ನವದೆಹಲಿ: 'ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ' ಎಂಬ ಸರ್ಕಾರದ ನಿರಂತರ ಜಾಗೃತಿ ನಡುವೆಯೇ ಪದವೀಧರನೊಬ್ಬ ಅವಳಿ ಹೆಣ್ಣು ಶಿಶುಗಳನ್ನು ಕೊಂದು ಹೂತ ಹಾಕಿರುವ ದಾರುಣ ಘಟನೆ ನಡೆದಿದೆ. ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ 32 ವರ್ಷದ ವ್ಯಕ್ತಿ ಮೂರು ದಿನದ ಹಿಂದೆ ಜನಿಸಿದ ಮಕ್ಕಳನ್ನು ಕೊಂದು ಹಾಕಿದ್ದಾರೆ. ಬಳಿಕ ದೆಹಲಿಯ ಸುಲ್ತಾನುಪುರಿ ಪ್ರದೇಶದಲ್ಲಿರುವ ಮನೆಯ ಸ್ಮಶಾನದಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂತ್ ಕಲಾನ್ ಗ್ರಾಮದ ಬಳಿಯ ತಾತ್ಕಾಲಿಕ ಸ್ಮಶಾನದ ಆವರಣದಲ್ಲಿ ಶಿಶುಗಳ ಶವಗಳನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಅಪರಾಧ) ಅಮಿತ್ ಗೋಯೆಲ್ ತಿಳಿಸಿದ್ದಾರೆ. ಕೃತ್ಯ ಎಸಗಿದ ಆರೋಪಿ ನೀರಜ್ ಸೋಲಂಕಿ ಅವರನ್ನು ಹರಿಯಾಣದ ರೊಹ್ಟಕ್ನಲ್ಲಿ ಬಂಧಿಸಲಾಗಿದೆ.
ಹರಿಯಾಣ ಮೂಲಕ ಸೋಲಂಕಿ ದೆಹಲಿ ವಿವಿಯಿಂದ ಪದವೀಧರನಾಗಿದ್ದು, ದೆಹಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈತ ಜೂನ್ 3ರಂದು ತನ್ನ ಅವಳಿ ಮಕ್ಕಳ ಹತ್ಯೆ ಮಾಡಿದ್ದಾನೆ. ಬಳಿಕ ದಾಖಲಾದ ದೂರಿನ ಅನ್ವಯ ಪೊಲೀಸರು, ಜೂನ್ 5ರಂದು ನ್ಯಾಯಾಲಯದಿಂದ ಅನುಮತಿ ಪಡೆದು ಹೂತಿದ್ದ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಶಿಶುಗಳ ಅಸಹಜ ಹತ್ಯೆ ವರದಿ ಬಂದಿದೆ. ಮಂಗೋಲ್ಪುರಿಯಲ್ಲಿರುವ ಎಸ್ಜಿಎಂ ಆಸ್ಪತ್ರೆಯ ಶವಾಗಾರದಲ್ಲಿ ಶಿಶುವಿನ ಶವ ಇಡಲಾಗಿತು.
ಸೋಲಂಕಿಗೆ ಗಂಡು ಮಗು ಬೇಕು ಎಂಬ ಹಂಬಲ ಹೆಚ್ಚಿತ್ತು. ಆದರೆ, ಆತನ ಹೆಂಡತಿ ಹರಿಯಾಣದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಅವಳಿ- ಜವಳಿ ಶಿಶುಗಳಿಗೆ ಜನ್ಮ ನೀಡಿದ್ದರು. ಹೆಂಡತಿಗೆ ಮಕ್ಕಳು ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಸುಳ್ಳು ಹೇಳಿ ಮಕ್ಕಳನ್ನು ದೆಹಲಿಗೆ ಕರೆತಂದ ಸೋಲಂಕಿ ಈ ಕೃತ್ಯ ಎಸಗಿದ್ದಾನೆ. ಆದರೆ, ಮಕ್ಕಳು ದೆಹಲಿಗೆ ಬಂದಾಗ ಜೀವಂತವಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ ಸೊಲಂಕಿಯ ತಂದೆಯನ್ನು ಬಂಧಿಸಲಾಗಿತ್ತು. ಈ ವೇಳೆ, ವಿಚಾರಣೆ ನಡೆಸಿದಾಗ ಸೊಲಂಕಿ ಹೆಣ್ಣು ಮಕ್ಕಳು ಹುಟ್ಟಿದ ಹಿನ್ನೆಲೆ ಆತ ಬೇಸರಗೊಂಡಿದ್ದ ಎಂಬ ವಿಷಯ ಬಯಲಾಯಿತು. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆ ಬಳಿಕ ಮಕ್ಕಳ ಮೃತ ದೇಹವನ್ನು ತಾಯಿಗೆ ನೀಡಲಾಗಿದೆ. ಸೋಲಂಕಿಯನ್ನು ಕೊಲೆ ಪ್ರಕರಣದ ಮೇಲೆ ಬಂಧಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಲಮಗ, ಆಪ್ತರಿಂದ ಅತ್ಯಾಚಾರ: ನಿವೃತ್ತ IAS ಅಧಿಕಾರಿಯ ಪತ್ನಿಯಿಂದ ಗಂಭೀರ ಆರೋಪ