ಅಜ್ಮೀರ: ತೀರ್ಥರಾಜ ಗುರು ಪುಷ್ಕರ ನಗರ ಕೇವಲ ಆಧ್ಯಾತ್ಮಿಕ ಸ್ಥಳವಲ್ಲ. ಇದು ಲೋಕದ ಸೃಷ್ಟಿಕರ್ತ ಬ್ರಹ್ಮನ ನಗರ ಆಗಿದೆ. ಕಾರ್ತಿಕ ಏಕಾದಶಿಯಿಂದ ಕಾರ್ತಿಕ ಪೂರ್ಣಿಮೆಯವರೆಗೆ ಇಲ್ಲಿ ಬ್ರಹ್ಮದೇವ ಯಾಗ ಮಾಡಿದರು. ಈ ಯಾಗದಲ್ಲಿ ದೇವತೆಗಳು, ರಾಕ್ಷಸರು, ಯಕ್ಷರು, ಗಂಧರ್ವರು, ಹಾವು ಇತ್ಯಾದಿಗಳು ಕೂಡ ಭಾಗಿಯಾಗಿದ್ದರು. ಆದರೆ, ಈಶ್ವರನಿಗೆ ಈ ಯಾಗಕ್ಕೆ ಆಹ್ವಾನ ನೀಡಿರಲಿಲ್ಲ. ಇದರಿಂದ ಈಶ್ವರನೇ ಸ್ವತಃ ಪುಷ್ಕರಕ್ಕೆ ಬಂದು ಇಲ್ಲಿ ಅದ್ಬುತ ಲೀಲೆಗಳನ್ನು ಸೃಷ್ಟಿಸಿದ. ಇಲ್ಲಿ ಆತ ಆತ್ಮದ ರೂಪದಲ್ಲಿ ನೆಲೆಸಿದ್ದು, ಆತ್ಮೇಶ್ವರ ಮಹಾದೇವನೆಂದು ಜಗತ್ಪ್ರಸಿದ್ಧಿ ಪಡೆದಿದ್ದಾನೆ.
ಕೋಟ್ಯಂತರ ಹಿಂದೂಗಳ ನಂಬಿಕೆ ಕೇಂದ್ರವಾಗಿರುವ ಪುಷ್ಕರ್ ಸ್ಥಳಕ್ಕೆ ದೇಶ ವಿದೇಶದಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿನ ಜಗತ್ಪಿತ ಬ್ರಹ್ಮನ ಭೇಟಿ ಮಾಡುವ ಮೊದಲು ಆತ್ಮೇಶ್ವರ ಮಹಾದೇವನ ದರ್ಶನ ಅಗತ್ಯವಾಗಿದೆ. ಈ ರೀತಿ ಮಾಡಿದಲ್ಲಿ ಮಾತ್ರ, ಈ ಯಾಗದ ಫಲ ದೊರೆಯುತ್ತದೆ.
ಅಘೋರಿ ರೂಪದಲ್ಲಿ ಕಂಡ ಮಹಾದೇವ: ಇಲ್ಲಿನ ಪುಷ್ಕರ ಬ್ರಹ್ಮ ದೇವ ಯಾಗ ಮಾಡಿದ ಸ್ಥಳ ಎಂದು ನಂಬಲಾಗಿದೆ. ಎಲ್ಲರಿಗೂ ಯಾಗಕ್ಕೆ ಆಹ್ವಾನ ನೀಡಿದ ಬ್ರಹ್ಮ ಮಹಾದೇವನಿಗೆ ಮಾತ್ರ ಆಹ್ವಾನಿಸಲಿಲ್ಲ. ಆಗ ಶಿವನು ಅಘೋರ ತಂತ್ರಿಕ ರೂಪದಲ್ಲಿ ಕೈಯಲ್ಲಿ ತಲೆಬುರಡೆ ಹಿಡಿದು ಯಾಗ ಸ್ಥಳಕ್ಕೆ ಆಗಮಿಸಿದ. ಈ ಅಘೋರಿಯಲ್ಲಿದ್ದ ಶಿವನನ್ನು ಯಾರು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಅಲ್ಲದೇ, ಅಘೋರ ರೂಪದಲ್ಲಿದ್ದ ಶಿವನನ್ನು ಯಾಗದ ಸ್ಥಳಕ್ಕೆ ಬಾರದಂತೆ ತಡೆಯಲು ಬ್ರಾಹ್ಮಣರು ಮುಂದಾದರು. ಅಘೋರ ಶಿವ ಸ್ಥಳಕ್ಕೆ ಬರಲು ಮುಂದಾದಾಗ ತಾಮಸಿಕ ಮತ್ತು ಅಶುದ್ಧ ವಸ್ತುವನ್ನು ತರುವಂತಿಲ್ಲ ಎಂದು ತಾಕೀತು ಮಾಡಿದರು. ಇದರಿಂದ ಅಘೋರಿ ರೂಪದ ಶಿವ ಅವುಗಳನ್ನು ಹೊರಗೆ ಇಟ್ಟು, ಕರೆಯಲ್ಲಿ ಸ್ನಾನ ಮಾಡಲು ಹೋದರು.
ಈ ವೇಳೆ, ಯಜ್ಞಸ್ಥಳದ ಹೊರಗಡೆ ಇಟ್ಟಿದ್ದ ತಲೆಬುರಡೆಯನ್ನು ಕೋಲಿನಿಂದ ಹೊರಗೆ ಎಸೆದರು. ಆಗ ಆ ತಲೆಬುರುಡೆ ಪುಷ್ಕರದ ಸುತ್ತ ಸಾವಿರಾರು ತಲೆಬುರುಡೆಯಾಗಿ ಹುಟ್ಟಲು ಪ್ರಾರಂಭಿಸಿದವು. ಇದನ್ನು ನೀಡಿದ ಮಂದಿ ಭೀತಿಗೊಂಡು, ಕಂಗಾಲಾಗಿ ಓಡಿದರು. ಬ್ರಹ್ಮನ ಬಳಿ ಬಂದು ನಡೆದ ವಿಷಯವನ್ನು ವಿವರಿಸಿದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬ್ರಹ್ಮನಿಗೆ ಇದು ಶಿವನ ಲೀಲೆ ಎಂದು ಅರಿವಾಯಿತು. ಜೊತೆಗೆ ತಾನು ಆಹ್ವಾನ ನೀಡಲು ಮರೆತಿರುವುದು ನೆನಪಾಯಿತು.
ಶಿವನ ಸಿಟ್ಟು ತಣ್ಣಗೆ ಮಾಡಲು ಮುಂದಾದ ಬ್ರಹ್ಮ ಚಂದ್ರಶೇಖರ ಸ್ತೋತ್ರ ಪಾರಾಯಣ ನಡೆಸಿದ, ಇದಾದ ಬಳಿಕ ತಪ್ಪು ತಿದ್ದುಕೊಂಡ ಬ್ರಹ್ಮ ಯಗ್ಞ ಸ್ಥಳದಲ್ಲಿ ಮಹಾದೇವನನ್ನು ಆಹ್ವಾನಿಸಿದ. ಬ್ರಹ್ಮ ಎಲ್ಲಾ ವಿಶೇಷ ಪೂಜೆಗಳಲ್ಲಿ ಮಹಾದೇವನನ್ನು ಕಡ್ಡಾಯವಾಗಿ ಭಾಗಿಯಾಗುವಂತೆ ಮಾಡಿದ. ಅಂದಿನಿಂದ ಯಾವುದೇ ಯಜ್ಞಗಳು ಮಹಾದೇವನಿಲ್ಲದೇ ಸಂಪೂರ್ಣವಾಗುವುದಿಲ್ಲ.
ವರಹಾ ಘಾಟ್ನಲ್ಲಿರುವ ಆತ್ಮೇಶ್ವರ ಮಹದೇವ ದೇಗುಲ ಪ್ರಾಚೀನ ಶಿವನ ದೇಗುಲವಾಗಿದೆ. ಶಿವನ ಭಕ್ತರ ಭಕ್ತಿಯ ಮೂಲಕ ಕೇಂದ್ರವಾಗಿದ್ದು, ಇಲ್ಲಿ ಪ್ರತಿದಿನ ಶಿವನ ಆರಾಧನೆ ಸಾಗುತ್ತದೆ. ಅದರಲ್ಲೂ ಶ್ರಾವಣದಲ್ಲಿ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತದೆ.
ಸ್ವಯಂ ಉದ್ಭವ ಲಿಂಗ: ಈ ದೇವಾಲಯದಲ್ಲಿರುವ ಶಿವಲಿಂಗವು ಸ್ವಯಂ ಉದ್ಬವವಾಗಿದ್ದು, ಸತ್ಯಯುಗದಿಂದಲೂ ಇಲ್ಲಿದೆ. ಈ ದೇವಾಲಯದ ಮೇಲೆ ಮಹಾದೇವನ ಮತ್ತೊಂದು ದೇವಾಲಯವಿದೆ, ಸರ್ವೇಶ್ವರ ಮಹಾದೇವ ಎಂಬ ಹೆಸರಿನಿಂದ ಇದು ಖ್ಯಾತಿ ಪಡೆದಿದೆ. ಬ್ರಹ್ಮನ ಮಾತಿನ ಪ್ರಕಾರ, ಇಲ್ಲಿ ಸರೋವರದಲ್ಲಿ ಸ್ನಾನಮಾಡಿ ಆತ್ಮೇಶ್ವರ ದರ್ಶನ ಮಾಡಿದರೆ, ಈ ತೀರ್ಥಯಾತ್ರೆ ಫಲಪ್ರದವಾಗುತ್ತದೆ.
ಪಂಚಮುಖಿ ಶಿವ: ಈ ದೇಗುಲದ ಕುರಿತು ಮಾತನಾಡಿರುವ ಪಂಡಿತ್ ರವಿ ಶರ್ಮಾ, ಇದು ಪುರಾತನ ದೇಗುಲವಾಗಿದೆ. ಮೊಗಲ್ ಸಮಯದಲ್ಲಿ ಸರ್ವೇಶ್ವರ ದೇಗುಲಕ್ಕೆ ಹಾನಿ ಮಾಡಲಾಯಿತು. ಬಳಿಕ ಅಜ್ಮೀರ ಆಳುತ್ತಿದ್ದ ಮರಾಠರೂ ಇದರ ಜೀರ್ಣೋದ್ದಾರ ಮಾಡಿದರು. ಬಳಿಕ ಪಂಚಮುಖಿ ಶಿವಲಿಂಗ ನಿರ್ಮಾಣ ಮಾಡಿದರು. ಕ್ರಿ.ಶ 1100ರಲ್ಲಿ ಚೌಹಾಣ್ ಅರ್ನೋರಾಜ್ ಈ ದೇಗುಲ ನಿರ್ಮಾಣ ಮಾಡಿದ.
ಬೇಸಿಗೆಯಲ್ಲಿ ತಣ್ಣಗೆ, ಚಳಿಗಾಲದಲ್ಲಿ ಬೆಚ್ಚಗಿರುವ ದೇಗುಲ: ನೆಲದ ಮಟ್ಟದಲ್ಲಿಂದ 10 ಅಡಿ ಕೆಳಗೆ ಇರುವ ಈ ದೇಗುಲ ಬೇಸಿಗೆಯಲ್ಲಿ ತಣ್ಣಗೆ ಮತ್ತು ಚಳಿಗಾಲದಲ್ಲಿ ಬೆಚ್ಚಗೆ ಇರುತ್ತದೆ. ಕೇವಲ ಪುಷ್ಕರದ ಜನರಲ್ಲಿ ಮಾತ್ರವಲ್ಲ, ಇತರ ಯಾತ್ರಿಕರಲ್ಲಿ ಈ ದೇಗುಲದ ಬಗ್ಗೆ ಒಂದು ನಂಬಿಕೆ ಇದೆ. ನಿತ್ಯ ಈ ದೇಗುಲದಲ್ಲಿ ಆರಾಧನೆ ನಡೆಯುತ್ತದೆ. ಶ್ರಾವಣದಲ್ಲಿ ವಿಶೇಷ ಪೂಜೆ, ಅಭಿಷೇಕ ಮಾಡಲಾಗುತ್ತಿದೆ. ಜೊತೆಗೆ ನಿತ್ಯ ಆಭರಣಗಳಿಂದ ಶಿವನ ಅಲಂಕಾರ ನಡೆಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಅಂಬಾಭವಾನಿ ದೇವಿಗೆ ₹20, 50, 100, 200, 500 ನೋಟುಗಳಿಂದ ಅಲಂಕಾರ: ವಿಡಿಯೋ