ಚೆನ್ನೈ(ತಮಿಳುನಾಡು): ಚೆನ್ನೈನ ಮರೀನಾ ಬೀಚ್ನಲ್ಲಿ ಭಾನುವಾರ ನಡೆದ ಮೆಗಾ ವೈಮಾನಿಕ ಪ್ರದರ್ಶನದಲ್ಲಿ (ಏರ್ ಶೋ) ದುರಂತವೊಂದು ಸಂಭವಿಸಿದೆ. ಲೋಹದ ಹಕ್ಕಿಗಳ ಹಾರಾಟದ ಸೊಬಗನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಲಕ್ಷಾಂತರ ಜನರಲ್ಲಿ ಕಾಲ್ತುಳಿತ ಉಂಟಾಗಿ ನಾಲ್ವರು ಸಾವನ್ನಪ್ಪಿ, 230 ಜನರು ಗಾಯಗೊಂಡ ಘಟನೆ ನಡೆದಿದೆ.
ಭಾರತೀಯ ವಾಯುಪಡೆ ಆಯೋಜಿಸಿದ್ದ ಏರ್ ಶೋ ವೀಕ್ಷಿಸಲು ಲಕ್ಷಾಂತರ ಪ್ರವಾಸಿಗರು ಬಂದಿದ್ದರು. ಶೋ ಮುಗಿದ ಬಳಿಕ ಜನರು ವಾಪಸ್ ತೆರಳುವಾಗ ಭಾರೀ ದಟ್ಟಣೆಯಿಂದಾಗಿ ಕಾಲ್ತುಳಿತ ಉಂಟಾಗಿದೆ. ಇದರಿಂದ ನಾಲ್ವರು ಸಾವಿಗೀಡಾಗಿದ್ದಾರೆ. ಅನೇಕ ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಮಾನಿಕ ಪ್ರದರ್ಶನದಲ್ಲಿ ಸುಮಾರು 10 ಲಕ್ಷ ಜನರು ಭಾಗವಹಿಸಿದ್ದರು ಎಂದು ಅಂದಾಜಿಸಲಾಗಿದೆ.
ಮೂಲ ಸೌಕರ್ಯಗಳ ಕೊರತೆ: ವೈಮಾನಿಕ ಪ್ರದರ್ಶನಕ್ಕೆ ಲಕ್ಷಗಟ್ಟಲೆ ಜನರು ಬರುವ ನಿರೀಕ್ಷೆ ಇದ್ದರೂ, ಆಯೋಜಕರು ಮೂಲಸೌಕರ್ಯಗಳ ವ್ಯವಸ್ಥೆ ಮಾಡದೇ ಇರುವುದು ದುರಂತಕ್ಕೆ ಕಾರಣ ಎಂದು ಜನರು ಆರೋಪಿಸಿದ್ದಾರೆ. ಕಾರ್ಯಕ್ರಮದ ಸ್ಥಳದಿಂದ ಬಸ್ ನಿಲ್ದಾಣ, ಮೆಟ್ರೋಗೆ ತೆರಳಲು ಜನರು ಸಾಗರೋಪಾದಿಯಲ್ಲಿ ಹರಿದುಬಂದಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಕಾರ್ಯಕ್ರಮದಲ್ಲಿ ನೀರು, ವೈದ್ಯಕೀಯ ವ್ಯವಸ್ಥೆ ಇಲ್ಲದಿರುವುದು ಟೀಕೆಗೆ ಗುರಿಯಾಗಿದೆ.
ಪ್ರದರ್ಶನವು ಮಧ್ಯಾಹ್ನ 1 ಗಂಟೆಗೆ ಮುಗಿದಾಗ ಜನರು ಹಿಂತಿರುಗಲು ಆರಂಭಿಸಿದ್ದಾರೆ. ಲಕ್ಷಗಟ್ಟಲೆ ಜನರು ಒಂದೇ ಬಾರಿಗೆ ತೆರಳಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ತುಳಿತಕ್ಕೆ ಸಿಕ್ಕವರು ತೀವ್ರ ಗಾಯಗೊಂಡಿದ್ದಾರೆ. ಇದರಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ದುರಂತವೆಂದರೆ, ಗಾಯಗೊಂಡವರನ್ನು ಸ್ಥಳದಿಂದ ಆಸ್ಪತ್ರೆಗೆ ಸಾಗಿಸಲೂ ಆಂಬ್ಯುಲೆನ್ಸ್ಗಳಿಗೆ ದಾರಿ ಸಿಗದೆ ಜನರ ಮಧ್ಯೆ ಸಿಲುಕಿಕೊಂಡಿದ್ದವು.
ಸಂಚಾರ ವ್ಯವಸ್ಥೆ ಅಸ್ತವ್ಯಸ್ತ: ಕಾರ್ಯಕ್ರಮ ಮಧ್ಯಾಹ್ನ ಮುಗಿದರೂ, ಸಂಜೆಯವರೆಗೂ ವಾಹನ ದಟ್ಟಣೆ ಮುಂದುವರೆದಿತ್ತು. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ಸಾಗಿಸಲು ಕೂಡ ತೊಂದರೆ ಉಂಟಾಯಿತು. ಮರೀನಾ ಬೀಚ್ನಿಂದ ಹಿಡಿದು ಗೌಚ್ಚೇರಿ ಬಳಿಯ ಲೈಟ್ಹೌಸ್ ಮೆಟ್ರೋ ನಿಲ್ದಾಣದವರೆಗೂ ಜನರು ಸಾಲುಗಟ್ಟಿ ನಿಂತಿದ್ದರು. ಎಂಆರ್ಟಿಎಸ್ ರೈಲು ನಿಲ್ದಾಣಗಳು ಜನರಿಂದ ಕಿಕ್ಕಿರಿದು ತುಂಬಿದ್ದವು. ಸಾವಿರಾರು ಸಂಖ್ಯೆಯಲ್ಲಿ ಜನರು ನುಗ್ಗಿದ್ದರಿಂದ ನಿಲ್ದಾಣಗಳು ಜನರಿಂದ ತುಂಬಿತುಳುಕುತ್ತಿದ್ದವು. ಅಣ್ಣಾ ಚೌಕ್ನಲ್ಲಿರುವ ಬಸ್ ನಿಲ್ದಾಣವೂ ಪ್ರವಾಸಿಗರಿಂದ ಕಿಕ್ಕಿರಿದಿತ್ತು.
ಇದನ್ನೂ ಓದಿ: ಪ್ರಧಾನಿ ಮೋದಿ 'ಹೀಗೆ' ಮಾಡಿದ್ರೆ ಬಿಜೆಪಿ ಪರ ಪ್ರಚಾರ ಮಾಡುವೆ: ಅರವಿಂದ್ ಕೇಜ್ರಿವಾಲ್ - Kejriwal challenge to PM modi