್ಷಕ್ಕಾಗಿ ಕಾಯಬೇಕಿದೆ.

ಇದನ್ನೂ ಓದಿ: ಬಾಗಲಕೋಟೆಯ ಜಗದಾಂಬ ದೇವಿಗೆ 'ಛಪ್ಪನ್ ಭೋಗ' ನೈವೇದ್ಯ: ಏನಿದರ ವಿಶೇಷ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.