ಕನ್ನಡ ಚಿತ್ರರಂಗದಲ್ಲೀಗ ನಮ್ಮ ನೆಲದ ಕಥೆಗಳನ್ನು ಹೇಳುವ ಸಿನಿಮಾಗಳು ಇತ್ತೀಚೆಗೆ ಹೊಸ ಕ್ರಾಂತಿ ಮಾಡುತ್ತೀವೆ. ಈ ಪಟ್ಟಿಗೆ 'ಮೂರನೇ ಕೃಷ್ಣಪ್ಪ' ಚಿತ್ರ ಕೂಡ ಒಂದು. 'ಕಾಂತಾರ', 'ಕಾಟೇರ' ಸಕ್ಸಸ್ ಬಳಿಕ 'ಮೂರನೇ ಕೃಷ್ಣಪ್ಪ' ಇಲ್ಲಿನ ನೆಲದ ಘಮಲನ್ನು ಹೊತ್ತು ಬರುತ್ತಿರುವ ಸಿನಿಮಾ ಕೂಡ ಹೌದು. ಕೋಲಾರ ಭಾಗದ ಭಾಷೆಯ ಸೊಗಡನ್ನು ಪ್ರೇಕ್ಷಕರಿಗೆ ಉಣಬಡಿಸಲು ಹೊರಟಿರುವ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಚಿತ್ರ ತಂಡ ಅನುಭವವನ್ನು ಹಂಚಿಕೊಂಡಿದೆ.
![Rangayana Raghu and Sampath Maithria starrer Moorane Krishnappa release on 24th May](https://etvbharatimages.akamaized.net/etvbharat/prod-images/18-05-2024/kn-bng-02-moorane-krishnappa-cinema-bhagge-rangayana-raghu-helidenu-7204735_18052024124719_1805f_1716016639_348.jpg)
ಈ ವೇಳೆ ರಂಗಾಯಣ ರಘು ಮಾತನಾಡಿ, ನವೀನ್ ಅವರು 'ಅಕಿರ' ಚಿತ್ರದ ವೇಳೆ ಪರಿಚಯವಾಗಿದ್ದು, ಸಿಕ್ಕಾಗಲೆಲ್ಲ ಸಿನಿಮಾ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಪ್ರಾಂತ್ಯ ಭಾಷೆ ಇಟ್ಕೊಂಡು ಸಿನಿಮಾ ಮಾಡಬೇಕೆಂದು ಮಾತನಾಡಿದ್ದೆವು. ಸ್ಕ್ರಿಪ್ಟ್ ಕೇಳಿದ ತಕ್ಷಣ ಕೊಟ್ಟರು. ಸ್ಕ್ರಿಪ್ಟ್ ಓದುತ್ತಾ ಓದುತ್ತಾ ಖುಷಿಯಾಯ್ತು. ಕಂಟೆಂಟ್ ಕೂಡ ಚೆನ್ನಾಗಿದೆ. ಎಲ್ಲ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಕೋಲಾರ ಭಾಷೆ ಕೂಡ ಅಚ್ಚುಮೆಚ್ಚು. ಇಂತಹ ಪ್ರಾಂತ್ಯ ಭಾಷೆಯ ಚಿತ್ರದಲ್ಲಿ ನಾನು ನಟಿಸಿರುವುದು ಖುಷಿ ಕೊಟ್ಟಿದೆ ಎಂದರು.
![Rangayana Raghu and Sampath Maithria starrer Moorane Krishnappa release on 24th May](https://etvbharatimages.akamaized.net/etvbharat/prod-images/18-05-2024/kn-bng-02-moorane-krishnappa-cinema-bhagge-rangayana-raghu-helidenu-7204735_18052024124719_1805f_1716016639_245.jpg)
ನಂತರ ನಟ ಸಂಪತ್ ಮೈತ್ರೀಯಾ ಮಾತನಾಡಿ, ಈ ಸಿನಿಮಾದಲ್ಲಿ ಮುಖ್ಯ ಪಾತ್ರವಷ್ಟೇ. ನಾನೇನೂ ನಾಯಕ ನಟಲ್ಲ, ನಾನು ಕಲಾವಿದ. ದೇವಸ್ಥಾನ ಉದ್ಘಾಟನೆಗೆ ಸಂಬಂಧಪಟ್ಟ ಒಂದೊಳ್ಳೆ ವಿಷಯ ಇರುವ ಸಿನಿಮಾ ಇದಾಗಿದೆ. ಒಬ್ಬ ಶಿಕ್ಷಕ ಸಹಾಯ ಮಾಡಲು ಹೋಗಿ ಯಾವ ಯಾವ ಕಷ್ಟ ಅನುಭವಿಸ್ತಾನೆ ಎಂಬ ವಿಷಯದ ಕುರಿತು ನನ್ನ ಪಾತ್ರ. ಎಲ್ಲರೂ ಅವರ ಅವರ ಪಾತ್ರದಲ್ಲಿ ಸ್ಕೋರ್ ಮಾಡಿದ್ದಾರೆ. ರಂಗಾಯಣ ರಘು ಸರ್ ಬಗ್ಗೆ ಮಾತನಾಡುವಷ್ಟು ನನಗೆ ಅನುಭವ ಇಲ್ಲ. ಅವರು ನಟಿಸುವಾಗ ನಾನು ದೂರ ನೋಡುತ್ತಾ ನಿಂತಿದ್ದೆ. ಅವರಿಂದ ಕಲಿತಿದ್ದು ಸಾಕಷ್ಟು ಇದೆ. ಸಂಗೀತ ಅದ್ಭುತವಾಗಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.
![Rangayana Raghu and Sampath Maithria starrer Moorane Krishnappa release on 24th May](https://etvbharatimages.akamaized.net/etvbharat/prod-images/18-05-2024/kn-bng-02-moorane-krishnappa-cinema-bhagge-rangayana-raghu-helidenu-7204735_18052024124719_1805f_1716016639_264.jpg)
ನಿರ್ದೇಶಕ ನವೀನ್ ರೆಡ್ಡಿ ಮಾತನಾಡಿ, ನಾನು ಬರೆದ ಪಾತ್ರಗಳಿಗೆ ಇಡೀ ಕಲಾವಿದರು ಜೀವ ತುಂಬಿದ್ದಾರೆ. ಏನು ಬೇಕೋ ಎಲ್ಲದಕ್ಕಿಂತ ಒಂದು ಪಟ್ಟು ಜಾಸ್ತಿಯೇ ಮಾಡಿದ್ದಾರೆ. ಈ ಹಿಂದೆ ನನ್ನ ಎರಡು ಸಿನಿಮಾಗಳಿಗೆ ಕೆಲಸ ಮಾಡಿದ ಯೋಗಿ ಈ ಚಿತ್ರಕ್ಕೂ ಕೆಲಸ ಮಾಡಿದ್ದಾರೆ. ನನ್ನ ಬಳಿ ಏನ್ ಇದೆಯೋ ಅದರಲ್ಲಿ ಕೆಲಸ ಮಾಡಿದ್ದಾರೆ. ಶ್ರೀಕಾಂತ್ ಸರ್ ನನ್ನ ಸಿನಿಮಾವನ್ನು ನನಗೆ ಇಷ್ಟವಾಗುವಂತೆ ಸಂಕಲನದ ಕೆಲಸ ಮಾಡಿದ್ದಾರೆ. ಟ್ರೇಲರ್ ಕೂಡ ಚೆನ್ನಾಗಿ ಮೂಡಿ ಬಂದಿದೆ. ನಿಮಗೆ ಟ್ರೇಲರ್ ಇಷ್ಟವಾಗಿದ್ದರೆ 24 ರಂದು ಸಿನಿಮಾ ಬಿಡುಗಡೆಯಾಗಲಿದೆ. ನೋಡಿ ಅಭಿಪ್ರಾಯ ತಿಳಿಸಿ ಎಂದರು.
ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವ ರಂಗಾಯಣ ರಘು ಹಾಗೂ ಸಂಪತ್ ಮೈತ್ರಿಯಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಳ್ಳಿ ಸೊಗಡಿನ ಕಥೆಯನ್ನು ಕಟ್ಟಿಕೊಟ್ಟಿರುವ ಈ ಚಿತ್ರಕ್ಕೆ ನವೀನ್ ರೆಡ್ಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಭಿನ್ನ ಟೈಟಲ್ನೊಂದಿಗೆ ನಿರ್ದೇಶಕ ನವೀನ್ ಅವರು ಆರಂಭದಲ್ಲೇ ಕೌತುಕ ಮೂಡಿಸಿದ್ದಾರೆ. ‘ರೆಡ್ ಡ್ರ್ಯಾಗನ್ ಫಿಲ್ಮ್ಸ್’ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಿಸಿದೆ. ಮೋಹನ್ ರೆಡ್ಡಿ ಜಿ, ರವಿಶಂಕರ್ ಅವರು ಬಂಡವಾಳ ಹೂಡಿದ್ದಾರೆ.
ಶ್ರೀಪ್ರಿಯಾ ಅವರು ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ತುಕಾಲಿ ಸಂತೋಷ್, ಉಗ್ರಂ ಮಂಜು ಮುಂತಾದವರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಆನಂದ್ ರಾಜ ವಿಕ್ರಮ್ ಸಂಗೀತ ಕೊಟ್ಟಿದ್ದಾರೆ. ಯೋಗಿ ಕ್ಯಾಮರಾ ವರ್ಕ್ ಮಾಡಿದ್ದಾರೆ. ಇದೇ ತಿಂಗಳು ಮೇ 24 ರಂದು ಸಿನಿಮಾ ರಿಲೀಸ್ ಆಗುತ್ತಿದೆ.
ಇದನ್ನೂ ಓದಿ: ಕಣ್ಣಪ್ಪ ಚಿತ್ರಕ್ಕೆ ಎಂಟ್ರಿಕೊಟ್ಟ ಕಾಜಲ್ ಅಗರ್ವಾಲ್ - Kannappa film