ಮಂಗಳೂರು: 'ವಿಧಾನಸೌಧದಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಶೀಘ್ರದಲ್ಲಿ ನಡೆಯಲಿದೆ' ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ.
ಈ ಕುರಿತು ಇಂದು ಮಂಗಳೂರಿನಲ್ಲಿ ಮಾತನಾಡಿದ ಅವರು, "ವಿಧಾನಸೌಧ ಬಳಿ ಹಿಂದಿನಿಂದಲೂ ನಾಯಿಗಳ ಹಾವಳಿ ಇದೆ. ವಿಧಾನಸೌಧ ಬಳಿ ಇರುವ ನಾಯಿಗಳ ಬಗ್ಗೆ ಸಾರ್ವಜನಿಕರದು ಭಿನ್ನ ಅಭಿಪ್ರಾಯಗಳಿವೆ. ಕೆಲವರು ನಾಯಿಯಿಂದ ಯಾವುದೇ ಸಮಸ್ಯೆ ಇಲ್ಲವೆಂದರೆ, ಇನ್ನೂ ಕೆಲವರು ನಾಯಿಗಳಿಂದ ಸಮಸ್ಯೆ ಆಗುತ್ತದೆ ಎನ್ನುತ್ತಾರೆ. ಬೆಳಗಿನ ಸಮಯದಲ್ಲಿ ನಾಯಿಗಳು ವಾಕಿಂಗ್ ಬರುವವರಿಗೂ ತೊಂದರೆ ಕೊಡುತ್ತವೆ ಎಂಬ ಅಭಿಪ್ರಾಯವಿದೆ. ನಾಯಿಗಳು ಇಲ್ಲಿಯೇ ಬೀಡು ಬಿಟ್ಟಿದ್ದು, ಇವುಗಳ ಹಾವಳಿಯನ್ನು ತಡೆಯಲು ಮುಂದಾಗಬೇಕಾಗಿದೆ" ಎಂದರು.
"ಈ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರದಲ್ಲಿ ಸಭೆ ನಡೆಸಲಿದ್ದಾರೆ. ವಿಧಾನಸಭೆಯ ಚೀಫ್ ಸೆಕ್ರೆಟರಿ, ಪ್ರಾಣಿ ದಯಾ ಸಂಘದ ಸದಸ್ಯರು ಈ ಸಭೆಯಲ್ಲಿ ಇರಲಿದ್ದಾರೆ. ಈ ಸಭೆಯಲ್ಲಿ ವಿಧಾನಸೌಧದ ಬಳಿ ಇರುವ ನಾಯಿಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು" ಎಂದು ಸ್ಪೀಕರ್ ತಿಳಿಸಿದರು.
ವಿಧಾನಸೌಧಕ್ಕೆ ಶಾಶ್ವತ ಲೈಟಿಂಗ್ ವ್ಯವಸ್ಥೆ : ವಿಧಾನಸೌಧಕ್ಕೆ ಶಾಶ್ವತ ಲೈಟಿಂಗ್ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಇದೀಗ ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಮುಂತಾದ ಸಂದರ್ಭದಲ್ಲಿ ತಾತ್ಕಾಲಿಕ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ತಾತ್ಕಾಲಿಕ ವ್ಯವಸ್ಥೆಗಾಗಿ ಲಕ್ಷಾಂತರ ರೂ. ಖರ್ಚಾಗುತ್ತಿತ್ತು. ಇದೀಗ ಶಾಶ್ವತ ವ್ಯವಸ್ಥೆ ಮಾಡಿ, ಅದನ್ನು ನಿರ್ವಹಣೆಗೆ ಕೊಡಲು ನಿರ್ಧರಿಸಲಾಗಿದೆ. ಮುಂದೆ ಯಾವುದೇ ವಿಶೇಷ ಸಂದರ್ಭದಲ್ಲಿ ಮತ್ತು ಶನಿವಾರ, ಆದಿತ್ಯವಾರ ಸಂಜೆಯ ಬಳಿಕ ಲೈಟಿಂಗ್ ಮೂಲಕ ವಿಧಾನಸೌಧವನ್ನು ಆಕರ್ಷಣೆಗೊಳಿಸುವ ಪ್ರಯತ್ನ ಮಾಡಲಾಗುವುದು" ಎಂದು ಹೇಳಿದರು.
ಇರುವ ಸ್ಥಾನದಲ್ಲಿ ತೃಪ್ತಿ : ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರಿಂಗಾನ ಸಭೆಯಲ್ಲಿ ಖಾದರ್ ಅವರಿಗೆ ಸ್ಪೀಕರ್ ಸ್ಥಾನ ಇಷ್ಟವಿರಲಿಲ್ಲ ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ನಾನು ಎಲ್ಲಾ ಸ್ಥಾನದಲ್ಲಿ ತೃಪ್ತಿ ಪಡುವೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ತೃಪ್ತಿ ಪಡುವೆ. ನಾನು ಈಗ ಸ್ಪೀಕರ್. ನನಗೆ ನಾನೇ ಕಮಾಂಡ್" ಎಂದರು.
ಫೆ. 27 ರಿಂದ ವಿಧಾನಸೌಧದಲ್ಲಿ ಬುಕ್ ಫೆಸ್ಟಿವಲ್, ಲಿಟ್ ಫೆಸ್ಟಿವಲ್ : "ವಿಧಾನಸೌಧದಲ್ಲಿ ಮೊದಲ ಬಾರಿಗೆ ಬುಕ್ ಫೆಸ್ಟಿವಲ್, ಲಿಟ್ ಫೆಸ್ಟಿವಲ್ ಮಾಡಲು ಚಿಂತಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಫೆಬ್ರವರಿ 27 ರಿಂದ ಮಾರ್ಚ್ 3ರ ವರೆಗೆ ವಿಧಾನಸೌಧದ ಆವರಣದಲ್ಲಿ ಬುಕ್ ಫೆಸ್ಟಿವಲ್, ಲಿಟ್ ಫೆಸ್ಟಿವಲ್ ಮತ್ತು ಫುಡ್ ಫೆಸ್ಟಿವಲ್ ನಡೆಸಲಾಗುವುದು".
"ಸುಮಾರು 150 ಖಾಸಗಿ, ಸರ್ಕಾರಿ ಸಂಸ್ಥೆಗಳ ಬುಕ್ ಪ್ರದರ್ಶನ ವ್ಯವಸ್ಥೆ ಮಾಲಾಗುವುದು. ಸಾಹಿತಿಗಳನ್ನು ಕರೆಸಿ ಚರ್ಚೆಗಳನ್ನು ನಡೆಸಲಾಗುವುದು ಮತ್ತು ಇದನ್ನು ನೋಡಲು ಬರುವ ಜನರಿಗೆ ಫುಡ್ ಫೆಸ್ಟಿವಲ್ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಓರ್ವ ಸಾಹಿತಿಗೆ ಪ್ರಶಸ್ತಿಯನ್ನು ನೀಡಲಾಗುವುದು. ಇದು ಮುಂದೆ ಪ್ರತಿ ವರ್ಷ ನಡೆಯುವಂತೆ ವ್ಯವಸ್ಥೆ ಮಾಡಲಾಗುವುದು".
"ಈ ಕಾರ್ಯಕ್ರಮಕ್ಕೆ ಲೋಗೋ ಮತ್ತು ಹೆಸರು ಸೂಚಿಸಿದವರಿಗೆ ಪ್ರಶಸ್ತಿ ನೀಡಲಾಗುವುದು. ಇದಕ್ಕಾಗಿ ಸಾರ್ವಜನಿಕರು secy_kla_kar@nic.in ಅಥವಾ 9448108798 ವಾಟ್ಸಪ್ ನಂಬರ್ಗೆ ಹೆಸರು, ಲೋಗೋ ಕಳುಹಿಸುವಂತೆ ವಿನಂತಿಸಲಾಗಿದೆ. ಈ ಬುಕ್ ಸ್ಟಾಲ್ನಿಂದ ಎಲ್ಲ ಶಾಸಕರಿಗೆ 3 ಲಕ್ಷ ರೂ. ವರೆಗೆ ಪುಸ್ತಕ ಖರೀದಿಸಲು, ಶಾಸಕ ನಿಧಿಯನ್ನು ಬಳಸಲು ಅವಕಾಶ ಇದೆ. ಈ ಅನುದಾನದಿಂದ ಅಗತ್ಯ ಇರುವ ಪುಸ್ತಕ ಖರೀದಿಸಿ ಶಾಸಕರು ತಮ್ಮ ಕ್ಷೇತ್ರದ ಲೈಬ್ರೆರಿಗೆ ನೀಡಬಹುದಾಗಿದೆ" ಎಂದರು.
ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಎಲೆಕ್ಟ್ರಿಕ್ ಬಸ್ : 200 ಬಸ್ಗಳಿಗೆ ಡಿಪಿಆರ್ ಸಲ್ಲಿಕೆ