ಈ ಸಿನಿಮಾವೆಂಬ ಬಣ್ಣದ ಲೋಕದಲ್ಲಿ ಕಲಾವಿದರಿಗೆ ಒಂದು ಪಾತ್ರ ದೊಡ್ಡ ಮಟ್ಟದ ಹೆಸರು ತಂದು ಕೊಟ್ರೆ ಅದೇ ತರಹದ ಪಾತ್ರಗಳು ಆ ನಟ ನಟಿಯರಿಗೆ ಹುಡುಕಿಕೊಂಡು ಬರುತ್ತವೆ. ಇದೀಗ ಸೂಪರ್ ಹಿಟ್ 'ಭೀಮ' ಸಿನಿಮಾದ ಗಿರಿಜಾ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ಪ್ರಿಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಟಿ.ಎನ್.ನಾಗೇಶ್ ನಿರ್ದೇಶನದ 'ಕುಂಭ ಸಂಭವ' ಶೀರ್ಷಿಕೆಯ ಚಿತ್ರದಲ್ಲಿ ಪ್ರಿಯ ಅವರು ಖಾಕಿ ತೊಟ್ಟಿದ್ದಾರೆ. ಈ ಚಿತ್ರದಲ್ಲೂ ದಕ್ಷ ಪೊಲೀಸ್ ಅಧಿಕಾರಿಯಾಗಿ ಪ್ರಿಯ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಈ ಚಿತ್ರದ ಮುಹೂರ್ತ ಸಮಾರಂಭ ವಿಜಯನಗರದ ಶ್ರೀಗಣಪತಿ ದೇವಸ್ಥಾನದಲ್ಲಿ ನೆರವೇರಿತು. ನರೇಶ್ ಅವರು ಆರಂಭ ಫಲಕ ತೋರುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು.
![Kumbha Sambhava Film Team](https://etvbharatimages.akamaized.net/etvbharat/prod-images/22-11-2024/22954567_wasjgeawydf.jpg)
ನಿರ್ದೇಶಕ ಟಿ.ಎನ್.ನಾಗೇಶ್ ಮಾತನಾಡಿ, 2023ರಲ್ಲಿ ಮಂಡ್ಯ ಸುತ್ತಮುತ್ತ ನಡೆದ ಭ್ರೂಣ ಹತ್ಯೆಯ ವಿಷಯವನ್ನಿಟ್ಟುಕೊಂಡು ಈ ಚಿತ್ರದ ಕಥೆ ಬರೆದಿದ್ದೇನೆ. ಕ್ರಿಶ್ ಜೋಷಿ ಅವರು ನನಗೆ ಕಥೆ ಬರೆಯುವಲ್ಲಿ ಸಹಕಾರ ನೀಡಿದ್ದಾರೆ. ಇದೊಂದು ಸಾಮಾಜಿಕ ಸಮಸ್ಯೆಯ ನೈಜಘಟನೆ ಆಧಾರಿತ ಚಿತ್ರ. "ಭೀಮ" ಖ್ಯಾತಿಯ ಪ್ರಿಯ, ಅರ್ಜುನ್ ದೇವ್, ಮಧು ಶ್ರೀ, ಶೋಭಿತ, ಕಮಲ್ ಮುಂತಾದವರು ಚಿತ್ರದ ಮುಖ್ಯ ಪಾತ್ರದಲ್ಲಿದ್ದಾರೆ.
![Kumbha Sambhava Film Team](https://etvbharatimages.akamaized.net/etvbharat/prod-images/22-11-2024/22954567_hfgyfgjuft-yetf.jpg)
ಮಿಲ್ಕಿ ಮೂನ್ ಮೂವೀಸ್ ಲಾಂಛನದಲ್ಲಿ ನಾಗಾನಾಯ್ಕ, ತಾರಾ ನಾಗೇಶ, ಸುನಂದಾ ಹೊಸಪೇಟೆ, ಕಮಲ್, ಡೇವಿಡ್ ರಾಯಪ್ಪ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಲ್ಲಿ ಹಾಗೂ ನಿಂಗರಾಜು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಮೂರು ಹಾಡುಗಳಿರುವ "ಕುಂಭ ಸಂಭವ" ಚಿತ್ರದಲ್ಲಿ ಮೂರು ಸಾಹಸ ಸನ್ನಿವೇಶಗಳೂ ಇವೆ. ಎಂ.ಎನ್ ಕೃಪಾಕರ್ ಸಂಗೀತ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಸಿದ್ದಾರಾಜು ಛಾಯಾಗ್ರಹಣ ಹಾಗೂ ಆಕಾಶ್ ಅವರ ಸಂಕಲನ ಈ ಚಿತ್ರಕ್ಕಿದ್ದು, ಕ್ರಿಶ್ ಜೋಶಿ ಸಂಭಾಷಣೆ ಬರೆದಿದ್ದಾರೆ ಎಂದರು.
![Kumbha Sambhava Film Team](https://etvbharatimages.akamaized.net/etvbharat/prod-images/22-11-2024/22954567_stgyerf.jpg)
ಇದನ್ನೂ ಓದಿ: ವಿವಾದದ ನಂತರ ಒಂದೇ ಕಡೆ ಕಾಣಿಸಿಕೊಂಡ ನಯನತಾರಾ - ಧನುಷ್: ಒಬ್ಬರನ್ನೊಬ್ಬರು ನಿರ್ಲಕ್ಷಿಸಿರುವ ವಿಡಿಯೋ ನೋಡಿ
ಬಳಿಕ ಪ್ರಿಯ ಮಾತನಾಡಿ, ಕುಂಭ ಸಂಭವ ಚಿತ್ರದ ಕಥೆ ನನ್ನ ಮನಸ್ಸಿಗೆ ಬಹಳ ಹತ್ತಿರವಾಯಿತು. ನಮ್ಮ ಸುತ್ತಮುತ್ತ ದಿನನಿತ್ಯ ನೋಡುವ ವಿಷಯವನ್ನಿಟ್ಟಿಕೊಂಡು ನಿರ್ದೇಶಕರು ಒಳ್ಳೆಯ ಕಥೆ ಮಾಡಿದ್ದಾರೆ. ಹೆಣ್ಣುಮಕ್ಕಳಿಗೆ ಬಹಳ ಹಿಡಿಸುವ ಕಥೆಯಿದು. ಭ್ರೂಣ ಹತ್ಯೆಯ ಸುತ್ತ ಬೇಕಾದಷ್ಟು ಕಥೆ ಬಂದಿದೆಯಾದರೂ ಇದು ವಿಭಿನ್ನ. ಸಮಸ್ಯೆಗೆ ಪರಿಹಾರವನ್ನು ನಮ್ಮ ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರದಲ್ಲೂ ನಾನು ಪೊಲೀಸ್ ಅಧಿಕಾರಿ. ಜಾನಕಿ ನನ್ನ ಪಾತ್ರದ ಹೆಸರು ಎಂದರು.
![Kumbha Sambhava Film Team](https://etvbharatimages.akamaized.net/etvbharat/prod-images/22-11-2024/22954567_sgmfrjg.jpg)
ಇದನ್ನೂ ಓದಿ: ಸ್ಯಾಂಡಲ್ವುಡ್ ಸಿನಿ ಸಂಭ್ರಮ: ಪ್ರೇಕ್ಷಕರ ಮನಗೆಲ್ಲಲು ಚಿತ್ರಮಂದಿರ ಪ್ರವೇಶಿಸಿದವು ವಿಭಿನ್ನ ಕಥೆಗಳುಳ್ಳ 7 ಸಿನಿಮಾಗಳು
ಚಿತ್ರದಲ್ಲಿ ಪ್ರಿಯಾ ಜೊತೆಗೆ ನಾಯಕ ಅರ್ಜುನ್ ದೇವ್, ನಟಿಯರಾದ ಮಧುಶ್ರೀ, ಶೋಭಿತ, ಸುನಂದ, ಕಲಾವಿದರಾದ ಕಮಲ್, ಶಿವಾಜಿರಾವ್ ಜಾದವ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಿದೆ.