ಶಿವಮೊಗ್ಗ : ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿದ್ದ 17 ವರ್ಷದ ವಿಜಯ ಎಂಬ ಹೆಸರಿನ ಹುಲಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ ಎಂದು ತಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಸಿಇಒ ಅಮರಾಕ್ಷರ ಅವರು ತಿಳಿಸಿದ್ದಾರೆ.
ಇದೇ ಸಫಾರಿಯಲ್ಲಿ ಜನಿಸಿದ್ದ ವಿಜಯ ಹುಲಿಯು ವನ್ಯಧಾಮದ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಆದರೆ, ಕಳೆದೊಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಮಂಗಳವಾರ (ಫೆ.25) ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯ ಹುಲಿ ನಿಧನದಿಂದ ಹುಲಿ-ಸಿಂಹಧಾಮಕ್ಕೆ ಭಾರಿ ನಷ್ಟ ಉಂಟಾಗಿದೆ. ವಿಜಯ ಹುಲಿ ಇಲ್ಲಿನ ಸಿಬ್ಬಂದಿಗೆ, ಪ್ರವಾಸಿಗರಿಗೆ ಹಾಗೂ ಶೈಕ್ಷಣಿಕ ಮತ್ತು ಮನರಂಜನಾ ಕೇಂದ್ರವಾಗಿತ್ತು. ಸರ್ಕಾರದ ನಿರ್ದೇಶನ ಹಾಗೂ ವನ್ಯಜೀವಿ ಕಾಯ್ದೆಯ ಪ್ರಕಾರವೇ ಮೃತ ಹುಲಿಯ ಅಂತಿಮ ಸಂಸ್ಕಾರ ಮಾಡಲಾಗಿದೆ ಎಂದು ವನ್ಯಧಾಮದ ಸಿಇಒ ಅಮರಾಕ್ಷರ ಇಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾಲಿ ಹುಲಿ-ಸಿಂಹಧಾಮದಲ್ಲಿ ನಾಲ್ಕು ಹೆಣ್ಣು ಹುಲಿಗಳಿವೆ : ವಿಜಯ ಗಂಡು ಹುಲಿಯ ಸಾವಿನಿಂದ ಸಫಾರಿಯಲ್ಲಿ ನಾಲ್ಕು ಹುಲಿಗಳು ಉಳಿದುಕೊಂಡಿವೆ. 17 ವರ್ಷದ ದರ್ಶಿನಿ, 16 ವರ್ಷದ ಸೀತಾ, 12 ವರ್ಷದ ಪೂರ್ಣಿಮಾ ಹಾಗೂ ನಿವೇದಿತಾ ಉಳಿದುಕೊಂಡಿವೆ.
ಇದನ್ನೂ ಓದಿ: ಶಿವಮೊಗ್ಗ: ಅಂಬ್ಲಿಗೊಳ ಡ್ಯಾಂ ಹಿನ್ನೀರಿನಲ್ಲಿ ಹುಲಿ ಕಳೇಬರ ಪತ್ತೆ: ತನಿಖೆಗೆ ಅರಣ್ಯ ಸಚಿವರ ಆದೇಶ - TIGER CARCASS FOUND
ಇತ್ತೀಚೆಗೆಷ್ಟೇ ಜಿಲ್ಲೆಯ ಭೈರಾಪುರ ಗ್ರಾಮದ ಬಳಿಯ ಅಂಬ್ಲಿಗೊಳ ಜಲಾಶಯದ ಹಿನ್ನೀರಿನಲ್ಲಿ ಹುಲಿಯೊಂದರ ಕಳೇಬರ ಪತ್ತೆಯಾಗಿತ್ತು. ಹುಲಿಯ ಮೃತದೇಹ ಕಂಡುಬರುತ್ತಿದ್ದಂತೆ ಗ್ರಾಮಸ್ಥರು ಅಂಬ್ಲಿಗೋಳ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹುಲಿಯ ಕಳೇಬರವನ್ನು ಮೇಲಕ್ಕೆ ತಂದು, ಸಾಗರದ ವನ್ಯಜೀವಿ ವಿಭಾಗದ ಡಿಎಫ್ಒ ಮೋಹನ್ ಅವರಿಗೆ ವಿಷಯ ತಿಳಿಸಿದ್ದರು. ಬಳಿಕ, ಸ್ಥಳಕ್ಕೆ ಬಂದ ಅಧಿಕಾರಿಗಳು ಹುಲಿಯ ಕಳೇಬರದ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಹಿನ್ನೀರಿನ ಡ್ಯಾಂ ಹೂಸೂರು ಗ್ರಾಮದಲ್ಲಿಯೇ ಅಂತ್ಯಕ್ರಿಯೆ ನಡೆಸಿದ್ದರು.
ಇದು ಸುಮಾರು 9 ವರ್ಷದ ಹುಲಿಯಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ನಂತರ ಸಾವಿಗೆ ಕಾರಣ ಏನೆಂದು ತಿಳಿದುಬರಲಿದೆ ಎಂದು ಸಾಗರ ವಲಯ ವನ್ಯಜೀವಿ ವಿಭಾಗದ ಡಿಎಫ್ಒ ಮೋಹನ್ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಪ್ರವಾಸಿಗರ ಅಚ್ಚುಮೆಚ್ಚಿನ ಹುಲಿ 'ಛೋಟಾ ಭೀಮ್' ಹೃದಯ ವೈಫಲ್ಯದಿಂದ ಸಾವು - CHHOTA BHEEM TIGER DIES